ಧುರಂಧರ್ 2: ಪಾಕಿಸ್ತಾನದ ಪೊಲೀಸ್ ಆಗಲು ಕೈತುಂಬಾ ಸಂಬಳ ಪಡೆದ ಸಂಜಯ್ ದತ್

‘ಧುರಂಧರ್ 2’ ಸಿನಿಮಾದಲ್ಲಿ ಎಸ್​ಪಿ ಚೌಧರಿ ಅಸ್ಲಂ ಎಂಬ ಪಾತ್ರವನ್ನು ಸಂಜತ್ ದತ್ ಮಾಡಿದ್ದಾರೆ. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳಲ್ಲಿ ಈ ಪಾತ್ರ ಮುಂದುವರಿದಿದ್ದು, ಜನರಿಗೆ ಇಷ್ಟ ಆಗಿದೆ. ಈ ಪಾತ್ರಕ್ಕಾಗಿ ಸಂಜಯ್ ದತ್ ಅವರಿಗೆ ಕೈತುಂಬಾ ಸಂಭಾವನೆ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಧುರಂಧರ್ 2: ಪಾಕಿಸ್ತಾನದ ಪೊಲೀಸ್ ಆಗಲು ಕೈತುಂಬಾ ಸಂಬಳ ಪಡೆದ ಸಂಜಯ್ ದತ್
Sanjay Dutt

Updated on: Mar 22, 2026 | 9:53 AM

ಬಾಲಿವುಡ್‌ ನಟ ಸಂಜಯ್ ದತ್ (Sanjay Dutt) ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾದಿಂದ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಗಳಲ್ಲಿ ಅವರು ನಿರ್ವಹಿಸಿರುವ ಪಾಕಿಸ್ತಾನಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುಬೇಡಿಕೆಯ ನಟನಾಗಿರುವ ಅವರು ಈ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ, ಸಂಜಯ್ ದತ್ ಅವರಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ (Sanjay Dutt Remuneration) ನೀಡಲಾಗಿದೆ.

‘ಧುರಂಧರ್ 2’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪಾಕಿಸ್ತಾನದ ಪೊಲೀಸ್‌ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವು ಕರಾಚಿಯ ನೈಜ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಖಾನ್ ಅವರ ಜೀವನದಿಂದ ಪ್ರೇರಿತವಾಗಿದೆ. ಲಿಯಾರಿ ಪ್ರದೇಶದ ಭೂಗತ ಲೋಕ ಮತ್ತು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ರಚಿಸಲಾದ ಲಿಯಾರಿ ಟಾಸ್ಕ್ ಫೋರ್ಸ್ ನೇತೃತ್ವವನ್ನು ಚೌಧರಿ ಅಸ್ಲಂ ವಹಿಸಿಕೊಂಡಿದ್ದರು.

ಆ ಪಾತ್ರಕ್ಕೆ ಸಂಜಯ್ ದತ್ ಅವರು ಜೀವ ತುಂಬಿದ್ದಾರೆ. ಅವರ ಗಡುಸಾದ ಧ್ವನಿ, ಖಡಕ್ ಡೈಲಾಗ್ ಡೆಲಿವರಿ ಮತ್ತು ಮ್ಯಾನರಿಸಂ ಕಾರಣದಿಂದ ಆ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಬೇರೆ ಪಾತ್ರಗಳ ರೀತಿ ಈ ಪಾತ್ರ ಕೂಡ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಈ ಫ್ರಾಂಚೈಸಿಯ ಎರಡು ಭಾಗಗಳಿಗಾಗಿ ಸಂಜಯ್ ದತ್ ಅವರಿಗೆ ಒಟ್ಟು 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.

ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು ಎಲ್ಲವೂ ಸೇರಿ ಅದ್ದೂರಿ ಬಜೆಟ್​​ನಲ್ಲಿ ‘ಧುರಂಧರ್ 2’ ಸಿನಿಮಾ ಮೂಡಿಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಕೇವಲ 3 ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂಬ ಮಾಹಿತಿ ಲಭ್ಯಬಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ

ಯುಗಾದಿ, ಈದ್ ಹಬ್ಬದ ರಜೆ ಹಾಗೂ ವೀಕೆಂಡ್ ಜೊತೆಯಾಗಿ ಬಂದಿದ್ದರಿಂದ ಭಾರತದಲ್ಲಿ ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಸುಮಾರು 339 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us