Meghna Gulzar: ದೀಪಿಕಾ ಜೆಎನ್​ಯು ಕ್ಯಾಂಪಸ್​ಗೆ ತೆರಳಿದ್ದಕ್ಕೆ ‘ಛಪಾಕ್​’ ಸಿನಿಮಾ ಸೋಲು: ಸತ್ಯ ಒಪ್ಪಿಕೊಂಡ ನಿರ್ದೇಶಕಿ

ದೀಪಿಕಾ ಪಡುಕೋಣೆ ನಟಿಸಿದ್ದ ‘ಛಪಾಕ್​’ ಸಿನಿಮಾ 2020ರ ಜನವರಿ 10ರಂದು ಬಿಡುಗಡೆ ಆಗಿತ್ತು. ಆ ಸಿನಿಮಾವನ್ನು ಅನೇಕರು ಬಹಿಷ್ಕಾರ ಮಾಡಿದ್ದರು. ದೀಪಿಕಾ ಪಡುಕೋಣೆ ಅವರು ಜೆಎನ್​ಯು ಕ್ಯಾಂಪಸ್​ಗೆ ಕಾಲಿಟ್ಟಿದ್ದೇ ಅದಕ್ಕೆ ಕಾರಣ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ‘ಛಪಾಕ್​’ ಸಿನಿಮಾ ಕೇವಲ 34 ಕೋಟಿ ರೂಪಾಯಿ ಗಳಿಸಿತ್ತು.

Meghna Gulzar: ದೀಪಿಕಾ ಜೆಎನ್​ಯು ಕ್ಯಾಂಪಸ್​ಗೆ ತೆರಳಿದ್ದಕ್ಕೆ ‘ಛಪಾಕ್​’ ಸಿನಿಮಾ ಸೋಲು: ಸತ್ಯ ಒಪ್ಪಿಕೊಂಡ ನಿರ್ದೇಶಕಿ
ಮೇಘನಾ ಗುಲ್ಜಾರ್​, ದೀಪಿಕಾ ಪಡುಕೋಣೆ

Updated on: Nov 28, 2023 | 12:47 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರದ್ದು ನೇರ ನಡೆನುಡಿಯ ವ್ಯಕ್ತಿತ್ವ. 2020ರಲ್ಲಿ ಅವರು ಜೆಎನ್​ಯು (ಜವಾಹರಲಾಲ್​ ನೆಹರು ಯೂನಿವರ್ಸಿಟಿ) ಕ್ಯಾಂಪಸ್​ಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದರ ಪರಿಣಾಮವಾಗಿ ಅವರ ‘ಛಪಾಕ್​’ (Chhapaak) ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕೆಲವರು ಕರೆ ನೀಡಿದ್ದರು. ಈ ಘಟನೆಯಿಂದ ಸಿನಿಮಾದ ಮೇಲೆ ಪೆಟ್ಟು ಬಿದ್ದಿತ್ತು ಎಂಬುದನ್ನು ನಿರ್ದೇಶಕಿ ಮೇಘನಾ ಗುಲ್ಜಾರ್​ (Meghna Gulzar) ಅವರು ಈಗ ಒಪ್ಪಿಕೊಂಡಿದ್ದಾರೆ. ಆ ಮೂಲಕ ಸಿನಿಮಾದ ಸೋಲಿಗೆ ಕಾರಣ ಏನು ಎಂಬುದನ್ನು ಅವರೀಗ ತಿಳಿಸಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

ಆ್ಯಸಿಡ್​ ದಾಳಿಗೆ ಒಳಗಾದ ಯುವತಿಯರ ಜೀವನದ ನೈಜ ಘಟನೆಗಳನ್ನು ಆಧರಿಸಿ ‘ಛಪಾಕ್​’ ಸಿನಿಮಾ ಮೂಡಿಬಂದಿತ್ತು. ಆ ಸಿನಿಮಾದಲ್ಲಿ ವಿಕ್ರಾಂತ್​ ಮಾಸ್ಸಿ, ದೀಪಿಕಾ ಪಡುಕೋಣೆ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಆ ಸಿನಿಮಾ ರಿಲೀಸ್​ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ದೀಪಿಕಾ ಪಡುಕೋಣೆ ಅವರು ಜೆಎನ್​ಯು ಕ್ಯಾಂಪಸ್​ಗೆ ಭೇಟಿ ನೀಡಿದ್ದರು. ಅದು ಅನೇಕರ ಕೆಂಗಣ್ಣಿಗೆ ಗುರಿ ಆಗಿತ್ತು. ಹಾಗಾಗಿ ಸಿನಿಮಾವನ್ನು ಬಹಿಷ್ಕರಿಸಲು ಒಂದು ವರ್ಗದ ಜನರು ಮುಂದಾಗಿದ್ದರು.

ಇದನ್ನೂ ಓದಿ: ‘ಮನಸ್ಸಿಗೆ ಅನಿಸಿದ್ದನ್ನು ಹೇಳಲು ನಾನು ಎರಡು ಬಾರಿ ಆಲೋಚಿಸುವುದಿಲ್ಲ’; ದೀಪಿಕಾ ಪಡುಕೋಣೆ

‘ಇಂಡಿಯನ್​ ಎಕ್ಸ್​ಪ್ರೆಸ್​ ಅಡ್ಡಾ’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಿರ್ದೇಶಕಿ ಮೇಘನಾ ಗುಲ್ಜಾರ್​ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಹೌದು ಆ ಘಟನೆಯಿಂದ ಸಿನಿಮಾಗೆ ಹೊಡೆತ ಬಿತ್ತು. ಆ್ಯಸಿಡ್​ ದಾಳಿ ಬಗ್ಗೆ ಮಾತನಾಡಬೇಕಿದ್ದ ಸಿನಿಮಾದ ಚರ್ಚೆ ಬೇರೆಲ್ಲಿಗೋ ಹೋಯಿತು. ಹಾಗಾಗಿ ಖಂಡಿತವಾಗಿಯೂ ಅದರಿಂದ ಸಿನಿಮಾದ ಮೇಲೆ ಪರಿಣಾಮ ಬೀರಿತು. ಅದನ್ನು ಒಪ್ಪಿಕೊಳ್ಳದೇ ಇರುವ ಮಾತೇ ಇಲ್ಲ’ ಎಂದು ಮೇಘನಾ ಗುಲ್ಜಾರ್​ ಹೇಳಿದ್ದಾರೆ. 2020ರ ಜನವರಿ 10ರಂದು ತೆರೆಕಂಡ ‘ಛಪಾಕ್​’ ಸಿನಿಮಾ ಉತ್ತಮ ವಿಮರ್ಶೆ ಪಡೆದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು 34 ಕೋಟಿ ರೂಪಾಯಿ ಮಾತ್ರ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್​ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು

ಮೇಘನಾ ಗುಲ್ಜಾರ್​ ಅವರು ‘ತಲ್ವಾರ್​’, ‘ರಾಜಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದಾರೆ. ಅವರು ಈಗ ‘ಸ್ಯಾಮ್​ ಬಹದ್ದೂರ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಕೂಡ ನೈಜ ಘಟನೆ ಆಧರಿಸಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಡಿಸೆಂಬರ್​ 1ರಂದು ‘ಸ್ಯಾಮ್​ ಬಹದ್ದೂರ್​’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ರಣಬೀರ್​​ ಕಪೂರ್​ ನಟನೆಯ ‘ಅನಿಮಲ್​’ ಚಿತ್ರ ಕೂಡ ಬಿಡುಗಡೆ ಆಗುತ್ತಿದ್ದು, ಪೈಪೋಟಿ ಜೋರಾಗಿ ಇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us