
ಸಿನಿಮಾ (Cinema) ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳ ಈ ಕಾಲದಲ್ಲಿ ಸುಳ್ಳು ಸುದ್ದಿಗಳು ಬಹು ಬೇಗ ಹರಡುತ್ತವೆ. ಕೆಲವು ಯೂಟ್ಯೂಬ್ ಚಾನೆಲ್ಗಳಂತೂ ವೀವ್ಸ್ಗಾಗಿ ಸಿನಿಮಾ ನಟ-ನಟಿಯರಿಗೆ ಸಂಬಂಧಿಸಿದ ಅತಿ ರಂಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತವೆ. ಹಲವು ಸಿನಿಮಾ ನಟ-ನಟಿಯರು ಇಂಥಹಾ ಚಾನೆಲ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಿದೆ. ಆದರೆ ಈ ಕುಕೃತ್ಯ ದಕ್ಷಿಣ ಭಾರತದಲ್ಲಿ ತುಸು ಕಡಿಮೆ ಇತ್ತು. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ ಕುರಿತು ಸುಳ್ಳು ಸುದ್ದಿ ಮತ್ತು ತಿರುಚಿದ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್ ಒಂದು ಹಂಚಿಕೊಂಡಿದ್ದು, ಚಾನೆಲ್ ವಿರುದ್ಧ ದೂರು ದಾಖಲಾಗಿದೆ.
ಯೂಟ್ಯೂಬ್ ಚಾನೆಲ್ ಒಂದು ಚಿರಂಜೀವಿ ಅವರ ತಿದ್ದಿದ ಚಿತ್ರಗಳನ್ನು ಬಳಸಿ ನಟನ ಬಗ್ಗೆ ಸುಳ್ಳು ಸುದ್ದಿ ಹರಿಡಿಸುತ್ತಿರುವ ಕುರಿತಾಗಿ ವಕೀಲರೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದು, ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ಚಾನೆಲ್ಗೆ ಸಂಬಂಧಿಸಿದ ಮಾಹಿತಿ ಜೊತೆಗೆ ಕೆಲವು ಸ್ಕ್ರೀನ್ ಶಾಟ್ಗಳು ಮತ್ತು ವಿಡಿಯೋಗಳನ್ನು ವಕೀಲ ರಾಮಕೃಷ್ಣ ಮಿರಿಯಾಲ ಅವರು ಪೊಲೀಸರಿಗೆ ನೀಡಿದ್ದಾರೆ. ವಕೀಲರ ದೂರು ಆಧರಿಸಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:‘ಪೆದ್ದಿ’ ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಮೆಗಾಸ್ಟಾರ್ ಚಿರಂಜೀವಿ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿದ್ದು, ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಆಸ್ತಿ, ಸಿನಿಮಾ, ಕುಟುಂಬದ ಬಗ್ಗೆ ಹಾಗೂ ವ್ಯಕ್ತಿತ್ವದ ಬಗ್ಗೆ ಸುಳ್ಳು ಸುದ್ದಿಗಳನ್ನು ಯೂಟ್ಯೂಬ್ ಚಾನೆಲ್ನಲ್ಲಿ ಹರಿಬಿಡಲಾಗಿತ್ತಂತೆ. ಈ ಬಗ್ಗೆ ಚಿರಂಜೀವಿ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೀಗ ಕಾನೂನಾತ್ಮಕವಾಗಿ ಯೂಟ್ಯೂಬ್ ಚಾನೆಲ್ ಅನ್ನು ಬಂದ್ ಮಾಡುವ ಪ್ರಯತ್ನ ಚಾಲ್ತಿಯಲ್ಲಿದೆ.
ಚಿರಂಜೀವಿ ನಟನೆಯ ‘ಮನ ಶಂಕರ ವರಪ್ರಸಾದ್ ಗಾರು’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ‘ವಿಶ್ವಂಭರ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ನಿರ್ದೇಶಕ ಬಾಬಿ ಜೊತೆಗೆ ಒಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಒದೆಲ ನಿರ್ದೇಶನ ಮಾಡಲಿರುವ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದು ಆ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡುತ್ತಿದೆ. ಇನ್ನೂ ಕೆಲವು ಸಿನಿಮಾಗಳು ಚಿರಂಜೀವಿ ಕೈಯಲ್ಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ