
ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಶೀರ್ಷಿಕೆಯಡಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದರ ತಯಾರಿ ಭರದಿಂದ ಸಾಗಿದೆ. ನಟ, ಗಾಯಕ, ನಿರ್ಮಾಪಕ ಹಾಗೂ ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಅವರು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮ ಸೆ.19ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಆಡಿಟೋರಿಯಂನಲ್ಲಿ ನಡೆಯಲಿದೆ. ಇದರಲ್ಲಿ ಭಾರತೀಯ ಸಂಗೀತ, ಸಿನಿಮಾ, ಉದ್ಯಮ, ರಾಜಕೀಯ, ಕ್ರೀಡೆ ಮುಂತಾದ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.
ಹಿರಿಯ ನಟಿ ಶ್ರೀಮತಿ ಭವ್ಯಾ ಅವರು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ‘ಭಾರತೀಯ ಸಂಗೀತ ಲೋಕದ ವಿವಿಧ ಪ್ರಾಕಾರದ ಸಂಗೀತ ಹಾಗೂ ಗೀತೆಗಳನ್ನು ಈ ಕಾರ್ಯಕ್ರಮದ ಮೂಲಕ ಒಂದೇ ವೇದಿಕೆಗೆ ತರುತ್ತಿರುವುದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ. ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮ ತುಂಬ ಅರ್ಥಪೂರ್ಣವಾಗಿ ಮೂಡಿಬರುತ್ತಿದೆ. ಎಲ್ಲಾ ಥರದ ಸಂಗೀತವನ್ನೂ ಆಸ್ವಾದಿಸುವವರಿಗೆ ಈ ಕಾರ್ಯಕ್ರಮ ಹೊಸ ಅನುಭವ ನೀಡಲಿದೆ. ಇಂಥ ಕಾರ್ಯಕ್ರಮ ಆಯೋಜಿಸಿರುವ ಕಮಲ್ ರಾಜ್ (ಕಲೀಂ ಪಾಷಾ) ಅವರ ಪ್ರಯತ್ನ ಮೆಚ್ಚುವಂತಿದೆ’ ಎಂದು ಭವ್ಯಾ ಹೇಳಿದರು.
ಕಮಲ್ ರಾಜ್ ಅವರು ಮಾತನಾಡಿ, ‘ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸೋದರಿ ಉಷಾ ಮಂಗೇಶ್ಕರ್ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಲಿದ್ದಾರೆ. ಭಾರತದ ವಿವಿಧ ಭಾಷೆಯ ಅನೇಕ ಗಾಯಕರು ಹತ್ತಾರು ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಇದು ಬೆಂಗಳೂರು ಹಾಗೂ ಸಮಸ್ತ ಕರ್ನಾಟಕದ ಸಂಗೀತ ಪ್ರೇಮಿಗಳಿಗೆ ಹೆಮ್ಮೆಯ ಐತಿಹಾಸಿಕ ಕ್ಷಣವಾಗಲಿದೆ’ ಎಂದು ಮಾಹಿತಿ ನೀಡಿದರು.
‘ಇದು ಕೇವಲ ಸಂಗೀತ ಕಾರ್ಯಕ್ರಮವಲ್ಲ. ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ನನ್ನ ಕಲಾಯಾತ್ರೆಯನ್ನು ಪ್ರೋತ್ಸಾಹಿಸಿದ, ನನ್ನ ಧ್ವನಿಯನ್ನು ನಂಬಿದ ಮತ್ತು ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬ ಸಂಗೀತಪ್ರೇಮಿಗೂ ಈ ಸಂಗೀತ ಸಂಜೆಯನ್ನು ಅರ್ಪಿಸುತ್ತಿದ್ದೇವೆ’ ಎಂದು ಕಮಲ್ ರಾಜ್ ಅವರು ಹೇಳಿದರು.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗಾಗಿ ವಿಶೇಷ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟಿದ್ದ ಲತಾ ಮಂಗೇಶ್ಕರ್
‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಕ್ಷೇತ್ರದ ಅನೇಕ ಸಂಗೀತಗಾರರು, ಚಿತ್ರರಂಗದ ಅನೇಕ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಈ ಸಂಗೀತ ಸಂಜೆಯಲ್ಲಿ ಶಾಸ್ತ್ರೀಯ ಸಂಗೀತ, ವಿವಿಧ ಭಾಷೆಗಳ ಕಾಲಾತೀತ ಗೀತೆಗಳು, ಜನಪದ ಸೊಗಡಿನ ಸಂಗೀತ ಸಂಗಮ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.