ಭಾರತದ ಅತಿ ದೊಡ್ಡ ಬಜೆಟ್ನ ಸಿನಿಮಾ ‘ರಾಮಾಯಣ’ (Ramayana). ಇದರ ಸಣ್ಣ ಗ್ಲಿಂಪ್ಸ್ ವಿಡಿಯೋ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ನಟ ಯಶ್, ರಾವಣನ ಪಾತ್ರದಲ್ಲಿ ನಟಿಸಿದ್ದು, ಗ್ಲಿಂಪ್ಸ್ನಲ್ಲಿ ಯಶ್ ಅವರ ಪಾತ್ರದ ತೀರ ಸಣ್ಣ ಝಲಕ್ ಅನ್ನು ನೀಡಲಾಗಿದೆ. ಈ ಸಿನಿಮಾನಲ್ಲಿ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ರಾವಣನನಾಗಿ ಯಶ್ ಇನ್ನೂ ಹಲವು ಪ್ರತಿಭಾವಂತರು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಆದರೆ ಹಿಂದಿಯ ಪ್ರತಿಭಾವಂತ ನಟರೊಬ್ಬರು, ಯಶ್ ಅವರ ಕಾರಣದಿಂದಾಗಿ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡರಂತೆ.
ಜಯದೀಪ್ ಅಲ್ಹಾವತ್ ಎಂದರೆ ದಕ್ಷಿಣದ ಸಿನಿಮಾ ಪ್ರೇಮಿಗಳಿಗೆ ಥಟ್ಟನೆ ಗೊತ್ತಾಗುವುದಿಲ್ಲವೇನೋ ಆದರೆ ‘ಪಾತಾಳ್ ಲೋಕ್’ನ ಪೊಲೀಸ್ ಎಂದರೆ ಯಾರಿಗಾದರೂ ಗೊತ್ತಾಗುತ್ತದೆ. ಅಷ್ಟು ಅದ್ಭುತವಾದ ಅಭಿನಯವನ್ನು ಜಯದೀಪ್ ಆ ವೆಬ್ ಸರಣಿಯಲ್ಲಿ ನೀಡಿದ್ದರು. ಅದಾದ ಬಳಿಕ ‘ಥ್ರೀ ಆಫ್ ಅಸ್’ ಸಿನಿಮಾದಲ್ಲಿಯೂ ಅವರ ನಟನೆ ಅದ್ಭುತವಾಗಿತ್ತು. 25 ವರ್ಷಕ್ಕೂ ಹೆಚ್ಚಿನ ಸಮಯದಿಂದಲೂ ಚಿತ್ರರಂಗದಲ್ಲಿರುವ ಜಯದೀಪ್ ಅವರ ಪ್ರತಿಭೆಯನ್ನು ಈಗ ಗುರುತಿಸಲಾಗುತ್ತಿದೆ.
ಇತ್ತೀಚೆಗೆ ಜಯದೀಪ್ ಅವರಿಗೆ ಬಹಳ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿವೆ. ಭಾರತದ ಅತಿ ಹೆಚ್ಚು ಬಜೆಟ್ನ ಸಿನಿಮಾ ‘ರಾಮಾಯಣ’ದಲ್ಲಿಯೂ ಜಯದೀಪ್ ಅವರಿಗೆ ಒಂದೊಳ್ಳೆ ಪಾತ್ರದ ಅವಕಾಶ ಸಿಕ್ಕಿತ್ತಂತೆ. ಆದರೆ ಕನ್ನಡದ ನಟ ಯಶ್ ಅವರ ಕಾರಣಕ್ಕೆ ಅವಕಾಶ ಜಯದೀಪ್ ಅವರ ಕೈತಪ್ಪಿ ಹೋಯ್ತು. ಜಯದೀಪ್ ಅವರಿಗೆ ವಿಭೀಷಣನ ಪಾತ್ರದಲ್ಲಿ ನಟಿಸುವ ಅವಕಾಶ ನೀಡಲಾಗಿತ್ತಂತೆ. ರಾವಣನ ಸಹೋದರನ ಪಾತ್ರ ಅದು. ಆದರೆ ಆ ಪಾತ್ರಕ್ಕೆ ಅವರಿಗೆ ಡೇಟ್ಸ್ ಹೊಂದಾಣಿಕೆ ಆಗಲಿಲ್ಲವಂತೆ.
ಇದನ್ನೂ ಓದಿ:ರಾಮಾಯಣ ಗ್ಲಿಂಪ್ಸ್: ಯಶ್ ಕನ್ನಡ ಪ್ರೇಮಕ್ಕೆ ಜೈ ಎಂದ ಅಭಿಮಾನಿಗಳು
ಅವರೇ ಹೇಳಿರುವಂತೆ, ‘ವಿಭೀಷಣನ ಪಾತ್ರಕ್ಕೆ ನನ್ನ ಹಾಗೂ ರಾವಣನ ಪಾತ್ರ ಮಾಡುವ ನಟನ ಡೇಟ್ಸ್ ಒಂದೇ ಸಮಯದಲ್ಲಿ ಸಿಗಬೇಕಿತ್ತು. ಆದರೆ ರಾವಣನ ಪಾತ್ರ ಮಾಡಲಿದ್ದ ಯಶ್ ಹಾಗೂ ನನ್ನ ಡೇಟ್ಸ್ ಒಂದೇ ಸಮಯದಲ್ಲಿ ಸಿಂಕ್ ಆಗದ ಕಾರಣ ಆ ಸಿನಿಮಾನಲ್ಲಿ ನನಗೆ ನಟಿಸಲು ಸಾಧ್ಯವಾಗಲಿಲ್ಲ. ನನ್ನ ಪಾತ್ರಕ್ಕಿಂತಲೂ ರಾವಣನ ಪಾತ್ರ ಮಾಡುವ ನಟನ ಡೇಟ್ಸ್ಗಳು ಮುಖ್ಯ ಎನಿಸಿದವು, ಹಾಗಾಗಿ ಅವರು ರಾವಣನ ಪಾತ್ರ ಮಾಡಲಿರುವ ನಟನ ಡೇಟ್ಸ್ ಜೊತೆಗೆ ಮ್ಯಾಚ್ ಡೇಟ್ಸ್ ಮ್ಯಾಚ್ ಆಗುವ ನಟನನ್ನು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದಿದ್ದಾರೆ.
ಜಯದೀಪ್, ಬಹಳ ಒಳ್ಳೆಯ ನಟ. ಈಗಾಗಲೇ ಹಲವು ಅತ್ಯುತ್ತಮ ಪಾತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಂಡಿದ್ದಾರೆ. ಯಶ್ ಹಾಗೂ ಜಯದೀಪ್ ಒಟ್ಟಿಗೆ ಒಂದೇ ದೃಶ್ಯದಲ್ಲಿ ನಟಿಸಿದ್ದರೆ ಒಂದೊಳ್ಳೆ ನಟನಾ ಸ್ಪರ್ಧೆಯನ್ನು ನೋಡಬಹುದಿತ್ತು. ಆದರೆ ಚಿತ್ರತಂಡ ಒಳ್ಳೆಯ ನಟನಿಗೇ ಈ ಪಾತ್ರವನ್ನು ಕೊಟ್ಟಿರುವ ಸಾಧ್ಯತೆ ಇದೆ. ರಾವಣನ ಸಹೋದರನಾದರೂ ಸಹ ಆ ನಂತರ ರಾಮನ ಪರ ನಿಲ್ಲುವ ಪಾತ್ರ ಅದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ