
ಅರುಣ್ ಯೋಗಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಯೋಧ್ಯೆ ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿ ವಿಶ್ವದಲ್ಲೇ ಮನೆ ಮಾತಾಗಿದ್ದಾರೆ. ಇದೀಗ ಅರುಣ್ ಯೋಗಿರಾಜ್ ಬಾಲಿವುಡ್ ಸ್ಟಾರ್ ದಂಪತಿ ರಣಬೀರ್ ಹಾಗೂ ಆಲಿಯಾ ಮನೆಗಾಗಿವಿಶೇಷ ಗಣಪತಿ ವಿಗ್ರಹವನ್ನು ಕೆತ್ತನೆ ಮಾಡಿಕೊಟ್ಟಿದ್ದಾರೆ. ಅತ್ಯಂತ ಆಕರ್ಷಕವಾಗಿರುವ ವಿಘ್ನ ನಿವಾರಕನ ಮೂರ್ತಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಬಾಲಿವುಡ್ ತಾರ ದಂಪತಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹೊಸ ಮನೆ ಗೃಹ ಪ್ರವೇಶ ಶೀಘ್ರವೇ ನಡೆಯಲಿದೆ. ಈ ಮನೆ ಅವರ ಮಗಳು ರಹಾ ಹೆಸರಲ್ಲಿದೆ. ನೂರಾರು ಕೋಟಿ ಬೆಲೆ ಬಾಳುವ ಹೊಸ ಮನೆಯಲ್ಲಿ ಗಣಪನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಅಲಿಯಾ ಹಾಗೂ ರಣಬೀರ್ ನಿರ್ಧಾರ ಮಾಡಿದ್ದರು. ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಆ ಗಣಪನ ವಿಗ್ರಹ ಕೆತ್ತನೆ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಅದರಂತೆ ದಂಪತಿ 6 ತಿಂಗಳ ಹಿಂದೆ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿದ್ದರು.
ದಂಪತಿ ಆಸೆಯಂತೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ಅವಶ್ಯಕತೆಯ ಎಲ್ಲಾ ಮಾಹಿತಿ ಪಡೆದುಕೊಂಡು ಕೆಲಸ ಆರಂಭಿಸಿದರು. ಹಗಲು ರಾತ್ರಿ ಕೆತ್ತನೆ ಕೆಲಸ ಮಾಡಿದ ಅರುಣ್ ಕೈ ಚಳಕದಲ್ಲಿ ಗಣಪನ ಅದ್ಬುತ ಕಲಾಕೃತಿ ಮೂಡಿಬಂದಿದೆ. ನಾಲ್ಕು ಅಡಿ ಎತ್ತರವಿರುವ ಗಣಪನ ವಿಗ್ರಹದ ಪೀಠ ಮೂರು ಅಡಿ ಎತ್ತರವಿದೆ. ಹೊಯ್ಸಳ ಹಾಗೂ ಮೈಸೂರು ಶೈಲಿಯಲ್ಲಿ ಗಣಪನ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ. ಅ 17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಗಣಪತಿಗೆ ಪೂಜೆ ನಡೆಯಲಿದೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು
ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆಗೆ ಮನಸೋತ ಆಲಿಯಾ ಹಾಗೂ ರಣಬೀರ್, ಗಣಪ ಮೂರ್ತಿ ಮಾಡಿಕೊಡುವಂತೆ ಅರುಣ್ ಯೋಗಿರಾಜ್ಗೆ ಮನವಿ ಮಾಡಿದ್ದರು. ಅರುಣ್ ಅವರನ್ನು ಮುಂಬೈಗೆ ಕರೆಸಿಕೊಂಡು ಈ ಬಗ್ಗೆ ಚರ್ಚೆ ಸಹ ನಡೆಸಿದ್ದರು. ಇದರ ಫಲವಾಗಿ ಆಕರ್ಷಕ ವಿನಾಯಕನ ಮೂರ್ತಿ ರೂಪುಗೊಂಡಿದೆ. ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಹಿರಿಮೆ ಗರಿಮೆ ಬಾಲಿವುಡ್ ಅಂಗಳವನ್ನು ತಲುಪಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Thu, 16 October 25