ಆಸ್ಕರ್ ಆಯ್ಕೆ ಬಗ್ಗೆ ಸುಳ್ಳು ಹೇಳಿ ನಗೆಪಾಟಲಿಗೆ ಒಳಗಾದ ‘ಸಾವರ್ಕರ್’ ಚಿತ್ರತಂಡ

|

Updated on: Sep 25, 2024 | 3:32 PM

ಬಾಲಿವುಡ್​ ನಟ ರಣದೀಪ್​ ಹೂಡಾ ಅವರು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆಸ್ಕರ್​ ಸ್ಪರ್ಧೆಯ ವಿಚಾರದಲ್ಲಿ ಈ ಚಿತ್ರದ ನಿರ್ಮಾಪಕರು ಮಾಡಿದ ಒಂದು ಪೋಸ್ಟ್​ನಿಂದ ಗೊಂದಲ ಏರ್ಪಟ್ಟಿತ್ತು. ನಿರ್ಮಾಪಕರು ನೀಡಿದ ಮಾಹಿತಿ ತಪ್ಪು ಎಂಬುದು ಈಗ ಬಯಲಾಗಿದೆ. ನೆಟ್ಟಿಗರು ಈ ಬಗ್ಗೆ ಟೀಕೆ ಮಾಡಿದ್ದಾರೆ.

ಆಸ್ಕರ್ ಆಯ್ಕೆ ಬಗ್ಗೆ ಸುಳ್ಳು ಹೇಳಿ ನಗೆಪಾಟಲಿಗೆ ಒಳಗಾದ ‘ಸಾವರ್ಕರ್’ ಚಿತ್ರತಂಡ
ಸ್ವಾತಂತ್ರ್ಯ ವೀರ್ ಸಾವರ್ಕರ್
Follow us on

ಆಸ್ಕರ್​ ಸ್ಪರ್ಧೆಗೆ ಪ್ರತಿ ವರ್ಷ ಭಾರತದಿಂದ ಒಂದು ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಕಳಿಸಲಾಗುತ್ತದೆ. ‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ಮೂಲಕ ಈ ಆಯ್ಕೆ ನಡೆಯುತ್ತದೆ. ಈ ವರ್ಷ ಕಿರಣ್ ರಾವ್​ ನಿರ್ದೇಶನ ಮಾಡಿದ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆಗಿದೆ. ಆದರೆ ತಮ್ಮ ಸಿನಿಮಾ ಕೂಡ ಅಧಿಕೃತವಾಗಿ ಸಲ್ಲಿಕೆ ಆಗಿದೆ ಎಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರತಂಡದವರು ಸುಳ್ಳು ಹೇಳಿದ್ದಾರೆ. ಇದರಿಂದ ಚಿತ್ರತಂಡದವರು ನಗೆಪಾಟಲಿಗೆ ಒಳಗಾಗಿದ್ದಾರೆ.

ಸೋಮವಾರ (ಸೆ.23) ಆಸ್ಕರ್​ ಸ್ಪರ್ಧೆಗೆ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆದ ಸುದ್ದಿ ಕೇಳಿಬಂದಾಗ ಎಲ್ಲರೂ ಖುಷಿಪಟ್ಟರು. ಅದರ ಬೆನ್ನಲ್ಲೇ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ತಂಡದವರು ಕೂಡ ಇನ್ನೊಂದು ಸುದ್ದಿ ಹರಿಬಿಟ್ಟರು. ‘2025ರ ಆಸ್ಪರ್​ ಪ್ರಶಸ್ತಿಯ ಸ್ಪರ್ಧೆಗೆ ನಮ್ಮ ಸಿನಿಮಾ ಅಧಿಕೃತವಾಗಿ ಸಲ್ಲಿಕೆ ಆಗಿದೆ. ಮೆಚ್ಚುಗೆ ನೀಡಿದ್ದಕ್ಕೆ ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾಗೆ ಧನ್ಯವಾದಗಳು’ ಎಂದು ನಿರ್ಮಾಪಕರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ನಿರ್ಮಾಪಕರು ಹಂಚಿಕೊಂಡ ಮಾಹಿತಿ ನಿಜ ಎಂದು ತಿಳಿದ ಅನೇಕರು ಅಭಿನಂದನೆಗಳನ್ನು ತಿಳಿಸಲು ಆರಂಭಿಸಿದರು. ಇದರಿಂದಾಗಿ ಅನೇಕರಿಗೆ ಗೊಂದಲ ಮೂಡಿತು. ಒಂದು ದೇಶದಿಂದ 2 ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಲು ಶುರು ಮಾಡಿದರು. ಕಡೆಗೆ ತಿಳಿದ ವಿಚಾರ ಏನೆಂದರೆ, ‘ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ’ ವತಿಯಿಂದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಆಯ್ಕೆಯೇ ಆಗಿಲ್ಲ!

ಇದನ್ನೂ ಓದಿ: ‘ಹನುಮಾನ್’, ‘ಕಲ್ಕಿ 2898 ಎಡಿ’, ‘ಅನಿಮಲ್’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿದ ‘ಲಾಪತಾ ಲೇಡೀಸ್​’

ಒಂದು ದೇಶದಿಂದ ಒಂದು ಸಿನಿಮಾವನ್ನು ಮಾತ್ರ ಅಧಿಕೃತವಾಗಿ ಆಸ್ಕರ್​ ಸ್ಪರ್ಧೆಗೆ ಕಳಿಸಬಹುದು. ಆದರೆ ಇನ್ನುಳಿದ ಸಿನಿಮಾ ತಂಡಗಳು ಪ್ರತ್ಯೇಕವಾಗಿ ಬೇಕಿದ್ದರೆ ಆಸ್ಕರ್​ಗೆ ಸ್ಪರ್ಧೆ ನೀಡಬಹುದು. ಆದರೆ ಆ ರೀತಿ ಮಾಡಲು ಬಹುಕೋಟಿ ರೂಪಾಯಿ ಖರ್ಚು ಆಗುತ್ತದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ತಂಡ ಕೂಡ ಆ ದಾರಿ ಅನುಸರಿಸಬಹುದು. ಹಾಗಿದ್ದರೆ, ‘ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ’ದ ಹೆಸರನ್ನು ಎಳೆದು ತರುವ ಅಗತ್ಯ ಇಲ್ಲ.

ಒಟ್ಟಿನಲ್ಲಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ನಿರ್ಮಾಪಕರ ಎಡವಟ್ಟಿನಿಂದ ಅನಗತ್ಯವಾಗಿ ಗೊಂದಲ ಉಂಟಾಯಿತು. ಅಸಲಿ ವಿಷಯ ತಿಳಿದ ನಂತರ ನೆಟ್ಟಿಗರು ಈ ತಂಡಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಈ ಸಿನಿಮಾದಲ್ಲಿ ರಣದೀಪ್ ಹೂಡಾ ಅವರು ಸಾವರ್ಕರ್​ ಪಾತ್ರವನ್ನು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.