Adipurush Collection: ಸೋಮವಾರ ಮುಗ್ಗರಿಸಿತು ‘ಆದಿಪುರುಷ್​’ ಕಲೆಕ್ಷನ್​; ನೆಗೆಟಿವ್​ ವಿಮರ್ಶೆಗೆ ಪ್ರಭಾಸ್​ ಸಿನಿಮಾ ತತ್ತರ

|

Updated on: Jun 20, 2023 | 11:45 AM

Adipurush Movie Collection: ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ‘ಆದಿಪುರುಷ್​’ ಸಿನಿಮಾದ ಸೋಮವಾರದ (ಜೂನ್​ 19) ಗಳಿಕೆಯನ್ನು ‘ಪತನ’ ಎಂದು ಬಣ್ಣಿಸಿದ್ದಾರೆ. ಈ ಚಿತ್ರದ ಕಲೆಕ್ಷನ್​ನಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಆಗುತ್ತಿದೆ.

Adipurush Collection: ಸೋಮವಾರ ಮುಗ್ಗರಿಸಿತು ‘ಆದಿಪುರುಷ್​’ ಕಲೆಕ್ಷನ್​; ನೆಗೆಟಿವ್​ ವಿಮರ್ಶೆಗೆ ಪ್ರಭಾಸ್​ ಸಿನಿಮಾ ತತ್ತರ
ಪ್ರಭಾಸ್​
Follow us on

ಭಾರಿ ನಿರೀಕ್ಷೆ ಸೃಷ್ಟಿ ಮಾಡಿದ್ದ ‘ಆದಿಪುರುಷ್​’ (Adipurush) ಸಿನಿಮಾವನ್ನು ಜನರು ಮೆಚ್ಚಿಕೊಂಡಿಲ್ಲ. ಮೊದಲೇ ಕ್ರಿಯೇಟ್​ ಆಗಿದ್ದ ಹೈಪ್​ನ ಕಾರಣಕ್ಕಾಗಿ ಮೂರು ದಿನಗಳ ಕಾಲ ಹೇಗೋ ಒಂದಷ್ಟು ಕಲೆಕ್ಷನ್​ ಆಯಿತು. ಆದರೆ ನಿಜವಾದ ಪರೀಕ್ಷೆ ಎದುರಾಗಿದ್ದು ಸೋಮವಾರ. ಯಾವುದೇ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಪಾಸ್​ ಆದರೆ ನಂತರದ ದಿನಗಳ ಕಲೆಕ್ಷನ್​ (Adipurush Collection) ಕೂಡ ಚನ್ನಾಗಿ ಆಗುತ್ತದೆ. ಆದರೆ ‘ಆದಿಪುರುಷ್​’ ತಂಡಕ್ಕೆ ಸೋಮವಾರ (ಜೂನ್​ 19) ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಆಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್​ ಇನ್ನಷ್ಟು ಕುಸಿಯುವ ಮುನ್ಸೂಚನೆ ಸಿಕ್ಕಿದೆ. ಪ್ರಭಾಸ್​ ಅವರು ಈ ಸಿನಿಮಾದಿಂದ ಮುಖಭಂಗ ಎದುರಿಸುವಂತಾಗಿದೆ. ನಿರ್ದೇಶಕ ಓಂ ರಾವತ್​ (Om Raut) ಅವರನ್ನು ಪ್ರೇಕ್ಷಕರು ಟ್ರೋಲ್​ ಮಾಡುತ್ತಿದ್ದಾರೆ.

ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ‘ಆದಿಪುರುಷ್​’ ಸಿನಿಮಾದ ಸೋಮವಾರದ ಗಳಿಕೆಯನ್ನು ‘ಪತನ’ ಎಂದು ಬಣ್ಣಿಸಿದ್ದಾರೆ. ಅವರು ಹೇಳಿರುವುದು ಹಿಂದಿ ವರ್ಷನ್​ನ ಕಲೆಕ್ಷನ್​ ಬಗ್ಗೆ ಮಾತ್ರ. ಮೂಲಗಳ ಪ್ರಕಾರ ಈ ಚಿತ್ರ ಸೋಮವಾರ ಕೇವಲ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂಲಗಳ ಪ್ರಕಾರ ಮೂರು ದಿನಕ್ಕೆ ಈ ಸಿನಿಮಾದ ಎಲ್ಲ ಭಾಷೆಯ ವರ್ಷನ್​ನಿಂದ ವಿಶ್ವಾದ್ಯಂತ 340 ಕೋಟಿ ರೂಪಾಯಿ ಗಳಿಕೆ ಆಗಿದೆ. ಆದರೆ ಸೋಮವಾರದ ಬಳಿಕ ಗಳಿಕೆಯಲ್ಲಿ ಗಣನೀಯ ಕುಸಿತ ಆಗುತ್ತಿದೆ.

ರಾಮಾಯಣವನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ಸಿದ್ಧವಾಗಿದೆ. ಆದರೆ ಈ ಸಿನಿಮಾ ಮೂಡಿಬಂದಿರುವ ಶೈಲಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಸಾಕಷ್ಟು ಟ್ರೋಲ್​ಗಳು ಶುರುವಾದವು. ಮೂರು ದಿನ ಕಳೆದರೂ ಚಿತ್ರದ ಬಗೆಗಿನ ನೆಗೆಟಿವ್​ ವಿಮರ್ಶೆ ನಿಂತಿಲ್ಲ. ಪ್ರತಿಯೊಂದು ವಿಚಾರವನ್ನೂ ಇಟ್ಟುಕೊಂಡು ಜನರು ಟೀಕೆ ಮಾಡುತ್ತಿದ್ದಾರೆ. ಇದನ್ನೆಲ್ಲ ಕೇಳಿ ಅನೇಕರು ಈ ಮೊದಲೇ ಬುಕ್​ ಮಾಡಿದ್ದ ಟಿಕೆಟ್​ಗಳನ್ನು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ. ಈ ಎಲ್ಲ ಘಟನೆಗಳು ‘ಆದಿಪುರುಷ್​’ ಚಿತ್ರದ ಹಿನ್ನಡೆಗೆ ಕಾರಣ ಆಗಿವೆ.

ಇದನ್ನೂ ಓದಿ: Adipurush: ‘ಆಂಜನೇಯನಿಗೆ ಇಂಥ ಸೀನ್​ ತೋರಿಸಿಬಿಟ್ರಲ್ಲೋ’: ‘ಆದಿಪುರುಷ್​’ ಚಿತ್ರದ ಗ್ಲಾಮರ್​ ಬಗ್ಗೆ ಜನರ ಟೀಕೆ

ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ ನಟಿಸಿದ್ದಾರೆ. ಸೈಫ್​ ಅಲಿ ಖಾನ್​ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ದೇವದತ್ತ ನಾಗೆ ಅವರು ಆಂಜನೇಯನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್​ ಅಭಿನಯಿಸಿದ್ದಾರೆ. ಸನ್ನಿ ಸಿಂಗ್​ ಅವರು ಲಕ್ಷ್ಮಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಭೀಷಣನ ಪತ್ನಿಯ ಪಾತ್ರವನ್ನು ಮರಾಠಿ ನಟಿ ತೃಪ್ತಿ ತೋರಡ್ಮಲ್​ ಮಾಡಿದ್ದಾರೆ. ಅವರು ಒಂದು ದೃಶ್ಯದಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿರುವುದಕ್ಕೂ ಟೀಕೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.