‘ಧುರಂಧರ್ 2’ ನೋಡಿದ ಬಳಿಕ ನಿರ್ದೇಶಕ ಆದಿತ್ಯ ಧಾರ್​​ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ

'ಧುರಂದರ್ 2' ಸಿನಿಮಾ ಕೇವಲ 11 ದಿನಗಳಲ್ಲಿ 1000 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಈ ಅಸಾಧಾರಣ ಯಶಸ್ಸಿಗೆ 'ದಿ ಕಾಶ್ಮೀರಿ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷವಾಗಿ ಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣ ವಿನ್ಯಾಸವನ್ನು ಕೊಂಡಾಡಿರುವ ಅವರು, ನಿರ್ದೇಶಕ ಆದಿತ್ಯ ಧಾರ್‌ಗೆ ಎಚ್ಚರಿಕೆಯಿಂದ ಇರುವಂತೆ ಅನುಭವದ ಮಾತನ್ನು ಹೇಳಿದ್ದಾರೆ.

‘ಧುರಂಧರ್ 2’ ನೋಡಿದ ಬಳಿಕ ನಿರ್ದೇಶಕ ಆದಿತ್ಯ ಧಾರ್​​ ಎಚ್ಚರಿಸಿದ ವಿವೇಕ್ ಅಗ್ನಿಹೋತ್ರಿ
ವಿವೇಕ್-ಆದಿತ್ಯಧಾರ್
Edited By:

Updated on: Mar 30, 2026 | 12:26 PM

‘ಧುರಂದರ್ 2’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಚಿತ್ರವು ಕೇಲವ 11 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ ಎಂದೇ ಹೇಳಬಹುದು. ಈ ಚಿತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಚಿತ್ರ ಇಷ್ಟ ಆಗಿದೆ. ಈಗ ರಣವೀರ್ ಸಿಂಗ್ ಅವರ ಸಿನಿಮಾ ನೋಡಿದ ‘ದಿ ಕಾಶ್ಮೀರಿ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಜೋತ್ರಿ ಅವರು ಆದಿತ್ಯ ಧಾರ್ ಅವರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿವೇಕ್ ಅವರು ‘ದಿ ಕಾಶ್ಮೀರಿ ಫೈಲ್ಸ್’ ಹೆಸರಿನ ಸಿನಿಮಾ ಮಾಡಿದವರು. ಈ ಸಿನಿಮಾ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕುರಿತಂತೆ ಇತ್ತು. ಇನ್ನು, ಆದಿತ್ಯ ಧಾರ್ ಕೂಡ ಕಾಶ್ಮೀರಿ ಪಂಡಿತರ ಹಿನ್ನೆಲೆ ಹೊಂದಿರುವವರು. ಹೀಗಿರುವಾಗ ಅವರಿಗೆ ಎಚ್ಚರಿಕೆ ರವಾನೆ ಆಗಿದ್ದೇಕೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು. ಅದಕ್ಕೂ ಉತ್ತರ ಇದೆ. ಅವರು ಸಿನಿಮಾ ಹೊಗಳಿದ್ದಾರೆ ಜೊತೆಗೆ ಎಚ್ಚರಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ.

‘ಎಲ್ಲರೂ ಅಸಾಧಾರಣ ಕೆಲಸ ಮಾಡಿದ್ದಾರೆ. ಆದರೆ ಚಿತ್ರದ ಛಾಯಾಗ್ರಹಣ ಹಾಗೂ ನಿರ್ಮಾಣ ವಿನ್ಯಾಸ ಸಿನಿಮಾ ಮತ್ತೊಂದು ಹಂತಕ್ಕೆ ಹೋಯಿತು. ಸಿನಿಮಾದಲ್ಲಿ, ಕ್ಯಾಮೆರಾ ಮತ್ತು ನಿರ್ಮಾಣ ವಿನ್ಯಾಸ ಪರಸ್ಪರ ಸಂಬಂಧ ಹೊಂದಿವೆ. ಎರಡೂ ಸಂಪೂರ್ಣ ಸಾಮರಸ್ಯವಿಲ್ಲದಿದ್ದರೆ, ಒಂದು ಚಿತ್ರವು ಒಂದು ಮೇರುಕೃತಿಯ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಧುರಂಧರ್‌ನಲ್ಲಿ ಅದನ್ನು ಕಾಣಬಹುದು’ ಎಂದು ಹೇಳಿದ್ದಾರೆ ವಿವೇಕ್ ಅಗ್ನಿಹೋತ್ರಿ.

ಇದನ್ನೂ ಓದಿ: ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧಾರ್ ಹಾಗೂ ಪತ್ನಿ ಯಾಮಿ ಪೈಕಿ ಯಾರು ಹೆಚ್ಚು ಶ್ರೀಮಂತರು?

ಆದಿತ್ಯ ಅವರನ್ನು ಎಚ್ಚರಿಸುವ ಮೂಲಕ ಅವರು ತಮ್ಮ ಪೋಸ್ಟ್ ಕೊನೆ ಮಾಡಿದ್ದಾರೆ. ‘ಅನುಭವದಿಂದ ಬಂದ ಒಂದು ಅಪೇಕ್ಷಿಸದ ಮಾತು: ನೀವು ಚುರುಕಾಗಿದ್ದೀರಿ. ನಿಮ್ಮ ದಾರಿ ನಮಗೆ ಗೊತ್ತು. ಆದರೆ, ವ್ಯವಸ್ಥೆಯ ಬಗ್ಗೆ ಗಮನವಿರಲಿ, ಅದು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದೂ ಆಗಿರಬಹುದು’ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us