ವಿದ್ಯಾರ್ಥಿಗಳ ಪ್ರತಿಭಟನೆ: ದೆಹಲಿಯ ಸಂಗೀತ ಕಾರ್ಯಕ್ರಮ ಮುಂದೂಡಿದ ಗಾಯಕ ಸೋನು ನಿಗಮ್

ಸೋನು ನಿಗಮ್ ಅವರು ಜುಲೈ 25ರಂದು ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರು ಈ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಕೇವಲ ಸೋನು ನಿಗಮ್ ಮಾತ್ರವಲ್ಲದೆ, ಇನ್ನು ಹಲವು ಕಲಾವಿದರು ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ವಿದ್ಯಾರ್ಥಿಗಳ ಪ್ರತಿಭಟನೆ: ದೆಹಲಿಯ ಸಂಗೀತ ಕಾರ್ಯಕ್ರಮ ಮುಂದೂಡಿದ ಗಾಯಕ ಸೋನು ನಿಗಮ್
Sonu Nigam

Updated on: Jul 24, 2026 | 9:05 PM

ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೆಹಲಿ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳ ಪ್ರತಿಭಟನೆ (Student Protest) ಮುಂದುವರಿದಿದೆ. ಹಲವು ನಟ-ನಟಿಯರು ಹಾಗೂ ಪ್ರಮುಖ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ (Sonu Nigam) ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ತಮ್ಮ ದೆಹಲಿ ಸಂಗೀತ ಕಚೇರಿಯನ್ನು ಮುಂದೂಡಿದ್ದಾರೆ.

ಜುಲೈ 25ರಂದು ದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸೋನು ನಿಗಮ್ ಅವರ ‘ಬಾಸಿಟಿವಿಟಿ – ಸೋನು ನಿಗಮ್ ರಿಮೆಂಬರ್ಸ್ ರಫಿ’ ಹೆಸರಿನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿ ಈ ಕಾರ್ಯಕ್ರಮವನ್ನು ಆಗಸ್ಟ್ 15ಕ್ಕೆ ಮುಂದೂಡಲಾಗಿದೆ. ಈ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ, ‘ಪ್ರಸ್ತುತ ದೇಶದಲ್ಲಿರುವ ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ’ ಎಂದು ಸೋನು ನಿಗಮ್ ಸ್ಪಷ್ಟಪಡಿಸಿದ್ದಾರೆ.

ವೈರಲ್ ವೀಡಿಯೋ ಮತ್ತು ಗೊಂದಲ:

ಇದಕ್ಕೂ ಒಂದು ದಿನದ ಮುನ್ನ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರು ನೀಟ್ ಪ್ರತಿಭಟನೆಯ ಬಗ್ಗೆ ಪ್ರಶ್ನಿಸಿದಾಗ ಸೋನು ನಿಗಮ್ ಕಿರಿಕಿರಿಗೊಂಡ ದೃಶ್ಯ ವೈರಲ್ ಆಗಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದ ಅವರು, ‘ನಾನು ಇಲ್ಲಿಗೆ ಬಂದಿರುವುದು ಯಾವುದಕ್ಕಾಗಿ? ಸಾಕು… ಈಗಲೇ ನಿಲ್ಲಿಸಿ’ ಎಂದು ಹೇಳಿ ಮಾತು ಮುಗಿಸಿದ್ದರು. ಈ ವೀಡಿಯೋ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅವರು ತಮ್ಮ ಸಂಗೀತ ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅನುಭವ್ ಸಿಂಗ್ ಬಸ್ಸಿ ಜುಲೈ 25ರಂದು ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ತಮ್ಮ ಹಾಸ್ಯ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಟಿಕೆಟ್ ಖರೀದಿಸಿದ ಎಲ್ಲರಿಗೂ ಹಣ ಮರುಪಾವತಿಸಲಾಗುವುದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ವಶಕ್ಕೆ ಒಳಗಾಗಿದ್ದ ನಟಿ ಆಯೆಷಾ ಖಾನ್ ಮೊದಲ ಪ್ರತಿಕ್ರಿಯೆ

ನಟಿ ಸೋಹಾ ಅಲಿ ಖಾನ್ ಅವರು ತಮ್ಮ ಪಾಡ್‌ಕಾಸ್ಟ್‌ನ ಮುಂದಿನ ಸಂಚಿಕೆಯ ಬಿಡುಗಡೆಯನ್ನು ಮುಂದೂಡಿದ್ದಾರೆ. ‘ವಿದ್ಯಾರ್ಥಿಗಳು ತಮಗಾಗಿ ಮತ್ತು ಭವಿಷ್ಯಕ್ಕಾಗಿ ರಸ್ತೆಗೆ ಇಳಿದು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಧ್ವನಿಗಿಂತ ಅವರ ಧ್ವನಿಯೇ ಜೋರಾಗಿ ಕೇಳಿಸಬೇಕು, ಹಾಗಾಗಿ ನಾವು ಹಿಂದಕ್ಕೆ ನಿಲ್ಲುತ್ತಿದ್ದೇವೆ’ ಎಂದು ಸೋಹಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us