‘ತಲೈವಿ’ ರಿಲೀಸ್​ಗೂ ಮೊದಲೇ ಕಂಗನಾ ರಣಾವತ್​ಗೆ ಬಾಂಬೆ ಹೈಕೋರ್ಟ್​ನಿಂದ ಕಹಿ ಸುದ್ದಿ

| Updated By: ರಾಜೇಶ್ ದುಗ್ಗುಮನೆ

Updated on: Sep 09, 2021 | 3:21 PM

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್​ ಗೀತ ರಚನೆಕಾರ ಜಾವೇದ್​ ಅಖ್ತರ್​ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ‘ಈ ಆರೋಪಗಳೆಲ್ಲ ಸುಳ್ಳು. ಅವರು ನನ್ನ ಮಾನ ಹರಾಜು ಹಾಕಿದ್ದಾರೆ’ ಎಂದು ಕಂಗನಾ ವಿರುದ್ಧ ಜಾವೇದ್​ ದೂರು ದಾಖಲಿಸಿದ್ದರು.

‘ತಲೈವಿ’ ರಿಲೀಸ್​ಗೂ ಮೊದಲೇ ಕಂಗನಾ ರಣಾವತ್​ಗೆ ಬಾಂಬೆ ಹೈಕೋರ್ಟ್​ನಿಂದ ಕಹಿ ಸುದ್ದಿ
ಕಂಗನಾ ರಣಾವತ್
Follow us on

ಕಂಗನಾ ರಣಾವತ್​ ನಟನೆಯ ‘ತಲೈವಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ನಾಳೆ (ಸೆ.10) ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಕಂಗನಾಗೆ ಬಾಂಬೆ ಹೈಕೋರ್ಟ್​ ಕಹಿ ಸುದ್ದಿ ನೀಡಿದೆ. ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ವಜಾ ಮಾಡುವಂತೆ ಅವರು ಬಾಂಬೆ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್​ ಗೀತ ರಚನೆಕಾರ ಜಾವೇದ್​ ಅಖ್ತರ್​ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ‘ಈ ಆರೋಪಗಳೆಲ್ಲ ಸುಳ್ಳು. ಅವರು ನನ್ನ ಮಾನ ಹರಾಜು ಹಾಕಿದ್ದಾರೆ’ ಎಂದು ಕಂಗನಾ ವಿರುದ್ಧ ಜಾವೇದ್​ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು.  ಇದನ್ನು ಕಂಗನಾ ಪ್ರಶ್ನೆ ಮಾಡಿದ್ದರು. ಅಲ್ಲದೆ, ಈ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಸೆಪ್ಟೆಂಬರ್​ 1ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರೇವತಿ ಅವರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಈ ಪ್ರಕರಣದ ಆದೇಶವನ್ನು ನೀಡಲಾಗಿದ್ದು, ಕಂಗನಾ ಅರ್ಜಿ ವಜಾಗೊಂಡಿದೆ.

ಕಂಗನಾ ರಣಾವತ್​ ಟಿವಿ ಸಂದರ್ಶನದಲ್ಲಿ ಜಾವೇದ್​ ಅಖ್ತರ್​ ಬಗ್ಗೆ ಮಾನ ಹಾನಿ ಆಗುವ ರೀತಿಯಲ್ಲಿ ಮಾತನಾಡಿದ್ದರು. ಈ ಸಂಬಂಧ ಕಳೆದ ನವೆಂಬರ್​ ತಿಂಗಳಲ್ಲಿ ಜಾವೇದ್​ ಅವರು ಅಂಧೇರಿ ಮೆಟ್ರೋಪೊಲಿಟನ್​ ಮ್ಯಾಜಿಸ್ಟ್ರೇಟ್​ನಲ್ಲಿ ದೂರು ದಾಖಲಿಸಿದ್ದರು. 2020ರ ಡಿಸೆಂಬರ್​ ತಿಂಗಳಲ್ಲಿ ಕೋರ್ಟ್​ ಈ ಪ್ರಕರಣ ಸಂಬಂಧ ಪೊಲೀಸರಿಗೆ ಆದೇಶ ಒಂದನ್ನು ನೀಡಿತ್ತು. ಜಾವೇದ್​ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಲು ನಿರ್ದೇಶಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ಕಂಗನಾಗೆ ಸಮನ್ಸ್​ ನೀಡಲಾಗಿತ್ತು.

ಸೆ.10ರಂದು ಬಿಡುಗಡೆ ಆಗುತ್ತಿರುವ ‘ತಲೈವಿ’ ಚಿತ್ರಕ್ಕೆ ಎ.ಎಲ್. ವಿಜಯ್ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಟ್ ಕರ್ಫ್ಯೂ ಮತ್ತು ಥಿಯೇಟರ್ನಲ್ಲಿ ಶೇ.50ರಷ್ಟು ನಿರ್ಬಂಧದ ನಡುವೆಯೂ ‘ತಲೈವಿ’ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: Thalaivii: ಕಂಗನಾ ಆಕ್ರೋಶದ ನಂತರ ‘ತಲೈವಿ’ಯ ಪ್ರದರ್ಶನಕ್ಕೆ PVR ಒಪ್ಪಿಗೆ; ಆದರೂ ಬಗೆಹರಿದಿಲ್ಲ ಹಿಂದಿ ಆವೃತ್ತಿಯ ಸಮಸ್ಯೆ

‘ನಿರ್ದೇಶಕರು ತಪ್ಪು ಮಾಡಿದರು ಎಂದು ನನಗನಿಸಿತು’; ‘ತಲೈವಿ’ ಬಗ್ಗೆ ಕಂಗನಾ ರಣಾವತ್​ ಅಚ್ಚರಿಯ ಹೇಳಿಕೆ