ಪಾಕಿಸ್ತಾನ ಆಯೋಜಿತ ಕಾರ್ಯಕ್ರಮದಲ್ಲಿ ಭಾಗಿ, ಕಾರ್ತಿಕ್ ಆರ್ಯನ್ಗೆ ಎಚ್ಚರಿಕೆ
Kartik Aryan: ಕಾರ್ತಿಕ್ ಆರ್ಯನ್ ಬಾಲಿವುಡ್ನ ಬಲು ಜನಪ್ರಿಯ ನಟ. ಸಿನಿಮಾ ಹಿನ್ನೆಲೆ ಇಲ್ಲದೆ ಬಾಲಿವುಡ್ನಲ್ಲಿ ಬೆಳೆದಿದ್ದಾರೆ. ಆದರೆ ಇದೀಗ ಬಾಲಿವುಡ್ನ ಸಿನಿಮಾ ಕಾರ್ಮಿಕರ ಸಂಘ ಕಾರ್ತಿಕ್ ಆರ್ಯನ್ಗೆ ಎಚ್ಚರಿಕೆ ನೀಡಿದೆ. ಕಾರ್ತಿಕ್ ಆರ್ಯನ್ ಕಾರ್ಯಕ್ರಮವೊಂದರ ಅತಿಥಿಯಾಗಿ ಅಮೆರಿಕಕ್ಕೆ ಹೋಗಲಿದ್ದು, ಆ ಕಾರ್ಯಕ್ರಮದಲ್ಲಿ ಭಾಗಿ ಆಗಬಾರದೆಂದು ಸಂಘಟನೆ ಆಗ್ರಹಿಸಿದೆ.

ಕಾರ್ತಿಕ್ ಆರ್ಯನ್ (Kartik Aaryan) ಬಾಲಿವುಡ್ನ ಬಲು ಜನಪ್ರಿಯ ಯುವನಟ. ಕಾರ್ತಿಕ್ ನಟಿಸಿರುವ ಕಳೆದ ಎರಡು ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಇದೀಗ ಅವರು ‘ಆಶಿಖಿ 3’ ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ನಟಿಸುತ್ತಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಈಗ ಸ್ಟಾರ್ ಆಗಿ ಮೆರೆಯುತ್ತಿರುವ ಕಾರ್ತಿಕ್ ಆರ್ಯನ್ಗೆ ಇದೀಗ ಬಾಲಿವುಡ್ ಚಿತ್ರರಂಗವೇ ಎಚ್ಚರಿಕೆ ನೀಡಿದೆ. ಅದೂ ಒಂದು ಗಂಭೀರ ವಿಷಯಕ್ಕಾಗಿ.
ಅಮೆರಿಕದ ಹ್ಯೂಸ್ಟನ್ನಲ್ಲಿ ಆಗಸ್ಟ್ 15 ರಂದು ನಡೆಯಲಿರುವ ‘ಆಜಾದಿ ಉತ್ಸವ್’ ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಈಗಾಗಲೇ ‘ಆಜಾದಿ ಉತ್ಸವ್’ ಕಾರ್ಯಕ್ರಮದ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹರಿದಾಡುತ್ತಿವೆ. ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸುತ್ತಿದ್ದಾರೆಂದು ಜೋರು ಪ್ರಚಾರ ಸಹ ಮಾಡಲಾಗಿದೆ. ಆದರೆ ಇದೀಗ ಈ ಕಾರ್ಯಕ್ರಮದ ವಿಷಯವಾಗಿ ಸಿನಿಮಾ ಕಾರ್ಮಿಕರ ಸಂಘವಾಗಿರುವ (ಎಫ್ಡಬ್ಲುಐಸಿಇ) ಪತ್ರ ಬರೆದು ಕಾರ್ತಿಕ್ ಆರ್ಯನ್ಗೆ ಎಚ್ಚರಿಕೆ ನೀಡಿದೆ.
‘ಆಜಾದಿ ಉತ್ಸವ್: ದಿ ಇಂಡಿಯನ್ಸ್ ಇಂಡಿಪೆಂಡೆನ್ಸ್ ಡೇ’ ಕಾರ್ಯಕ್ರಮವನ್ನು ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ ಅವರು ಆಯೋಜನೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಆದರೆ ಈ ಕಾರ್ಯಕ್ರಮ ಆಯೋಜಿಸಿರುವ ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ ಪಾಕಿಸ್ತಾನ ವ್ಯಕ್ತಿಯ ಮಾಲೀಕತ್ವ ಹೊಂದಿದ್ದು, ಇದೇ ರೆಸ್ಟೊರೆಂಟ್ ವತಿಯಿಂದ ‘ಜಶ್ನ್-ಎ-ಅಜಾದಿ’ ಹೆಸರಿನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನೂ ಸಹ ಆಯೋಜಿಸಲಾಗಿದೆಯಂತೆ. ಪಾಕ್ ಸ್ವಾತಂತ್ರ್ಯೋತ್ಸವ ಆಚರಣೆಗೆ ಪಾಕಿಸ್ತಾನಿ ಜನಪ್ರಿಯ ಗಾಯಕ ಅತಿಫ್ ಅಸ್ಲಮ್ ಅನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಜೊತೆಯಾಗಿ ಸುತ್ತಾಡುತ್ತಿರುವ ಶ್ರೀಲೀಲಾ, ಕಾರ್ತಿಕ್ ಆರ್ಯನ್; ಸಿಕ್ತು ಸಾಕ್ಷಿ
ಕಾರ್ಯಕ್ರಮ ಆಯೋಜನೆ ಮಾಡಿರುವ ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ನ ಮಾಲೀಕ ಶೌಖತ್ ಮರೆದಿಯಾ ಅವರು ಪಾಕಿಸ್ತಾನ ಮೂಲದವರಾಗಿದ್ದು, ಪಾಕಿಸ್ತಾನದವರು ಆಯೋಜಿಸುತ್ತಿರುವ ಕಾರ್ಯಕ್ರಮದಲ್ಲಿ ಬಾಲಿವುಡ್ನ ನಟ ಭಾಗಿ ಆಗುತ್ತಿರುವುದನ್ನು ಸಿನಿಮಾ ಕಾರ್ಮಿಕರ ಸಂಘವಾಗಿರುವ (ಎಫ್ಡಬ್ಲುಐಸಿಇ) ವಿರೋಧಿಸಿದೆ. ಒಂದೊಮ್ಮೆ ಕಾರ್ತಿಕ್ ಆರ್ಯನ್ ಆ ಕಾರ್ಯಕ್ರಮದಲ್ಲಿ ಭಾಗಿ ಆದರೆ ಅದು ರಾಷ್ಟ್ರೀಯ ಹಿತದ ದೃಷ್ಟಿಯಿಂದ ಸೂಕ್ತವಲ್ಲ’ ಎಂದಿದೆ.
ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ನಟ-ನಟಿಯರು, ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಗಾಯಕರು ಹಾಡುತ್ತಿದ್ದರು. ಆದರೆ ಎರಡೂ ದೇಶಗಳ ಸಂಬಂಧ ಬಿಗಡಾಯಿಸಿದ ಬಳಿಕ ಪಾಕ್ ನಟರಿಗೆ ನಿಷೇಧ ಹೇರಲಾಗಿತ್ತು. ಆದರೆ 2019ರ ಬಳಿಕ ಮತ್ತೆ ಪಾಕ್ ನಟ-ನಟಿಯರು ಭಾರತದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಆದರೆ ಇತ್ತೀಚೆಗಿನ ಪೆಹಲ್ಗಾಮ್ ದಾಳಿಯ ಬಳಿಕ ಮತ್ತೆ ಎರಡೂ ದೇಶಗಳ ಸಂಬಂಧ ಬಿಗಡಾಯಿಸಿದ್ದು, ಪಾಕ್ ನಟ-ನಟಿಯರು, ಗಾಯಕರ ಮೇಲೆ ಅನಧಿಕೃತ ನಿಷೇಧ ಹೇರಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




