ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ತಮ್ಮ 'ಡಂಕಿ' ಸಿನಿಮಾ ಸೋಲಿಗೆ ವಿಚಿತ್ರ ಕಾರಣ ನೀಡಿದ್ದಾರೆ. ಭಾರತದ ಪ್ರೇಕ್ಷಕರಿಗೆ ಅಕ್ರಮ ವಲಸೆ ಕಥೆ ಕನೆಕ್ಟ್ ಆಗಲಿಲ್ಲ ಎಂಬ ಅವರ ಹೇಳಿಕೆ ಟೀಕೆಗೆ ಗುರಿಯಾಗಿದೆ. ಸಿದ್ದಾರ್ಥ್ ಆನಂದ್ ಅವರ 'ಫೈಟರ್' ಸಿನಿಮಾ ಸೋಲಿನ ಹೇಳಿಕೆಗೆ ಇದು ಹೋಲಿಕೆಯಾಗಿದೆ. ಕಥೆಯ ವೈಫಲ್ಯವನ್ನು ಪ್ರೇಕ್ಷಕರ ಮೇಲೆ ಹೇರಲಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಹಿರಾನಿ ಹೇಳಿಕೆಯನ್ನು ಖಂಡಿಸಿದ್ದಾರೆ

ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ
ಹಿರಾನಿ-ಶಾರುಖ್

Updated on: Jun 26, 2026 | 1:11 PM

ಮುಖ್ಯಾಂಶಗಳು

  • ಅಂದುಕೊಂಡ ಮಟ್ಟಕ್ಕೆ ಗಳಿಸಿಲ್ಲ ‘ಡಂಕಿ’
  • ಸೋಲಿಗೆ ವಿಚಿತ್ರ ಕಾರಣ ಕೊಟ್ಟ ಹಿರಾನಿ
  • ಸಿದ್ದಾರ್ಥ್​ ಆನಂದ್ ಕೂಡ ಹೀಗೆಯೇ ಮಾಡಿದ್ರು

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ಸೋಲು ಹೊಸತು. ಅವರು ಹೆಚ್ಚು ಸೋಲು ಕಂಡವರಲ್ಲ. ಈಗ ಅವರು ಸೋಲಿನ ಬಗ್ಗೆ ನೀಡಿದ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಯಶಸ್ಸು ಕಾಣದಿದ್ದಕ್ಕೆ ಹಿರಾನಿ ವಿಚಿತ್ರ ಕಾರಣ ನೀಡಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ‘ಡಂಕಿ’ ಸಿನಿಮಾದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಕೆಲ ಭಾರತೀಯರು ಅಕ್ರಮ ಮಾರ್ಗದ ಮೂಲಕ ಅಮೆರಿಕಾಗೆ ತೆರಳುವ ಕಥೆಯನ್ನು ಹೇಳಲಾಗಿತ್ತು. ಈ ವಿಷಯವು ಭಾರತದ ಬಹುಪಾಲು ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ ಎಂಬುದು ಅವರ ವಾದ. ಹಾಗಾಗಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಲಿಲ್ಲ ಎಂದು ಹಿರಾನಿ ಹೇಳಿದ್ದಾರೆ.

ಸಿದ್ದಾರ್ಥ್ ಆನಂದ್ ಹೇಳಿಕೆಗೆ ಹೋಲಿಕೆ

ರಾಜ್‌ಕುಮಾರ್ ಹಿರಾನಿ ಅವರ ಈ ಹೇಳಿಕೆಯು ಈ ಹಿಂದೆ ನಿರ್ದೇಶಕ ಸಿದ್ದಾರ್ಥ್ ಆನಂದ್ ನೀಡಿದ್ದ ಹೇಳಿಕೆಯನ್ನು ನೆನಪಿಸುವಂತಿದೆ. ‘ಫೈಟರ್’ ಸಿನಿಮಾ ಸೋತಾಗ ಸಿದ್ದಾರ್ಥ್ ಆನಂದ್ ಕೂಡ ಇದೇ ರೀತಿಯ ವಾದ ಮಾಡಿದ್ದರು. ಭಾರತದ ಶೇಕಡಾ 90 ರಷ್ಟು ಜನ ಇನ್ನು ವಿಮಾನ ಪ್ರಯಾಣ ಮಾಡಿಲ್ಲ. ಹಾಗಾಗಿ ಅವರಿಗೆ ‘ಫೈಟರ್’ ಚಿತ್ರದ ಕಥೆ ಅರ್ಥವಾಗಲಿಲ್ಲ ಎಂದು ಸಿದ್ದಾರ್ಥ್ ಹೇಳಿದ್ದರು.

ಅಂದು ಸಿದ್ದಾರ್ಥ್ ಆನಂದ್ ಅವರ ಮಾತಿಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಚಿತ್ರದ ಕಥೆಯ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರೇಕ್ಷಕರ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಜನ ಆಕ್ರೋಶ ಹೊರಹಾಕಿದ್ದರು. ಈಗ ಹಿರಾನಿ ಕೂಡ ಅದೇ ಹಾದಿ ಹಿಡಿದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಪ್ರೇಕ್ಷಕರ ಆಕ್ಷೇಪವೇನು?

ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರು ಹಿರಾನಿ ಅವರ ತರ್ಕವನ್ನು ಒಪ್ಪುತ್ತಿಲ್ಲ. ಯಾವುದೇ ಒಂದು ಸಿನಿಮಾ ಗೆಲ್ಲಲು ಅದರ ಕಥೆ ಹೇಳುವ ಶೈಲಿ, ಭಾವನಾತ್ಮಕ ಆಳ ಮತ್ತು ಮೇಕಿಂಗ್ ಮುಖ್ಯವಾಗಿರುತ್ತದೆ. ಪ್ರೇಕ್ಷಕರು ಆ ಘಟನೆಯನ್ನು ಸ್ವತಃ ಅನುಭವಿಸಿರಬೇಕು ಎಂಬ ನಿಯಮ ಎಲ್ಲೂ ಇಲ್ಲ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ಯಾವುದೋ ಹಾರರ್ ಸಿನಿಮಾ ಹಿಟ್ ಆಯಿತು ಎಂದರೆ, ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕನಿಗೂ ನಿಜ ಜೀವನದಲ್ಲಿ ದೆವ್ವದ ಅನುಭವ ಆಗಿತ್ತು, ಅದಕ್ಕೆ ಹಿಟ್ ಆಯಿತು ಎಂದು ಹೇಳಲು ಸಾಧ್ಯವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ, ಹೇಳಿದ್ದೇನು?

ಜೀವನದಲ್ಲಿ ಎಂದೂ ನೋಡಿರದ ಪ್ರಪಂಚದ ಕಥೆಗಳನ್ನು ಹೊಂದಿದ್ದ ಎಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ರಾಜ್‌ಕುಮಾರ್ ಹಿರಾನಿ ಅವರಂತಹ ಹಿರಿಯ ನಿರ್ದೇಶಕರಿಂದ ಇಷ್ಟು ಸರಳವಾದ ಮತ್ತು ಜವಾಬ್ದಾರಿಯಿಲ್ಲದ ಉತ್ತರವನ್ನು ಯಾರು ನಿರೀಕ್ಷಿಸಿರಲಿಲ್ಲ ಎಂದು ಸಿನಿ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:10 pm, Fri, 26 June 26

Follow Us