ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಸ್ಪರ್ಧಿಸೋದು ನಿಜವೇ? ಉತ್ತರಿಸಿದ ಧನಂಜಯ

ಅನೇಕ ನಟ-ನಟಿಯರು ರಾಜಕೀಯಕ್ಕೆ ಬಂದು ಯಶಸ್ಸು ಕಂಡಿದ್ದಾರೆ. ಅದೇ ರೀತಿ ಡಾಲಿ ಧನಂಜಯ್​ ಕೂಡ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಬಹುದು ಎಂಬ ಗುಮಾನಿ ಕೂಡ ಕೆಲವರಿಗೆ ಇದೆ. ಈ ಕುರಿತಾಗಿ ಡಾಲಿ ಧನಂಜಯ್​ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ. ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಚುನಾವಣೆಯಲ್ಲಿ ಪ್ರತಾಪ್​ ಸಿಂಹ ವಿರುದ್ಧ ಡಾಲಿ ಸ್ಪರ್ಧಿಸೋದು ನಿಜವೇ? ಉತ್ತರಿಸಿದ ಧನಂಜಯ
ಡಾಲಿ ಧನಂಜಯ್​, ಪ್ರತಾಪ್​ ಸಿಂಹ

Updated on: Feb 22, 2024 | 7:26 AM

ಖ್ಯಾತ ನಟ ಡಾಲಿ ಧನಂಜಯ್​ (Daali Dhananjay) ಅವರು ಸಮಾಜದ ಕೆಲವು ಆಗುಹೋಗುಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಹಾಗಾಗಿ ಅವರು ರಾಜಕೀಯಕ್ಕೆ ಬರಲಿ ಎಂಬ ಆಸೆ ಕೆಲವರಿಗೆ ಇದೆ. ಇತ್ತೀಚೆಗೆ ಆ ಬಗ್ಗೆ ಒಂದು ಗಾಸಿಪ್​ ಹಬ್ಬಿತ್ತು. ಲೋಕಸಭಾ (Loksabha Elections) ಚುನಾವಣೆಯಲ್ಲಿ ಪ್ರತಾಪ್​ ಸಿಂಹ (Prathap Simha) ವಿರುದ್ಧ ಡಾಲಿ ಧನಂಜಯ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ಹರಡಿದೆ. ಈ ಬಗ್ಗೆ ಮೊದಲ ಬಾರಿಗೆ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫೋಟೋ’ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

‘ಕಲಾವಿದರಾದ ನಾವು ಎಮೋಷನಲ್​ ಆಗಿರುತ್ತೇವೆ. ಹಾಗಾಗಿ ಕೆಲವು ಬೆಳವಣಿಗೆಗಳಿಗೆ ರಿಯಾಕ್ಟ್​ ಮಾಡಿರುತ್ತೇವೆ. ರಾಜಕಾರಣ ಬೇರೆ, ನಾಯಕನಾಗಿರುವುದು ಬೇರೆ. ಅದಕ್ಕೆ ಅದರದ್ದೇ ಆದಂತಹ ಗುಣಗಳು ಇರುತ್ತವೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಸಿದ್ಧನಿಲ್ಲ’ ಎಂದು ಡಾಲಿ ಹೇಳಿದ್ದಾರೆ. ಒಂದು ವೇಳೆ ಆಫರ್​ ಬಂದರೆ ರಾಜಕೀಯಕ್ಕೆ ಹೋಗುತ್ತೀರಾ ಎಂದು ಕೇಳಿದ್ದಕ್ಕೆ ‘ಖಂಡಿತಾ ಇಲ್ಲ’ ಎಂದು ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಡಾಲಿ ಸಾಹಿತ್ಯ; ‘ಡೇರ್​ಡೆವಿಲ್​ ಮುಸ್ತಾಫಾ’ ಚಿತ್ರದ ಸಾಲು ಓದಿದ ಸಿಎಂ

‘ನೀವು ಗಮನಿಸಿರಬಹುದು. ಬೇರೆ ಅಭ್ಯರ್ಥಿಗಳ ಪರವಾಗಿ ನಾನು ಚುನಾವಣಾ ಪ್ರಚಾರಗಳಿಗೆ ಹೋಗಿಲ್ಲ. ಯಾರೂ ಕರೆದಿಲ್ಲ ಅಂತೇನೂ ಇಲ್ಲ. ನನಗೂ ಎಲ್ಲ ಪಕ್ಷಗಳಲ್ಲಿ ಗೆಳೆಯರು ಇದ್ದಾರೆ. ಕರೆದಿದ್ದರೂ ಕೂಡ ನಾನು ಎಲೆಕ್ಷನ್​ ಪ್ರಚಾರಕ್ಕೆ ಹೋಗಿಲ್ಲ. ಯಾಕೆಂದರೆ, ಅದರಲ್ಲಿ ತೊಡಗಿಕೊಳ್ಳಲು ನನಗೆ ಇಷ್ಟ ಇಲ್ಲ. ನಾನು ಕಾಮನ್​ ಮ್ಯಾನ್​ ಆಗಿ ಇರುಲು ಇಷ್ಟಪಡುತ್ತೇನೆ. ಈ ಬಾರಿ ಕೂಡ ಎಲೆಕ್ಷನ್ ಕ್ಯಾಂಪೇನ್​ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ’ ಎಂದು ಡಾಲಿ ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿತು ಡಾಲಿ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ಈ ಚಿತ್ರಕ್ಕೆ ಪ್ರಖ್ಯಾತ್​ ಹೀರೋ

‘ರಾಜಕಾರಣ ನನಗೆ ಗೊತ್ತಿಲ್ಲ. ಸಮಾಜದಲ್ಲಿ ಕೆಳಗೆ ಇರುವ ಜನರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡುವವನೇ ಒಳ್ಳೆಯ ನಾಯಕ. ಅವರು ಯಾವ ಪಕ್ಷದಲ್ಲಾದರೂ ಇರಲಿ. ಅವರಿಗೆ ಸ್ಪಂದಿಸುವವರೆಲ್ಲ ಒಳ್ಳೆಯ ಪ್ರಜೆಗಳು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಲಿಡ್ಕರ್​ ಉತ್ಪನ್ನಗಳಿಗೆ ಧನಂಜಯ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗೆ ಬಜೆಟ್​ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಡಾಲಿ ಬರೆದ ಸಾಲುಗಳನ್ನು ಓದಿದ್ದರು. ಈ ಎಲ್ಲ ಕಾರಣಗಳಿಂದಾಗಿ ಧನಂಜಯ್​ ಹೆಸರು ರಾಜಕೀಯ ವಲಯದಲ್ಲಿ ಹೆಚ್ಚು ಕೇಳಿಬರಲು ಆರಂಭಿಸಿದೆ. ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್​ಗಳಿಗೆ ಅವರು ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us