ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ ಟೀಸರ್; ಈ ಚಿತ್ರದಲ್ಲಿದೆ ವಿವಾದಿತ ಕಥೆ

ಆರ್​ಎಸ್​ಎಸ್​ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳಿವೆ. ಅವುಗಳನ್ನೇ ಇಟ್ಟುಕೊಂಡು ‘ಆಖ್ರಿ ಸವಾಲ್’ ಸಿನಿಮಾ ಮಾಡಲಾಗಿದೆ. ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಲಾಗಿದೆ. ಮೇ 8ರಂದು ಈ ಸಿನಿಮಾ ತೆರೆಕಾಣಲಿದೆ. ಈಗ ಟೀಸರ್ ಗಮನ ಸೆಳೆಯುತ್ತಿದೆ.

ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ ಟೀಸರ್; ಈ ಚಿತ್ರದಲ್ಲಿದೆ ವಿವಾದಿತ ಕಥೆ
Sanjay Dutt

Updated on: Apr 02, 2026 | 5:56 PM

ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ (Aakhri Sawal) ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಹನುಮ ಜಯಂತಿ ಪಯುಕ್ತ (ಏಪ್ರಿಲ್ 2) ಈ ಟೀಸರ್ ಅನಾವರಣ ಮಾಡಲಾಗಿದೆ. ಸತ್ಯ, ಇತಿಹಾಸ ಮತ್ತು ಯುವಜನತೆಯ ದೃಷ್ಟಿಕೋನವನ್ನು ಪ್ರಶ್ನಿಸುವ ಈ ಚಿತ್ರದ ಸಣ್ಣ ಝಲಕ್ ಈಗ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಸಂಜಯ್ ದತ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆಖ್ರಿ ಸವಾಲ್’ ಸಿನಿಮಾ ಕೂಡ ಅವರಿಗೆ ಗೆಲುವು ತಂದುಕೊಡುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಆರ್​ಎಸ್​ಎಸ್​ (RSS) ಕುರಿತಾದ ಕಥೆ ಇದೆ.

‘ಆಖ್ರಿ ಸವಾಲ್’ ಚಿತ್ರದ ಕಥೆಯು ವಿಕ್ಕಿ ಎಂಬ ವಿದ್ಯಾರ್ಥಿಯ ಸುತ್ತ ಸಾಗುತ್ತದೆ. ತನ್ನ ಪ್ರಬಂಧವನ್ನು ತಿರಸ್ಕರಿಸಿದ ಗುರುವಿಗೆ ಆತ ಆರ್​ಎಸ್​ಎಸ್​ ಕುರಿತು ಪ್ರಶ್ನಿಸುತ್ತಾನೆ. ಇದು ಕೇವಲ ವೈಯಕ್ತಿಕ ಭಿನ್ನಾಭಿಪ್ರಾಯವಾಗಿ ಉಳಿಯದೆ, ಇಡೀ ದೇಶದ ಗಮನ ಸೆಳೆಯುವ ಸಾರ್ವಜನಿಕ ಚರ್ಚೆಯಾಗಿ ಮಾರ್ಪಡುತ್ತದೆ. ಸಿನಿಮಾವು ಪ್ರಬಲವಾದ ಗುರು-ಶಿಷ್ಯರ ನಡುವಿನ ಸಂಘರ್ಷವನ್ನು ತೆರೆಯ ಮೇಲೆ ತರಲಿದೆ ಎಂಬುದು ಟೀಸರ್​ನಲ್ಲಿ ಕಾಣಿಸಿದೆ.

ಈ ಮೊದಲು ಬಿಡುಗಡೆಯಾದ ಪೋಸ್ಟರ್‌ನಲ್ಲಿ ಸಂಜಯ್ ದತ್ ಅತ್ಯಂತ ಗಂಭೀರವಾದ ಮುಖಭಾವದಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹತ್ ಪ್ರಶ್ನಾರ್ಥಕ ಚಿಹ್ನೆಯ ಒಳಗೆ ಅವರ ಮುಖವನ್ನು ಚಿತ್ರಿಸಲಾಗಿದ್ದು, ಕಪ್ಪು ಮತ್ತು ಬೆಂಕಿಯಂತಹ ಕೆಂಪು ಬಣ್ಣದ ವಿನ್ಯಾಸವು ಚಿತ್ರದ ತೀವ್ರತೆಯನ್ನು ಸಾರುತ್ತಿದೆ. ‘ಭಾರತ ಎಂದಿಗೂ ಕೇಳುವುದನ್ನು ನಿಲ್ಲಿಸದ ಪ್ರಶ್ನೆ’ ಎಂಬ ಟ್ಯಾಗ್‌ಲೈನ್ ಪೋಸ್ಟರ್‌ನಲ್ಲಿ ಗಮನ ಸೆಳೆದಿದೆ.

‘ಆಖ್ರಿ ಸವಾಲ್’ ಟೀಸರ್:

ಸಂಜಯ್ ದತ್ ಜೊತೆಗೆ ಅಮಿತ್ ಸಾಧ್, ಸಮೀರಾ ರೆಡ್ಡಿ, ನಮಾಶಿ ಚಕ್ರವರ್ತಿ, ನೀತು ಚಂದ್ರ ಮತ್ತು ತ್ರಿದಾ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಮತ್ತು ನಿಖಿಲ್ ನಂದಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾವು ಮೇ 8ರಂದು ತೆರೆಕಾಣಲಿದೆ. ಆರ್​ಎಸ್​ಎಸ್​ ಬ್ಯಾನ್ ಆಗಿದ್ದು, ಬಾಬ್ರಿ ಮಸೀದಿ ಧ್ವಂಸ ಆಗಿದ್ದು ಸೇರಿದಂತೆ ಹಲವು ವಿವಾದಿತ ವಿಷಯಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುವುದು.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

ಸದ್ಯ ಸಂಜಯ್ ದತ್ ಅವರು ‘ಧುರಂಧರ್: ದಿ ರಿವೇಂಜ್’ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದಾಖಲೆ ಬರೆಯುತ್ತಿದೆ. ಇದಲ್ಲದೇ, ‘ರಾಜಾ ಶಿವಾಜಿ’ ಮತ್ತು ‘ಕೆಡಿ’ ಸಿನಿಮಾಗಳಲ್ಲೂ ಸಂಜಯ್ ದತ್ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us