ಒಂದು ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್​; ಅಕ್ಷಯ್ ಕುಮಾರ್ ರಿಯಾಕ್ಷನ್ ಹೇಗಿತ್ತು?

| Updated By: ರಾಜೇಶ್ ದುಗ್ಗುಮನೆ

Updated on: Mar 27, 2024 | 12:50 PM

‘ಆಡುಜೀವಿತಂ’ ಸಿನಿಮಾದ ಮಾತುಕತೆ ನಡೆದಿದ್ದು 2008ರಲ್ಲಿ. ಸಿನಿಮಾ ಶೂಟಿಂಗ್ ಶುರುವಾಗಿದ್ದು 2018ರಲ್ಲಿ. ಈ ಚಿತ್ರ ರಿಲೀಸ್ ಆಗುತ್ತಿರುವುದು 2024ರಲ್ಲಿ. ಪೃಥ್ವಿರಾಜ್ ಅವರ ಕಮಿಟ್​ಮೆಂಟ್ ನೋಡಿ ಅಕ್ಷಯ್ ಕುಮಾರ್ ನಿಬ್ಬೆರಗಾಗಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ.

ಒಂದು ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್​; ಅಕ್ಷಯ್ ಕುಮಾರ್ ರಿಯಾಕ್ಷನ್ ಹೇಗಿತ್ತು?
ಅಕ್ಷಯ್-ಪೃಥ್ವಿರಾಜ್
Follow us on

ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು ಕೇವಲ ಮಲಯಾಳಂ ಮಾತ್ರವಲ್ಲದೆ ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅಲಿ ಅಬ್ಬಾಸ್ ಜಫರ್ ನಿರ್ದೇಶನದ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದು, ಇದರಲ್ಲಿ ಪೃಥ್ವಿರಾಜ್ ಕೂಡ ಬಣ್ಣ ಹಚ್ಚಿದ್ದಾರೆ. ಅವರು ಖಡಕ್ ವಿಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ ಸಿನಿಮಾ ಮಾರ್ಚ್ 28ರಂದು ಬಿಡುಗಡೆ ಆದರೆ, ‘ಬಡೇ ಮಿಯಾ ಚೋಟೆ ಮಿಯಾ’ ಏಪ್ರಿಲ್ 10ಕ್ಕೆ ರಿಲೀಸ್ ಆಗುತ್ತಿದೆ. ‘ಆಡುಜೀವಿತಂ’ ಚಿತ್ರದ ಮೇಲೆ ಪೃಥ್ವಿರಾಜ್​ಗೆ ಇರುವ ಕಮಿಟ್​ಮೆಂಟ್ ಬಗ್ಗೆ ಅಕ್ಷಯ್ ಮಾತನಾಡಿದ್ದಾರೆ.

‘ಆಡುಜೀವಿತಂ’ ಸಿನಿಮಾದ ಮಾತುಕತೆ ನಡೆದಿದ್ದು 2008ರಲ್ಲಿ. ಸಿನಿಮಾ ಶೂಟಿಂಗ್ ಶುರುವಾಗಿದ್ದು 2018ರಲ್ಲಿ. ಈ ಚಿತ್ರ ರಿಲೀಸ್ ಆಗುತ್ತಿರುವುದು 2024ರಲ್ಲಿ. ಪೃಥ್ವಿರಾಜ್ ಅವರ ಕಮಿಟ್​ಮೆಂಟ್ ನೋಡಿ ಅಕ್ಷಯ್ ಕುಮಾರ್ ನಿಬ್ಬೆರಗಾಗಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ‘ಬಡೇ ಮಿಯಾ ಚೋಟೆ ಮಿಯಾ’ದಲ್ಲಿ ಪೃಥ್ವಿರಾಜ್ ಪಾತ್ರದ ಕುರಿತೂ ವಿವರಿಸಿದ್ದಾರೆ.

‘ನಮಗಿಂತಲೂ ಪೃಥ್ವಿರಾಜ್​ಗೆ ಹೆಚ್ಚು ಸಂಭಾಷಣೆ ಇದೆ. ಅವರ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಫನ್ ನೀಡಿದೆ. ಅವರಿಂದ ಸಾಕಷ್ಟು ನಟನೆ ಕಲಿತೆ ಎಂದಿದ್ದಾರೆ ಅಕ್ಷಯ್ ಕುಮಾರ್. ‘ನಿಮಗಿಂತ ನನಗೆ ಹೆಚ್ಚು ಸಿನಿಮಾ ಇದೆ ಎಂದ ಮಾತ್ರಕ್ಕೆ ನಾನು ಉತ್ತಮ ಎಂದಲ್ಲ. ನನಗಿಂತ ನೀವು ಇನ್ನೂ ಉತ್ತಮ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

‘ನಾನು ಸಾಮಾನ್ಯವಾಗಿ ಸಿನಿಮಾಗಳ ವಿಶೇಷ ಶೋಗೆ ತೆರಳಲ್ಲ. ಆದರೆ, ಪೃಥ್ವಿರಾಜ್ ಅವರು ಆಡುಜೀವಿತಂ ಸಿನಿಮಾದ ಟ್ರೇಲರ್ ತೋರಿಸಿದ ಬಳಿಕ ನನ್ನ ಮನಸ್ಸು ಬದಲಾಗಿದೆ. ವಿಶೇಷ ಶೋಗೆ ನನ್ನನ್ನೂ ಕರೆಯುವಂತೆ ಹೇಳಿದ್ದೇನೆ. ನನಗೆ ಈ ಸಿನಿಮಾ ವಿಶೇಷ ಎನಿಸುತ್ತಿದೆ. ಎಲ್ಲರೂ ಸಿನಿಮಾ ನೋಡಬೇಕು’ ಎಂದಿದ್ದಾರೆ ಅವರು.

‘ಈ ಚಿತ್ರಕ್ಕಾಗಿ 2-3 ವರ್ಷ ವ್ಯಯಿಸಿರಬಹುದು ಅಲ್ಲವೇ’ ಎಂದು ಅಕ್ಷಯ್ ಕೇಳಿದರು. ಇದಕ್ಕೆ ಪೃಥ್ವಿರಾಜ್ 16 ವರ್ಷ ಎಂದು ಉತ್ತರಿಸಿದರು. ಇದನ್ನು ಕೇಳಿ ಅಕ್ಷಯ್ ನಿಜಕ್ಕೂ ಶಾಕ್ ಆದರು.  ‘16 ವರ್ಷಗಳವರೆಗೆ ಏನು ಮಾಡಿದಿರಿ? ಇಲ್ಲಿ ಸಿನಿಮಾಗಾಗಿ 16 ತಿಂಗಳು ಕೆಲಸ ಮಾಡೋಕೆ ಸಾಧ್ಯವಿಲ್ಲ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾ ಕೆಲಸಗಳನ್ನು ಬಹುಬೇಗ ಮುಗಿಸುತ್ತಾರೆ. ಈ ಕಾರಣಕ್ಕೆ ಅವರು ಸಿನಿಮಾ ಸೋತಿದೆ ಎನ್ನುವ ಮಾತೂ ಇದೆ.

ಇದನ್ನೂ ಓದಿ: ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಕರ್ನಾಟಕದಲ್ಲಿ ಬಿಡುಗಡೆ ಆಗಲಿದೆ ‘ಆಡುಜೀವಿತಂ’ ಚಿತ್ರ

‘ಆಡುಜೀವಿತಂ’ ಸಿನಿಮಾ ಮಾಡಬೇಕು ಎಂದು ನಿರ್ದೇಶಕ ಬ್ಲೆಸ್ಸಿ ನಿರ್ಧರಿಸಿದ್ದು 2008-09ರಲ್ಲಿ. ಆ ಬಳಿಕ ಪೃಥ್ವಿರಾಜ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದರು. ಸಿನಿಮಾದ ಸ್ಕ್ರಿಪ್ಟ್ ರೆಡಿ ಮಾಡಲು 6 ವರ್ಷಗಳೇ ಬೇಕಾದವು.  ಆದರೂ ಪೃಥ್ವಿರಜ್ ಸಿನಿಮಾ ತೊರೆಯಲಿಲ್ಲ. 2018ರಲ್ಲಿ ಸಿನಿಮಾ ಶೂಟಿಂಗ್ ಶುರುವಾಯಿತು. 2020ರಲ್ಲಿ ಕೊವಿಡ್ ಕಾರಣದಿಂದ ಸಿನಿಮಾ ಶೂಟಿಂಗ್ ಒಂದೂವರೆ ವರ್ಷ ವಿಳಂಬ ಆಯಿತು. ಈಗ ಸಿನಿಮಾ ಬಿಡುಗಡೆ ಆಗುತ್ತಿದೆ. ಮಲಯಾಳಂ ಮಾತ್ರವಲ್ಲದೆ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ