ಯಶ್ ಕಾರಣಕ್ಕೆ ‘ಟಾಕ್ಸಿಕ್’ ಸೋತಿತೆ? ಸಹ ನಟ ಹೇಳಿದ್ದೇನು?
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡಿಲ್ಲ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಅಲ್ಲದಿದ್ದರೂ ಯಶ್ ಅವರು ಹಾಗೂ ಅವರ ಅಭಿಮಾನಿಗಳು ಇರಿಸಿಕೊಂಡಿದ್ದ ಗುರಿಯನ್ನು ತಲುಪಲಿಲ್ಲ. ಯಶ್ ಅವರು ಸಿನಿಮಾದ ಎಲ್ಲ ವಿಭಾಗಗಳಲ್ಲಿಯೂ ಹಸ್ತಕ್ಷೇಪ ಮಾಡಿದ್ದರಿಂದ ಸಿನಿಮಾ ಸೋತಿತು ಎನ್ನಲಾಗುತ್ತಿದೆ. ಈ ಬಗ್ಗೆ ಸಿನಿಮಾದ ನಟ ಅಕ್ಷಯ್ ಒಬೆರಾಯ್ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ಟಾಕ್ಸಿಕ್ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಂಡಿಲ್ಲ
- ಟಾಕ್ಸಿಕ್ ಸಿನಿಮಾದ ಸಾಧಾರಣ ಪ್ರದರ್ಶನಕ್ಕೆ ಯಶ್ ಕಾರಣ ಎನ್ನಲಾಗುತ್ತಿದೆ.
- ಯಶ್ ಅವರ ಹಸ್ತಕ್ಷೇಪವೇ ಟಾಕ್ಸಿಕ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ತಿಂಗಳಾಗುತ್ತಾ ಬರುತ್ತಿದೆ. ಸಿನಿಮಾ ರಿಲೀಸ್ಗೆ ಮುಂಚೆ ಭಾರಿ ಅಬ್ಬರ ಸೃಷ್ಟಿಸಿತ್ತು. ಆದರೆ ಸಿನಿಮಾ ರಿಲೀಸ್ ಆದ ಬಳಿಕ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸಿನಿಮಾ ರಿಲೀಸ್ ಆದ ಆರಂಭದಲ್ಲಿಯೇ ಸಿನಿಮಾದ ಬಗ್ಗೆ ಕೆಲ ಋಣಾತ್ಮಕ ಅಭಿಪ್ರಾಯಗಳು ಹರಿದಾಡಲು ಆರಂಭವಾದವು. ಇದೀಗ ಸಿನಿಮಾದ ಗಳಿಕೆಯಲ್ಲಿ ಸಾಕಷ್ಟು ಇಳಿಕೆ ಕಂಡ ಬಳಿಕವಂತೂ ಈ ಋಣಾತ್ಮಕ ಅಭಿಪ್ರಾಯ ಇನ್ನಷ್ಟು ಹೆಚ್ಚಾಗಿದೆ. ಇದೀಗ ಸಿನಿಮಾದ ಸಾಧಾರಣ ಪ್ರದರ್ಶನಕ್ಕೆ ಯಶ್ ಅವರೇ ಕಾರಣ ಎನ್ನಲಾಗುತ್ತಿದೆ.
ಯಶ್, ಅವರು ಸಿನಿಮಾದ ನಿರ್ದೇಶನ, ಕತೆ, ಚಿತ್ರಕತೆ, ನಿರ್ಮಾಣ ಇನ್ನುಳಿದ ಎಲ್ಲ ವಿಭಾಗಗಳಲ್ಲಿಯೂ ಅತಿಯಾಗಿ ಹಸ್ತಕ್ಷೇಪ ಮಾಡಿದ ಕಾರಣದಿಂದಾಗಿಯೇ ಸಿನಿಮಾ ಹಳಿ ತಪ್ಪಿತು, ಹಾಗಾಗಿ ಸಿನಿಮಾ ಅಂತಿಮವಾಗಿ ಜನರನ್ನು ತಲುಪಲಿಲ್ಲ ಎಂಬ ಮಾತುಗಳು ಇದೀಗ ಕೇಳಿ ಬರಲು ಆರಂಭವಾಗಿವೆ. ಈ ಬಗ್ಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಮಾತನಾಡಿದ್ದು, ಅವರು ಭಿನ್ನವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬ್ನ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅಕ್ಷಯ್ ಒಬೆರಾಯ್, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಪ್ರದರ್ಶನ ಕಾಣದಿದ್ದಾಗ ಉಂಟಾಗುವ ಕಷ್ಟಗಳ ಬಗ್ಗೆ ವಿವರಿಸಿದರು. ‘ಇದು ತುಂಬಾ ಕಷ್ಟಕರ. ಯಾರೊಬ್ಬರ ಮೇಲೂ ತಾವು ದೋಷಹೊರಿಸಲು ಇಷ್ಟಪಡುವುದಿಲ್ಲ. ಚಿತ್ರದ ಹಿನ್ನಡೆಗೆ ನಾನು ಯಾರನ್ನೂ ದೂಷಿಸುವುದಿಲ್ಲ. ನಮಗೆ ತಿಳಿದಿರುವಂತೆ ಎಲ್ಲರೂ ಚಿತ್ರಕ್ಕಾಗಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದ್ದಾರೆ’ ಎಂದರು.
ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್?
ಯಶ್ ಅವರ ಹಸ್ತಕ್ಷೇಪದ ಬಗ್ಗೆ ಹಬ್ಬಿರುವ ವರದಿಗಳ ಬಗ್ಗೆ ಮಾತನಾಡಿರುವ ಅವರು, ಸೆಟ್ನಲ್ಲಿ ತನಗೆ ಅಂತಹ ಯಾವುದೇ ಅನುಭವವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನ ಅನುಭವದಲ್ಲಿ, ನಾನು ಅಂತಹ ಯಾವುದೇ ಹಸ್ತಕ್ಷೇಪವನ್ನು ನೋಡಿಲ್ಲ. ಆದರೆ ನಾನು ಸೆಟ್ನಲ್ಲಿ ಉಪಸ್ಥಿತನಿದ್ದೆ ಮತ್ತು ನನಗೆ ನಿರ್ದೇಶನ ಮಾಡಿದ್ದು ಒಬ್ಬರೇ ವ್ಯಕ್ತಿ – ಅದು ಗೀತು ಮೋಹನ್ದಾಸ್. ಅವರೊಂದಿಗೆ ಮತ್ತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಯಶ್ ಅವರನ್ನು ಮುಕ್ತಕಂಠದಿಂದ ಕೊಂಡಾಡಿದ ಅಕ್ಷಯ್ ಒಬೆರಾಯ್, ‘ಅವರು ಸಂಪೂರ್ಣವಾಗಿ ಭಿನ್ನ ವ್ಯಕ್ತಿ. ‘ಕೆಜಿಎಫ್’ ಮೂಲಕ ಕನ್ನಡ ಸಿನಿಮಾವನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ದರು. ‘ಟಾಕ್ಸಿಕ್’ ಮೂಲಕ ಅದನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದರು’ ಎಂದು ತಿಳಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




