‘ಧುರಂಧರ್ 2’ ಸಿನಿಮಾದಲ್ಲಿ ಅದು ಸರಿಯಿಲ್ಲ: ಮೊದಲ ಬಾರಿ ಟೀಕಿಸಿದ ರಾಮ್ ಗೋಪಾಲ್ ವರ್ಮಾ

ಇಷ್ಟು ದಿನ ‘ಧುರಂಧರ್ 2’ ಚಿತ್ರವನ್ನು ಹೊಗಳುತ್ತಿದ್ದ ರಾಮ್ ಗೋಪಾಲ್ ವರ್ಮಾ ಈಗ ತಕರಾರು ತೆಗೆದಿದ್ದಾರೆ. ಈ ಸಿನಿಮಾದಲ್ಲಿ ದಾವುದ್ ಇಬ್ರಾಹಿಂ ಪಾತ್ರವನ್ನು ಸರಿಯಾಗಿ ತೋರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ತಾವು ತೋರಿಸಿದ್ದೇ ಸರಿ ಎಂದು ನಿರ್ದೇಶಕ ಆದಿತ್ಯ ಧರ್ ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ಆರ್​ಜಿವಿ ಹೇಳಿದ್ದಾರೆ.

‘ಧುರಂಧರ್ 2’ ಸಿನಿಮಾದಲ್ಲಿ ಅದು ಸರಿಯಿಲ್ಲ: ಮೊದಲ ಬಾರಿ ಟೀಕಿಸಿದ ರಾಮ್ ಗೋಪಾಲ್ ವರ್ಮಾ
Ram Gopal Varma, Ranveer Singh

Updated on: Apr 17, 2026 | 5:55 PM

ಆರಂಭದಿಂದಲೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾವನ್ನು ಹೊಗಳುತ್ತಲೇ ಬಂದಿದ್ದಾರೆ. ಈ ಚಿತ್ರದ ಡೈರೆಕ್ಟರ್ ಆದಿತ್ಯ ಧರ್ ಕೆಲಸವನ್ನು ಆರ್​ಜಿವಿ ಕೊಂಡಾಡಿದ್ದಾರೆ. ಇದು ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ಎಂದು ಹೊಗಳಿದ್ದಾರೆ. ಆದರೆ ಈಗ ಏಕಾಏಕಿ ಯು-ಟರ್ನ್ ಹೊಡೆದಿದ್ದಾರೆ. ‘ಧುರಂಧರ್ 2’ (Dhurandhar 2) ಚಿತ್ರದ ಒಂದು ಪ್ರಮುಖ ಅಂಶದ ಬಗ್ಗೆ ರಾಮ್ ಗೋಪಾಲ್ ವರ್ಮಾ ಅಸಮಾಧಾನ ವ್ಯಕ್ತಪಡಿದ್ದಾರೆ. ಅವರ ಈ ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ.

ಈ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಪಾತ್ರವನ್ನು ತೋರಿಸಿದ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೇಕಿಂಗ್ ಮತ್ತು ನಿರ್ದೇಶನದ ಬಗ್ಗೆ ಆರ್​ಜಿವಿ ಅವರಿಗೆ ಈಗಲೂ ಗೌರವವಿದೆ. ಆದರೆ, ಚಿತ್ರದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ ಪಾತ್ರವನ್ನು ಬಿಂಬಿಸಿರುವ ರೀತಿ ತಮಗೆ ಸರಿ ಅನಿಸಿಲ್ಲ ಎಂದು ಅವರು ಹೇಳಿದ್ದಾರೆ.

‘ಸಿನಿಮಾ ತಂಡದವರಿಗೆ ತಮ್ಮದೇ ಆದ ಮಾಹಿತಿಯ ಮೂಲಗಳಿರಬಹುದು. ಆದರೆ, ಚಿತ್ರದಲ್ಲಿ ತೋರಿಸಲಾದ ದಾವೂದ್ ಇಬ್ರಾಹಿಂನ ವ್ಯಕ್ತಿತ್ವವು ನಾನು ತಿಳಿದಿರುವ ವಾಸ್ತವಕ್ಕೆ ಹತ್ತಿರವಾಗಿಲ್ಲ. ದಾವೂದ್ ಇಬ್ರಾಹಿಂ ಸುಮಾರು 20 ವರ್ಷಗಳ ಹಿಂದೆಯೇ ಕ್ರಿಮಿನಲ್ ಚಟುವಟಿಕೆಗಳಿಂದ ದೂರ ಸರಿದು ನಿಷ್ಕ್ರಿಯನಾಗಿದ್ದಾನೆ. ಆದರೆ ಸಿನಿಮಾದಲ್ಲಿ ಆತನನ್ನು ಸಕ್ರಿಯವಾಗಿ ತೋರಿಸಿರುವುದು ಸರಿಯಲ್ಲ’ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ವಾದ.

‘ದಾವೂದ್ ಬಗ್ಗೆ ಯಾರು ಕೂಡ ಇಂತದ್ದೇ ಸತ್ಯ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾದಲ್ಲಿ ತೋರಿಸಿರುವುದನ್ನು ಸುಳ್ಳು ಎಂದು ಹೇಳಲು ನನ್ನ ಬಳಿಯೂ ಸಾಕ್ಷಿಯಿಲ್ಲ. ಹಾಗೆಯೇ ಅದನ್ನು ನಿಜ ಎಂದು ಸಾಬೀತುಪಡಿಸಲು ನಿರ್ದೇಶಕರಿಗೂ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗೆ ‘ಧುರಂಧರ್ 2’ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ‘ಧುರಂಧರ್’ ಪ್ರದರ್ಶನಕ್ಕೆ ಇಲ್ಲ ತಡೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಭೂಗತ ಲೋಕದ ಕಥೆಗಳನ್ನು ಆಧರಿಸಿ ‘ಸತ್ಯ’ ಮತ್ತು ‘ಕಂಪನಿ’ ರೀತಿಯ ಸಿನಿಮಾಗಳನ್ನು ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು ದಾವೂದ್ ವಿಷಯದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣ ಆಗಿದೆ. ಸದ್ಯ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವರ್ಮಾ ಅವರ ಈ ಹೇಳಿಕೆಗೆ ನಿರ್ದೇಶಕ ಆದಿತ್ಯ ಧರ್ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us