‘ರಾಮ ಮಂದಿರದ ಬಗ್ಗೆ ಮಾತನಾಡಿದ್ದನ್ನು ಸಹಿಸದೇ ಈ ರೀತಿ ಮಾಡಿದ್ದಾರೆ’; ಕಿಡಿಕಾರಿದ ಅನುಪಮ್ ಖೇರ್

ಅಯೋಧ್ಯೆಯಲ್ಲಿ 'ಶ್ರೀ ರಾಮ್ ಭೂಮಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಹಿರಿಯ ನಟ ಅನುಪಮ್ ಖೇರ್ ಅವರು ರಾಮ್ ಮಂದಿರದ ದೇಣಿಗೆ ಕಳ್ಳತನದ ವಿವಾದದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೆಲವು ವ್ಯಕ್ತಿಗಳ ತಪ್ಪು ಕೆಲಸಗಳಿಂದ ಮಂದಿರದ ಪವಿತ್ರತೆಗೆ ಧಕ್ಕೆ ಬರುವುದಿಲ್ಲ ಎಂದಿರುವ ಅವರು, ತಪ್ಪು ಮಾಡಿದ ಕಳ್ಳರನ್ನು ಹಿಡಿದು ಕಠಿಣ ಶಿಕ್ಷೆ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.

‘ರಾಮ ಮಂದಿರದ ಬಗ್ಗೆ ಮಾತನಾಡಿದ್ದನ್ನು ಸಹಿಸದೇ ಈ ರೀತಿ ಮಾಡಿದ್ದಾರೆ’; ಕಿಡಿಕಾರಿದ ಅನುಪಮ್ ಖೇರ್
ಅನುಪಮ್ ಖೇರ್

Updated on: Jul 14, 2026 | 2:33 PM

ಮುಖ್ಯಾಂಶಗಳು

  • 'ಶ್ರೀ ರಾಮ್ ಭೂಮಿ' ಶೂಟಿಂಗ್‌ನಲ್ಲಿ ಅನುಪಮ್ ಖೇರ್ ಬ್ಯುಸಿ
  • ಅಯೋಧ್ಯೆಯಿಂದಲೇ ಹೊರಬಂತು ನಟನ ಮಹತ್ವದ ಹೇಳಿಕೆ
  • ರಾಮ್ ಮಂದಿರದ ದೇಣಿಗೆ ವಿವಾದದ ಕುರಿತು ಅನುಪಮ್ ಖೇರ್ ಮಾತು

ಬಾಲಿವುಡ್ ಹಿರಿಯ ನಟರಾದ ಅನುಪಮ್ ಖೇರ್ (Anupam Kher) ಮತ್ತು ನಸೀರುದ್ದೀನ್ ಶಾ ನಡುವಿನ ವೈಮನಸ್ಸಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ರಾಜಕೀಯ ವಿಚಾರವಾಗಿ ನಸೀರುದ್ದೀನ್ ಶಾ ಅವರು ಅನುಪಮ್ ಅವರನ್ನು ಕೋಡಂಗಿ ಎಂದು ಕರೆದಿದ್ದರು. ಈ ವಿಡಿಯೋ ವೈರಲ್ ಆಗಿದ್ದಕ್ಕೆ ಅನುಪಮ್ ಖೇರ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮಿಬ್ಬರ ನಡುವಿನ ಇಂದಿನ ಸಂಬಂಧ ಹೇಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಹಳೆಯ ವಿಡಿಯೋ ವೈರಲ್ ಆದದ್ದಕ್ಕೆ ಅನುಪಮ್ ಬೇಸರ:
ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ಅನುಪಮ್ ಖೇರ್ ಅವರು ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚೆಗೆ ರಾಮ್ ಮಂದಿರದ ದೇಣಿಗೆ ವಿವಾದದ ಬಗ್ಗೆ ತಾವು ಮಾತನಾಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ‘ನಾನು ರಾಮ್ ಮಂದಿರದ ಬಗ್ಗೆ ಆಡಿದ ಮಾತುಗಳು ಕೆಲವು ಜನರಿಗೆ ಇಷ್ಟವಾಗಲಿಲ್ಲ. ನನ್ನನ್ನು ಗುರಿಯಾಗಿಸಲು ಅವರಿಗೆ ಬೇರೆ ಏನೂ ಸಿಗದಿದ್ದಾಗ, ಈ 6 ವರ್ಷಗಳ ಹಳೆಯ ವಿಡಿಯೋವನ್ನು ಹುಡುಕಿ ವೈರಲ್ ಮಾಡಿದ್ದಾರೆ’ ಎಂದು ಅನುಪಮ್ ಹೇಳಿದ್ದಾರೆ.

ಇಬ್ಬರ ನಡುವೆ ಈಗಿನ ಸಂಬಂಧ ಹೇಗಿದೆ?

ಹಳೇ ವಿವಾದವನ್ನು ತಾವು ಈಗಾಗಲೇ ಮರೆತಿರುವುದಾಗಿ ಅನುಪಮ್ ಖೇರ್ ತಿಳಿಸಿದ್ದಾರೆ. ‘ನಿಜ ಹೇಳಬೇಕೆಂದರೆ ನಾನು ಮತ್ತು ನಸೀರುದ್ದೀನ್ ಶಾ ಈಗ ಒಳ್ಳೆಯ ಸ್ನೇಹಿತರು. ನಾವಿಬ್ಬರು ಇತ್ತೀಚೆಗೆ ಭೇಟಿಯಾಗಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಗೌರವ ಹಂಚಿಕೊಂಡಿದ್ದೇವೆ’ ಎಂದು ಅನುಪಮ್ ಸ್ಪಷ್ಟಪಡಿಸಿದ್ದಾರೆ. 2025ರಲ್ಲೇ ನಸೀರುದ್ದೀನ್ ಶಾ ಅವರು ಖುದ್ದಾಗಿ ಭೇಟಿಯಾಗಿ ತಮಗೆ ಕ್ಷಮೆ ಕೇಳಿದ್ದರು ಎಂಬ ವಿಷಯವನ್ನೂ ಅವರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ಯಲ್ಲಿ ಅನುಪಮ್ ಖೇರ್, ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟನೆ

ರಾಮ್ ಮಂದಿರ ವಿವಾದದ ಬಗ್ಗೆ ಮರು ಮಾತು

ಪ್ರಸ್ತುತ ಅಯೋಧ್ಯೆಯಲ್ಲಿ ‘ಶ್ರೀ ರಾಮ್ ಭೂಮಿ’ ಚಿತ್ರದ ಶೂಟಿಂಗ್‌ನಲ್ಲಿ ಅನುಪಮ್ ಬ್ಯುಸಿಯಾಗಿದ್ದಾರೆ. ದೇಣಿಗೆ ಕಳ್ಳತನದ ಬಗ್ಗೆ ಮಾತನಾಡಿದ ಅವರು, ‘ಕೆಲವು ಜನರ ತಪ್ಪು ಕೆಲಸಗಳಿಂದ ಮಂದಿರದ ಪವಿತ್ರತೆಗೆ ಧಕ್ಕೆ ಬರುವುದಿಲ್ಲ. ನಮ್ಮ ಸನಾತನ ಧರ್ಮ ಯುಗ ಯುಗಗಳಿಂದಲೂ ಇದೆ. ಆದರೆ ತಪ್ಪು ಮಾಡಿದ ಕಳ್ಳರನ್ನು ಹಿಡಿದು ಕಠಿಣ ಶಿಕ್ಷೆ ನೀಡಲೇಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us