ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ

ಬಾಬಾ ಸಿದ್ಧಿಕಿ ನಿಧನದ ಸುದ್ದಿ ತಿಳಿದ ಬಳಿಕ ತಮ್ಮ ಎಲ್ಲ ಮೀಟಿಂಗ್​ಗಳನ್ನು ಸಲ್ಮಾನ್​ ಖಾನ್​ ಅವರು ಕ್ಯಾನ್ಸಲ್ ಮಾಡಿದ್ದಾರೆ. ಚಿತ್ರರಂಗದ ಸ್ನೇಹಿತರು ಕೂಡ ತಮ್ಮ ನಿವಾಸಕ್ಕೆ ಭೇಟಿ ನೀಡುವುದು ಬೇಡ ಎಂದು ಸಲ್ಲು ಕುಟುಂಬದವರು ತಿಳಿಸಿದ್ದಾರೆ ಎನ್ನಲಾಗಿದೆ. ಸಲ್ಮಾನ್​ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ಗೆ ಭದ್ರತೆ ಹೆಚ್ಚಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ
ಸಲ್ಮಾನ್​ ಖಾನ್​, ಬಾಬಾ ಸಿದ್ಧಿಕಿ

Updated on: Oct 13, 2024 | 3:39 PM

ಎನ್​ಸಿಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್​ ಖಾನ್​ ಅವರ ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬಾಬಾ ಸಿದ್ಧಿಕಿಗೆ ಸಲ್ಮಾನ್​ ಖಾನ್​ ಆಪ್ತರಾಗಿದ್ದರು. ಅವರ ನಿಧನದ ಬಳಿಕ ಸಲ್ಲು ಮನೆ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ತಮ್ಮ ನಿವಾಸ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ಗೆ ಯಾರೂ ಭೇಟಿ ನೀಡಬೇಡಿ ಎಂದು ಸಲ್ಮಾನ್​ ಖಾನ್​ ಕುಟುಂಬದವರು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಮೊದಲು ಸಲ್ಮಾನ್​ ಖಾನ್​ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಅವರ ಆಪ್ತರಾದ ಬಾಬಾ ಸಿದ್ಧಿಕಿ ಕೊಲೆ ಆಗಿರುವುದರಿಂದ ಸಲ್ಲು ಫ್ಯಾಮಿಲಿಗೆ ಆತಂಕ ಹೆಚ್ಚಿದೆ.

ಬಾಬಾ ಸಿದ್ಧಿಕಿ ಅವರ ಕುಟುಂಬಕ್ಕೆ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರು ಬೆಂಬಲವಾಗಿ ನಿಂತಿದ್ದಾರೆ. ಸಿದ್ಧಿಕಿ ಪುತ್ರ ಝೀಶಾನ್​ ಜೊತೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸ್ನೇಹಿತನನ್ನು ಕಳೆದುಕೊಂಡಿರುವ ಸಲ್ಮಾನ್​ ಖಾನ್​ಗೆ ತೀವ್ರ ಆತಂಕ ಉಂಟಾಗಿದೆ. ರಾತ್ರಿ ಅವರು ನಿದ್ದೆ ಮಾಡಿಲ್ಲ. ಈ ಮೊದಲೇ ನಿಗದಿ ಆಗಿದ್ದ ಎಲ್ಲ ಮೀಟಿಂಗ್​ಗಳನ್ನು ಅವರು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ.

ಸಲ್ಮಾನ್​ ಖಾನ್​ ಮಾತ್ರವಲ್ಲದೇ ಅವರ ಕುಟುಂಬದ ಬೇರೆ ಎಲ್ಲ ಸದಸ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಸಲ್ಲು ಸಹೋದರರಾದ ಅರ್ಬಾಜ್​ ಖಾನ್​ ಮತ್ತು ಸೊಹೈಲ್​ ಖಾನ್​ ಕೂಡ ಆಗಾಗ ಬಾಬಾ ಸಿದ್ಧಿಕಿ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಈಗ ಅವರ ನಿಧನದಿಂದ ಶೋಕ ಆವರಿಸಿದೆ. ಬಾಬಾ ಸಿದ್ಧಿಕಿ ಅಂತ್ಯಕ್ರಿಯೆ ಸಕಲ ತಯಾರಿಯ ಬಗ್ಗೆ ಸಲ್ಮಾನ್ ಖಾನ್​ ಅವರು ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಾಬಾ ಸಿದ್ಧಿಕಿ ಮತ್ತು ಬಾಲಿವುಡ್: ಸಲ್ಲು-ಶಾರುಖ್​ ಖಾನ್ ಒಂದಾಗಿದ್ದೇ ಇವರಿಂದ

ಬಾಂದ್ರಾದಲ್ಲಿ ಇರುವ ಸಲ್ಮಾನ್ ಖಾನ್​ ಅವರ ನಿವಾಸಕ್ಕೆ ಬಾಲಿವುಡ್​ನ ಅನೇಕರು ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಆದರೆ ಈಗ ತಮ್ಮನ್ನು ಯಾರೂ ಕೂಡ ಭೇಟಿ ಮಾಡುವುದು ಬೇಡ ಎಂದು ಸಲ್ಮಾನ್ ಖಾನ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ. ಸಿನಿಮಾ ಶೂಟಿಂಗ್​ ಮತ್ತು ಬಿಗ್​ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ಸಲ್ಮಾನ್​ ಖಾನ್​ ಬ್ಯುಸಿ ಆಗಿದ್ದರು. ಆದರೆ ಆ ಕೆಲಸಗಳಿಗೆ ಅವರು ಬ್ರೇಕ್​ ಹಾಕುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us