‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ

‘ಬಾಯಲ್ಲಿ ಹೇಳಿ ಕೇಸರಿ’ ಎನ್ನುವ ಸ್ಟಾರ್​ ನಟರಿಗೆ ಮುಖೇಶ್​ ಖನ್ನಾ ಛೀಮಾರಿ ಹಾಕಿದ್ದಾರೆ. ‘ಇಂಥವರಿಗೆ ಹೊಡೆಯಬೇಕು’ ಎಂದು ಅವರು ಸಖತ್​ ಖಾರವಾಗಿ ಹೇಳಿದ್ದಾರೆ. ಅಕ್ಷಯ್​ ಕುಮಾರ್​, ಶಾರುಖ್​ ಖಾನ್​, ಅಜಯ್​ ದೇವಗನ್​ ಮುಂತಾದ ನಟರು ಈ ರೀತಿಯ ಜಾಹೀರಾತಿನಲ್ಲಿ ನಟಿಸಿದ್ದನ್ನು ಮುಖೇಶ್​ ಖನ್ನಾ ಅವರು ಖಂಡಿಸಿ ಮಾತನಾಡಿದ್ದಾರೆ.

‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ
ಮುಖೇಶ್​ ಖನ್ನಾ, ಅಕ್ಷಯ್​ ಕುಮಾರ್​, ಅಜಯ್ ದೇವಗನ್​ ಶಾರುಖ್​ ಖಾನ್​

Updated on: Aug 11, 2024 | 9:20 PM

ಬಾಲಿವುಡ್​ನ ಕೆಲವು ಟಾಪ್​ ನಟರು ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಂಥವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಪಾನ್​ ಮಸಾಲಾ ಅಥವಾ ಅಡಿಕೆ ಪುಡಿ ಹೆಸರಿನಲ್ಲಿ ಗುಟ್ಕಾ ಮಾರಾಟ ಮಾಡಲಾಗುತ್ತದೆ. ಅವುಗಳ ಜಾಹೀರಾತಿನಲ್ಲಿ ಸ್ಟಾರ್​ ನಟರು ಕಾಣಿಸಿಕೊಳ್ಳುವುದಕ್ಕೆ ಬಾಲಿವುಡ್​ನ ಹಿರಿಯ ನಟ ಮುಖೇಶ್​ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಕ್ಷಯ್​ ಕುಮಾರ್​, ಶಾರುಖ್​ ಖಾನ್​, ಅಜಯ್​ ದೇವಗನ್​ ಮುಂತಾದ ನಟರಿಗೆ ಮುಖೇಶ್​ ಖನ್ನಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ದೊಡ್ಡ ಮೊತ್ತದ ಸಂಭಾವನೆ ಪಡೆದು ಸ್ಟಾರ್​ ನಟನರು ಇಂಥ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಮುಖೇಶ್​ ಖನ್ನಾ ಉತ್ತರಿಸಿದ್ದಾರೆ. ‘ನನ್ನನ್ನು ಕೇಳಿದರೆ, ಅಂಥ ನಟರನ್ನು ಹಿಡಿದು ಹೊಡೆಯಬೇಕು ಎನ್ನುತ್ತೇನೆ. ಅವರಿಗೂ ನಾನು ಇದನ್ನು ಹೇಳಿದ್ದೇನೆ. ಅಕ್ಷಯ್​ ಕುಮಾರ್​ಗೆ ಬೈಯ್ದಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್​ ಖಾನ್, ಅಜಯ್​ ದೇವಗನ್​ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ ನೀವು ಏನು ಕಲಿಸುತ್ತಿದ್ದೀರಿ? ತಾವು ಪಾನ್​ ಮಸಾಲಾ ಮಾಡುತ್ತಿಲ್ಲ, ಅಡಿಕೆ ಪುಡಿ ಮಾರುತ್ತೇವೆ ಎನ್ನುತ್ತಾರೆ. ಆದರೆ ತಾವು ಮಾಡುತ್ತಿರುವುದು ಏನು ಅಂತ ಅವರಿಗೂ ಗೊತ್ತಿದೆ’ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

‘ನೀವು ಕಿಂಗ್​ಫಿಶರ್​ ಜಾಹೀರಾತು ಮಾಡಿದ್ದೀರಿ ಎಂದರೆ ಕಿಂಗ್​ಫಿಶರ್​ ಬಿಯರ್​ ಮಾರುತ್ತಿದ್ದೀರಿ ಅಂದರ್ಥ. ಅದು ಎಲ್ಲರಿಗೋ ಗೊತ್ತು. ಇವರೆಲ್ಲ ಯಾಕೆ ಇಂತ ಜಾಹೀರಾತು ಮಾಡುತ್ತಾರೆ? ಇವರ ಬಳಿ ಹಣ ಇಲ್ಲವೇ? ನಿಮ್ಮ ಬಳಿ ಸಾಕಷ್ಟು ಹಣ ಇದೆ, ಇಂಥದ್ದೆಲ್ಲ ಮಾಡಬೇಡಿ ಎಂದು ಆ ನಟರಿಗೂ ನಾನು ಹೇಳಿದ್ದೇನೆ. ಕೆಲವು ನಟರು ಅದರಿಂದ ಹೊರಗೆ ಬಂದಿದ್ದಾರೆ. ಅಂಥವರ ಪೈಕಿ ಅಕ್ಷಯ್​ ಕುಮಾರ್​ ಒಬ್ಬರು. ನನ್ನ ಮಾಹಿತಿ ಸರಿಯಾಗಿದ್ದರೆ ಅಮಿತಾಭ್​ ಬಚ್ಚನ್​ ಕೂಡ ಹೊರಬಂದಿದ್ದಾರೆ. ಈಗಲೂ ಇಂಥ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಜನರು ಬಾಯಲ್ಲಿ ಹೇಳಿ ಕೇಸರಿ ಎನ್ನುತ್ತಿದ್ದಾರೆ. ನೀವು ಜನರಿಗೆ ಗುಟ್ಕಾ ತಿನ್ನುವುದನ್ನು ಕಲಿಸುತ್ತಿದ್ದೀರಿ’ ಎಂದು ಮುಖೇಶ್​ ಖನ್ನಾ ಖಡಕ್​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​

ಈ ಮೊದಲು ಮುಖೇಶ್​ ಖನ್ನಾ ಅವರಿಗೂ ಇಂಥ ಜಾಹೀರಾತುಗಳ ಆಫರ್​ ಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದರು. ‘ಶಕ್ತಿಮಾನ್​’ ಧಾರಾವಾಹಿ ಮೂಲಕ ದೇಶಾದ್ಯಂತ ಸೂಪರ್​ ಹೀರೋ ಇಮೇಜ್​ ಗಳಿಸಿದ ನಟ ಅವರು. ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಅವರು ನೇರವಾಗಿ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:44 pm, Sun, 11 August 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us