ಅನೈತಿಕ ಸಂಬಂಧದ ವೈಭವೀಕರಣ: ಬಾಲಿವುಡ್ ಸಿನಿಮಾದ ಟೀಸರ್​ಗೆ ವಿರೋಧ

‘ಪತಿ ಪತ್ನಿ ಔರ್ ವೋ ದೋ’ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ವಮೀಕಾ ಗಬ್ಬಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನೈತಿಕ ಸಂಬಂಧದ ಕಥೆ ಇರಲಿದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ. ಟೀಸರ್ ನೋಡಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ.

ಅನೈತಿಕ ಸಂಬಂಧದ ವೈಭವೀಕರಣ: ಬಾಲಿವುಡ್ ಸಿನಿಮಾದ ಟೀಸರ್​ಗೆ ವಿರೋಧ
Pati Patni Aur Woh Do
Image Credit source: T-Series

Updated on: Apr 20, 2026 | 8:56 PM

ನಟ ಆಯುಷ್ಮಾನ್ ಖುರಾನಾ (Ayushmann Khurrana) ಅಭಿನಯದ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಒಂದು ಭರವಸೆ ಇರುತ್ತದೆ. ಆದರೆ ಈಗ ಅವರು ನಟಿಸಿರುವ ‘ಪತಿ ಪತ್ನಿ ಔರ್ ವೋ ದೋ’ (Pati Patni Aur Woh Do) ಸಿನಿಮಾದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮೇ 15ರಂದು ಈ ಚಿತ್ರ ರಿಲೀಸ್ ಆಗಲಿದೆ. ಇಂದು (ಏಪ್ರಿಲ್ 20) ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಲ್ಲಿ ವಿವಾಹೇತರ ಸಂಬಂಧವನ್ನು ವೈಭವೀಕರಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ.

ಟೀಸರ್‌ನಲ್ಲಿ ಕಥಾನಾಯಕನ ವೈವಾಹಿಕ ಜೀವನದಲ್ಲಿ ಎದುರಾಗುವ ಗೊಂದಲಗಳನ್ನು ತೋರಿಸಲಾಗಿದೆ. ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ವಮೀಕಾ ಗಬ್ಬಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಾಯಕಿಯರ ಜೊತೆ ಹೀರೋ ಪ್ರೇಮದಾಟ ನಡೆಸುವುದನ್ನು ಕಾಮಿಡಿಯಾಗಿ ಚಿತ್ರಿಸಲಾಗಿದೆ. ಆದರೆ, ಪತ್ನಿಗೆ ದ್ರೋಹ ಮಾಡುವುದನ್ನು ಹಾಸ್ಯದ ರೂಪದಲ್ಲಿ ತೋರಿಸಿದ ಕಾರಣದಿಂದ ಒಂದು ವರ್ಗದ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಟೀಸರ್ ನೋಡಿದ ಅನೇಕರು ಬಾಲಿವುಡ್‌ನ ಇಂತಹ ಕಥಾವಸ್ತುವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ನೆಗೆಟಿವ್ ಕಮೆಂಟ್​ಗಳು ಬಂದಿವೆ. ‘ಬಾಲಿವುಡ್ ಗಂಭೀರವಾದ ಸಮಸ್ಯೆಗಳ ಮೇಲೆ ಕಾಮಿಡಿ ಮಾಡುವುದನ್ನು ನಿಲ್ಲಿಸಬೇಕು. ಪತ್ನಿಗೆ ದ್ರೋಹ ಮಾಡುವುದು ಅಥವಾ ಟಾಕ್ಸಿಕ್ ಸಂಬಂಧಗಳನ್ನು ಹಾಸ್ಯದ ರೂಪದಲ್ಲಿ ತೋರಿಸುವುದು ಸರಿಯಲ್ಲ’ ಎಂದು ಒಬ್ಬರು ಕಿಡಿಕಾರಿದ್ದಾರೆ.

‘ಪತಿ ಪತ್ನಿ ಔರ್ ವೋ ದೋ’ ಟೀಸರ್:

‘ಇದೇ ಸಿನಿಮಾದಲ್ಲಿ ಹೆಂಡತಿ ಗಂಡನಿಗೆ ಮೋಸ ಮಾಡುವುದನ್ನು ತೋರಿಸಿದ್ದರೆ ತಕ್ಷಣ ಸಿನಿಮಾ ಬ್ಯಾನ್ ಆಗುತ್ತಿತ್ತು. ಆದರೆ ಗಂಡ ಮಾಡಿದರೆ ಅದು ಕಾಮಿಡಿಯೇ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ‘ಗಂಡಂದಿರ ಬುದ್ಧಿಯೇ ಇಷ್ಟು ಎನ್ನುವಂತಹ ಸಂಭಾಷಣೆಗಳ ಮೂಲಕ ಗಂಡಸರ ಬಗ್ಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ’ ಎಂದು ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ಆಯುಷ್ಮಾನ್​ ಖುರಾನಾ; ತಿಂಗಳ ರೆಂಟ್ ಎಷ್ಟು ಲಕ್ಷ?

‘ಬಾಲಿವುಡ್‌ನ ಸೃಜನಶೀಲತೆ ಸಂಪೂರ್ಣವಾಗಿ ನಶಿಸಿ ಹೋಗಿದೆ. ವಿವಾಹೇತರ ಸಂಬಂಧಗಳನ್ನು ವೈಭವೀಕರಿಸುವುದರಲ್ಲೇ ಬಾಲಿವುಡ್ ಕಾಲ ಕಳೆಯುತ್ತಿದೆ’ ಎಂದು ಕೂಡ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಆಯುಷ್ಮಾನ್ ಖುರಾನಾ ಅವರ ಈ ಹೊಸ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us