ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ಜೊತೆ ಮಾಡಿಕೊಂಡ ವಿವಾದವನ್ನು ಬಗೆಹರಿಸಲು ದೊಡ್ಡ ಮಟ್ಟದ ಸಭೆ ನಡೆದಿತ್ತು. ಈ ಹೈ-ಪ್ರೊಫೈಲ್ ಸಂಧಾನ ಸಭೆಗಳಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್, ಆಮಿರ್ ಖಾನ್, ಕರಣ್ ಜೋಹರ್, ರೋಹಿತ್ ಶೆಟ್ಟಿ ಸೇರಿದಂತೆ ಬಾಲಿವುಡ್‌ನ ಪ್ರಮುಖ ದಿಗ್ಗಜರು ಭಾಗವಹಿಸಿದ್ದರು ಎಂಬುದು ವಿಶೇಷ.

ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್
Ranveer Singh

Updated on: Jun 03, 2026 | 4:47 PM

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರಬಂದಿರುವುದು ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಅವರೊಂದಿಗಿನ ವಿವಾದ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ಸರಣಿ ಸಂಧಾನ ಸಭೆಗಳಲ್ಲಿ ರಣವೀರ್ ಸಿಂಗ್ (Ranveer Singh) ಈ ಪ್ರಾಜೆಕ್ಟ್‌ನಿಂದ ಹೊರಬರಲು ತಮಗಿದ್ದ ಅಸಮಾಧಾನಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ‘ವೆರೈಟಿ’ ವರದಿ ಮಾಡಿದೆ. ಚಿತ್ರರಂಗದ ಹಿರಿಯರ ಸಮ್ಮುಖದಲ್ಲಿ ನಡೆದ ಈ ರಹಸ್ಯ ಸಭೆ ಹಲವು ವಿಷಯಗಳು ಹೊರಬಂದಿವೆ.

‘ಡಾನ್ 3’ ಚಿತ್ರದ ಫೈನಲ್ ಸ್ಕ್ರಿಪ್ಟ್ ತಮಗೆ ಸಂಪೂರ್ಣ ತೃಪ್ತಿ ನೀಡಿರಲಿಲ್ಲ. ಸಿನಿಮಾ ಶೂಟಿಂಗ್‌ಗೆ ಹೋಗುವ ಹಂತಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿರಲಿಲ್ಲ ಎಂದು ರಣವೀರ್ ಹೇಳಿದ್ದಾರೆ. ಫರ್ಹಾನ್ ಅಖ್ತರ್ ಅವರು ಬೇರೆ ಪ್ರಾಜೆಕ್ಟ್‌ಗಳು ಹಾಗೂ ಮ್ಯೂಸಿಕ್ ಕನ್ಸರ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರಕ್ಕೆ ಸರಿಯಾಗಿ ಸಮಯ ನೀಡುತ್ತಿರಲಿಲ್ಲ ಎಂದು ರಣವೀರ್ ಆರೋಪಿಸಿದ್ದಾರೆ.

ಆರಂಭದಲ್ಲಿ ಚಿತ್ರಕ್ಕೆ 300ರಿಂದ 350 ಕೋಟಿ ರೂ. ಬಜೆಟ್ ಎಂದು ಚರ್ಚಿಸಲಾಗಿತ್ತು. ಆದರೆ ನಂತರ ಅದನ್ನು ಕೇವಲ 150 ಕೋಟಿ ರೂ.ಗೆ ಇಳಿಸಲಾಯಿತು ಎಂಬುದು ರಣವೀರ್ ವಾದ. ಬಜೆಟ್ ಕಮ್ಮಿ ಮಾಡಿದ ಬೆನ್ನಲ್ಲೇ ತಮ್ಮ ಸಂಭಾವನೆಯನ್ನೂ ಕಡಿತಗೊಳಿಸಲಾಯಿತು ಮತ್ತು ತಮಗೆ ಯಾವುದೇ ಅಡ್ವಾನ್ಸ್ ಅಥವಾ ಸೈನಿಂಗ್ ಅಮೌಂಟ್ ಸಿಕ್ಕಿರಲಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ.

ರಣವೀರ್ ಸಿಂಗ್ ಅವರ ಈ ಆರೋಪಗಳಿಗೆ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ತಿರುಗೇಟು ನೀಡಿದ್ದಾರೆ. ರಣವೀರ್ ಸಿಂಗ್ ಈ ಹಿಂದೆ ಸ್ಕ್ರಿಪ್ಟ್ ಕೇಳಿ ಖುಷಿಪಟ್ಟಿದ್ದ ಹಳೆಯ ವಾಟ್ಸಾಪ್ ಚಾಟ್‌ಗಳನ್ನು ಸಭೆಯಲ್ಲಿ ನಿರ್ಮಾಪಕರು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ಒಪ್ಪಂದವಾದ ಮೇಲೆ ಸಂಭಾವನೆ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಸಭೆಯಲ್ಲಿ ನಿರ್ಮಾಪಕ ರಿತೇಶ್ ಸಿಧ್ವಾನಿ ಅವರು ರಣವೀರ್‌ಗೆ ನೇರ ಪ್ರಶ್ನೆಯೊಂದನ್ನು ಕೇಳಿದ್ದರು. ‘ಒಂದು ವೇಳೆ ನಿಮ್ಮ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗದೇ ಇದ್ದಿದ್ದರೆ ನೀವು ‘ಡಾನ್ 3’ ಬಿಟ್ಟು ಹೋಗುತ್ತಿದ್ದಿರಾ?’ ಎಂದು ಕೇಳಿದ್ದಕ್ಕೆ, ರಣವೀರ್ ಸಿಂಗ್ ‘ಇಲ್ಲ, ಆಗ ನಾನು ಸಿನಿಮಾ ಬಿಡುತ್ತಿರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರೀ-ಪ್ರೊಡಕ್ಷನ್ ಹಂತದಲ್ಲಿ ತಮಗಾದ ನಷ್ಟಕ್ಕಾಗಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರಿಂದ 45 ಕೋಟಿ ರೂ. ಪರಿಹಾರ ಕೇಳಿದೆ. ಆದರೆ ರಣವೀರ್ ಸಿಂಗ್ ತಕ್ಷಣವೇ 10 ಕೋಟಿ ರೂ. ನೀಡಿ ಸೆಟಲ್ ಮಾಡಲು ಮುಂದಾಗಿದ್ದಾರೆ. ಜೊತೆಗೆ ಮುಂದಿನ ಸಿನಿಮಾಗಳಿಗೆ ತಮ್ಮ ಸಂಭಾವನೆಯಲ್ಲಿ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಆದರೆ ‘ಇನ್ಮುಂದೆ ನಿಮ್ಮ ಜೊತೆ ಸಿನಿಮಾ ಮಾಡುವ ಯೋಚನೆಯೇ ನಮಗಿಲ್ಲ. ಹಾಗಾಗಿ ನಿಮ್ಮ ಡಿಸ್ಕೌಂಟ್ ನಮಗೆ ಬೇಡ’ ಎಂದು ಫರ್ಹಾನ್ ಅಖ್ತರ್ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us