
ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ ಅವರುಗಳು ಬಾಲಿವುಡ್ನ ತಾರಾ ಜೋಡಿ. 2012 ರಲ್ಲಿ ಈ ಜೋಡಿ ಮದುವೆ ಆದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕರೀನಾಗೆ ಮೊದಲ ಮಗು 2016 ರಲ್ಲಿ ಹಾಗೂ ಎರಡನೇ ಮಗು 2021ರಲ್ಲಿ ಜನಿಸಿತು. ಸೈಫ್ ಹಾಗೂ ಕರೀನಾ ಮೊದಲ ಮಗುವಿಗೆ ಹೆಸರಿಟ್ಟಾಗ ಅದು ಭಾರಿ ವಿವಾದ ಆಗಿತ್ತು. ಆ ನಂತರ ಜನ ಅದನ್ನು ಮರೆತುಬಿಟ್ಟರು. ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ಮತ್ತೆ ವಿವಾದವನ್ನು ಕೆದಕಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ಇದೀಗ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ಒಂದು ಸಂಭಾಷಣೆ ಸೈಫ್ ಹಾಗೂ ಕರೀನಾರ ಮಗನ ಹೆಸರಿನ ಕುರಿತಾಗಿದೆ. ಟ್ರೈಲರ್ನ ಆರಂಭದಲ್ಲಿಯೇ ವ್ಯಕ್ತಿಯೊಬ್ಬ ಮಗನಿಗೆ ಅವನ ಹೆಸರು ಹೇಳುವಂತೆ ಕೇಳುತ್ತಾನೆ ಆಗ ಬಾಲಕ ‘ತೆಮೂರ್’ ಎನ್ನುತ್ತಾನೆ. ಆಗ ಆ ಬಾಲಕನ ತಂದೆಯ ಪಾತ್ರಧಾರಿ, ‘ಯೋಚಿಸು 2050ರಲ್ಲಿ ಈ ಬಾಲಕ ದೇಶದ ಮೊದಲ ಅಲ್ಪಸಂಖ್ಯಾತ ಪ್ರಧಾನ ಮಂತ್ರಿಯಾದರೆ ಪ್ರಜಾಪ್ರಭುತ್ವದ ಗೆಲುವು ಎಷ್ಟು ಅದ್ಭುತವಾಗಿರುತ್ತದೆ’ ಎನ್ನುತ್ತಾನೆ. ಆತನ ಮಾತು ಕೇಳಿಸಿಕೊಳ್ಳುವ ಎದುರು ಕುಳಿತ ವ್ಯಕ್ತಿ ಅಸಹನೆ ವ್ಯಕ್ತಪಡಿಸುತ್ತಾನೆ.
ಅಸಲಿಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮೊದಲ ಮಗನ ಹೆಸರು ತೆಮೂರ್. ಈ ಹೆಸರು ವಿವಾದಕ್ಕೆ ಕಾರಣವಾಗಿದ್ದು 13ನೇ ಶತಮಾನದಲ್ಲಿ ಇದ್ದ ರಾಜ ತೆಮೂರ್ ಕಾರಣಕ್ಕೆ. ಮಂಗೋಲಿಯನ್ ಮುಸ್ಲಿಂ ರಾಜನಾಗಿದ್ದ ತೆಮೂರ್ ಮಹಾ ಅತಿಕ್ರಮಣಕಾರಿ ಆಗಿದ್ದ. ಹಲವು ಯುದ್ಧಗಳನ್ನು ಮಾಡಿದ್ದ ತೈಮೂರ್, ಸುಮಾರು 17 ಲಕ್ಷ ಜನರ ಸಾವಿಗೆ ಕಾರಣನಾಗಿದ್ದ ಎನ್ನಲಾಗುತ್ತದೆ. ದೆಹಲಿಯ ಮೇಲೂ ಆಕ್ರಮಣ ಮಾಡಿದ್ದ ತೈಮೂರ್, ದೆಹಲಿಯಲ್ಲಿ ಸುಮಾರು ಒಂದು ಲಕ್ಷ ಜನರ ಸಾವಿಗೆ ಕಾರಣನಾಗಿದ್ದ ಎನ್ನಲಾಗುತ್ತದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾ ‘ಚಾಕಡ್ ಎಕ್ಸ್ಪ್ರೆಸ್’ ಸಿನಿಮಾ ಕತೆ ಏನಾಯ್ತು?
ಇದೇ ಕಾರಣಕ್ಕೆ ಒಬ್ಬ ಆಕ್ರಮಣಕಾರಿಯ ಹೆಸರನ್ನು ಮಗನಿಗೆ ಇರಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಆ ವಿವಾದ ನಿಧಾನಕ್ಕೆ ತಣ್ಣಗಾಗಿತ್ತು ಆದರೆ ಈಗ ವಿವೇಕ್ ಅಗ್ನಿಹೋತ್ರಿ ತಮ್ಮ ಸಿನಿಮಾ ಮೂಲಕ ಮತ್ತೆ ವಿವಾದಕ್ಕೆ ನೀರೆರಿದಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಟ್ಟಿಗೂ ಮಾತನಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ‘ಯಾರೂ ಸಹ ಮಕ್ಕಳಿಗೆ ತೆಮೂರ್ ಎಂದು ಹೆಸರು ಇಡಬಾರದು’ ಎಂದಿದ್ದಾರೆ.
‘ನಾನು ‘ದಿ ಕಾಶ್ಕೆಂಟ್ ಫೈಲ್ಸ್’ ಸಿನಿಮಾ ಮಾಡಲು ಹೋಗಿದ್ದಾಗ ತೆಮೂರ್ ಸಮಾಧಿಗೆ ಭೇಟಿ ನೀಡಿದ್ದೆ. ಸಮಾಧಿಯ ಮೇಲೆ ‘ವಿಶ್ವದ ಶ್ರೀಮಂತ ಸುಲ್ತಾನರನ್ನು ಆಳಿದವ’ ಎಂದು ಬರೆಯಲಾಗಿತ್ತು. ತೆಮೂರ್ಗೆ ಸಾಮ್ರಾಟ ಬಿರುದು ನೀಡಲಾಗಿತ್ತು ಆದರೆ ಆತ ಅದನ್ನು ನಿರಾಕರಿಸಿದ, ನಾನು ದೆಹಲಿ ಗೆದ್ದ ಬಳಿಕ ಅದನ್ನು ಸ್ವೀಕರಿಸುವ ಎಂದು ಹೇಳಿದ್ದ. ದೆಹಲಿಯ ಮೇಲೆ ದಾಳಿ ಮಾಡಿ ಒಂದೇ ರಾತ್ರಿಯಲ್ಲಿ ಒಂದು ಲಕ್ಷ ಜನರನ್ನು ಕೊಂದ. ಅಲ್ಲಿಂದ ಕಾಶ್ಮೀರಕ್ಕೆ ಹೋದ ಆ ದಾರಿಯಲ್ಲಿಯೂ ಸಿಕ್ಕವರನ್ನೆಲ್ಲ ಕೊಂದ, ಹೌದು ಆತ ಅವನ ದೇಶದವರಿಗೆ ಹೀರೋ ಆಗಿರಬಹುದು ಆದರೆ ನಮಗಲ್ಲ. ಯಾರೂ ಸಹ ಅವನ ಹೆಸರನ್ನು ಮಕ್ಕಳಿಗೆ ಇಡಬಾರದು. ಸೈಫ್ ಮಾತ್ರವಲ್ಲ ಹಲವರು ಮಕ್ಕಳಿಗೆ ಅವನ ಹೆಸರು ಇಟ್ಟಿದ್ದಾರೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ