Nitesh Tiwari: ‘ರಾಮಾಯಣದ ಚಿತ್ರದಿಂದ ನಾನು ಯಾರಿಗೂ ನೋವುಂಟು ಮಾಡಲ್ಲ’: ಆತ್ಮವಿಶ್ವಾಸದಿಂದ ಹೇಳಿದ ನಿರ್ದೇಶಕ ನಿತೇಶ್​​ ತಿವಾರಿ

Ramayana: ನಿತೇಶ್​ ತಿವಾರಿ ಅವರ ಮುಂದೆ ದೊಡ್ಡ ಸವಾಲು ಇದೆ. ಎಲ್ಲ ವರ್ಗದ ಜನರನ್ನು ಮೆಚ್ಚಿಸುವ ರೀತಿಯಲ್ಲಿ ರಾಮಾಯಣವನ್ನು ತೆರೆಗೆ ತರಲು ಅವರು ಶ್ರಮಿಸಿಬೇಕಿದೆ.

Nitesh Tiwari: ‘ರಾಮಾಯಣದ ಚಿತ್ರದಿಂದ ನಾನು ಯಾರಿಗೂ ನೋವುಂಟು ಮಾಡಲ್ಲ’: ಆತ್ಮವಿಶ್ವಾಸದಿಂದ ಹೇಳಿದ ನಿರ್ದೇಶಕ ನಿತೇಶ್​​ ತಿವಾರಿ
ನಿತೇಶ್​ ತಿವಾರಿ

Updated on: Jul 14, 2023 | 1:18 PM

ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾ (Adipurush) ನಿರೀಕ್ಷಿತ ಮಟ್ಟದಲ್ಲಿ ಜನಮನ ಸೆಳೆಯಲು ವಿಫಲವಾಯಿತು. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಕ್ಕಿಂತ ಟ್ರೋಲ್​ ಮಾಡಿದ್ದೇ ಜಾಸ್ತಿ. ರಾಮಾಯಣದ (Ramayana) ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ಮೂಡಿಬಂದಿತ್ತು. ರಾಮಾಯಣದ ಕಥೆಯನ್ನು ನಿರ್ದೇಶಕ ಓಂ ರಾವತ್​ ಅವರು ಮನಬಂದಂತೆ ಚಿತ್ರಿಸಿದ್ದರು ಎಂಬ ಕಾರಣಕ್ಕೆ ಪ್ರೇಕ್ಷಕರು ಸಖತ್​ ಟೀಕೆ ಮಾಡಿದರು. ಈಗ ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಅವರು ಬಾಲಿವುಡ್​ನಲ್ಲಿ ಮತ್ತೆ ರಾಮಾಯಣದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಆದರೆ ಪ್ರೇಕ್ಷಕರ ಭಾವನೆಗೆ ತಾವು ನೋವು ಉಂಟುಮಾಡುವುದಿಲ್ಲ ಎಂದು ನಿತೇಶ್​ ತಿವಾರಿ ಹೇಳಿದ್ದಾರೆ.

ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದರೆ ನಿರ್ದೇಶಕರು ಬಹಳ ಕಾಳಜಿ ವಹಿಸಬೇಕಾಗುತ್ತದೆ. ಆದರೆ ‘ಆದಿಪುರುಷ್​’ ತಂಡದವರು ಬೇಜವಾಬ್ದಾರಿಯಿಂದ ಸಿನಿಮಾ ಮಾಡಿದ್ದು ಜನರಿಗೆ ಇಷ್ಟ ಆಗಲಿಲ್ಲ. ಈಗ ನಿತೇಶ್​ ತಿವಾರಿ ಅವರ ಮುಂದೆ ದೊಡ್ಡ ಸವಾಲು ಇದೆ. ಎಲ್ಲ ವರ್ಗದ ಜನರನ್ನು ಮೆಚ್ಚಿಸುವ ರೀತಿಯಲ್ಲಿ ರಾಮಾಯಣವನ್ನು ತೆರೆಗೆ ತರಲು ಅವರು ಶ್ರಮಿಸಿಬೇಕಿದೆ. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರಿಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​

‘ನನ್ನ ಸಿನಿಮಾಗಳಿಗೆ ನಾನು ಕೂಡ ಪ್ರೇಕ್ಷಕ. ನನ್ನ ಭಾವನೆಗಳಿಗೆ ನಾನು ಧಕ್ಕೆ ತರುವುದಿಲ್ಲ ಎಂದಾದರೆ ಬೇರೆಯವರ ಭಾವನೆಗೂ ನಾನು ನೋವು ಉಂಟುಮಾಡುವುದಿಲ್ಲ’ ಎಂದಿದ್ದಾರೆ ನಿತೇಶ್​ ತಿವಾರಿ. ಅವರು ನಿರ್ದೇಶನ ಮಾಡಲಿರುವ ‘ರಾಮಾಯಣ’ ಆಧಾರಿತ ಸಿನಿಮಾದಲ್ಲಿ ಯಾರು ಮುಖ್ಯ ಭೂಮಿಕೆ ನಿಭಾಯಿಸುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿಲ್ಲ. ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ರಾಮ-ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ramayan: ಮತ್ತೆ ರಾಮಾಯಣ, ಮಹಾಭಾರತದ ಕಥೆ ಇಟ್ಟುಕೊಂಡ ಸಿನಿಮಾ ಮಾಡುವ ಧೈರ್ಯ ಯಾರಿಗಿದೆ?

ಬಾಲಿವುಡ್​ನಲ್ಲಿ ನಿತೇಶ್ ತಿವಾರಿ ಅವರು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ದಂಗಲ್​’, ‘ಚಿಚೋರೆ’ ಮುಂತಾದ ಸಿನಿಮಾಗಳಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ ಈಗ ಅವರು ನಿರ್ದೇಶನ ಮಾಡಿರುವ ‘ಬವಾಲ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜುಲೈ 21ರಂದು ನೇರವಾಗಿ ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ವರುಣ್​ ಧವನ್​ ಮತ್ತು ಜಾನ್ವಿ ಕಪೂರ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us