ಸೋನಾಕ್ಷಿ-ಝಹೀರ್ ಮದುವೆಯನ್ನು ಲವ್ ಜಿಹಾದ್ ಎಂದವರಿಗೆ ಶಕ್ತಿಮಾನ್ ನಟನ ತಿರುಗೇಟು

ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್​ ಅವರು ಅಂತರ್​ಧರ್ಮೀಯ ವಿವಾಹ ಮಾಡಿಕೊಂಡಿದ್ದಾರೆ. ಹಾಗಾಗಿ ಇದನ್ನು ಲವ್​ ಜಿಹಾದ್​ ಎಂದು ಕೆಲವರು ಟೀಕೆ ಮಾಡಿದ್ದಾರೆ. ಈ ಕುರಿತು ನಟ ಮುಖೇಶ್​ ಖನ್ನಾ ಅವರು ಪ್ರತಿಕ್ರಿಯಿಸಿದ್ದಾರೆ. ಈ ಮದುವೆಯನ್ನು ಲವ್​ ಜಿಹಾದ್ ಅಂತ ಕರೆಯುವುದು ಸರಿಯಲ್ಲ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

ಸೋನಾಕ್ಷಿ-ಝಹೀರ್ ಮದುವೆಯನ್ನು ಲವ್ ಜಿಹಾದ್ ಎಂದವರಿಗೆ ಶಕ್ತಿಮಾನ್ ನಟನ ತಿರುಗೇಟು
ಮುಖೇಶ್​ ಖನ್ನಾ, ಸೋನಾಕ್ಷಿ ಸಿನ್ಹಾ, ಝಹೀರ್​ ಇಖ್ಬಾಲ್​

Updated on: Jul 07, 2024 | 6:00 PM

ನಟಿ ಸೋನಾಕ್ಷಿ ಸಿನ್ಹಾ ಅವರು ಕೆಲವೇ ದಿನಗಳ ಹಿಂದೆ ನಟ ಝಹೀರ್​ ಇಖ್ಬಾಲ್​ ಜೊತೆ ಮದುವೆ ಆದರು. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಆಯ್ಕೆಯ ಬಗ್ಗೆ ಅವರಿಗಾಗಲೀ, ಅವರ ಕುಟುಂಬಕ್ಕಾಗಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಈ ಮದುವೆ ಬಗ್ಗೆ ತರಕಾರು ತೆಗೆದಿದ್ದಾರೆ. ಯಾಕೆಂದರೆ, ಸೋನಾಕ್ಷಿ ಸಿನ್ಹಾ ಮತ್ತು ಝಹೀರ್​ ಇಖ್ಬಾಲ್​ ಅವರದ್ದು ಬೇರೆ ಬೇರೆ ಧರ್ಮ. ಹಾಗಾಗಿ ಅನೇಕರು ಇದನ್ನು ಲವ್​ ಜಿಹಾದ್​ ಎಂದು ಕರೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ‘ಶಕ್ತಿಮಾನ್​’ ಸೀರಿಯಲ್​ ಖ್ಯಾತಿಯ ನಟ ಮುಖೇಶ್​ ಖನ್ನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಖೇಶ್​ ಖನ್ನಾ ಅವರು ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್​ ಮದುವೆಯ ಕುರಿತು ಮಾತನಾಡಿದ್ದಾರೆ. ‘ಸೋನಾಕ್ಷಿ ಹಾಗೂ ಝಹೀರ್​ ಮದುವೆಯನ್ನು ಹಿಂದು-ಮುಸ್ಲಿಂ ದೃಷ್ಟಿಯಲ್ಲಿ ನೋಡಬೇಡಿ. ಸೋನಾಕ್ಷಿ ಸಡನ್​ ಆಗಿ ಈ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅವರು ಮದುವೆ ಆಗುವುದಕ್ಕೂ ಮುನ್ನ 6-7 ವರ್ಷಗಳ ಕಾಲ ಜೊತೆಯಾಗಿ ವಾಸಿಸಿದ್ದಾರೆ. ಜನರು ಇದನ್ನು ಲವ್​ ಜಿಹಾದ್​ ಎನ್ನುತ್ತಿದ್ದಾರೆ. ಬಲವಂತವಾಗಿ ಹುಡುಗಿಯ ಮದುವೆ ಮಾಡಿಸಿದರೆ ಅದು ಲವ್​ ಜಿಹಾದ್​ ಆಗುತ್ತದೆ’ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

‘ಹಿಂದು ಮತ್ತು ಮುಸ್ಲಿಂ ಮದುವೆ ಆಗಬಾರದೇ? ನಮ್ಮ ಕಾಲದಲ್ಲಿ ಅನೇಕರು ಈ ರೀತಿ ಮದುವೆ ಆಗಿದ್ದಾರೆ ಹಾಗೂ ಅವರು ಖುಷಿಯಾಗಿ ಇದ್ದಾರೆ. ಈ ಮದುವೆ ಅವರ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ’ ಎಂದಿದ್ದಾರೆ ಮುಖೇಶ್​ ಖನ್ನಾ. ಈ ಮೊದಲು ಬೇರೆ ನಟ-ನಟಿಯರು ಅಂತರ್​ಧರ್ಮೀಯ ವಿವಾಹ ಆಗಾದಲೂ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಟೀಕೆ ಮಾಡಿದ್ದರು.

ಇದನ್ನೂ ಓದಿ: ಸೋನಾಕ್ಷಿ ರಿಸೆಪ್ಷನ್​ಗೆ ಅತಿಥಿಗಳಂತೆ ರೆಡಿ ಆಗಿ ಬಂದ ಫ್ಯಾನ್ಸ್; ಮುಂದಾಗಿದ್ದು ಮಾತ್ರ ದುರಂತ

ಬಾಲಿವುಡ್​ನಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್​ ಇಖ್ಬಾಲ್ ಅವರು ಬ್ಯುಸಿ ಆಗಿದ್ದಾರೆ. ಮದುವೆ ಆದ ಬಳಿಕ ಎರಡೇ ದಿನದಲ್ಲಿ ಸೋನಾಕ್ಷಿ ಸಿನ್ಹಾ ಅವರು ಆಸ್ಪತ್ರೆಗೆ ತೆರಳಿದ್ದರು. ಇದರಿಂದ ಅವರ ಬಗ್ಗೆ ಒಂದು ಗಾಸಿಪ್​ ಹಬ್ಬಿತ್ತು. ಅವರು ಪ್ರೆಗ್ನೆಂಟ್​ ಆಗಿರುವುದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿತ್ತು. ಆದರೆ ಅಸಲಿ ವಿಷಯ ಬೇರೆಯೇ ಇದೆ. ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾಗೆ ಅನಾರೋಗ್ಯ ಉಂಟಾಗಿತ್ತು. ಅದಕ್ಕಾಗಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆಯನ್ನು ನೋಡಲು ಸೋನಾಕ್ಷಿ ಸಿನ್ಹಾ ಅವರು ಆಸ್ಪತ್ರೆಗೆ ಬಂದಿದ್ದರು ಎಂಬುದು ನಂತರ ಗೊತ್ತಾಯಿತು. ಅಲ್ಲದೇ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸೋನಾಕ್ಷಿ ಅವರು, ತಾವು ಪ್ರೆಗ್ನೆಂಟ್​ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us