
‘ಹೇರಾ ಫೇರಿ 3’ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಚಿತ್ರದ ನಿರ್ದೇಶನದಿಂದ ಪ್ರಿಯದರ್ಶನ್ ಹೊರನಡೆದಿದ್ದಾರೆ. ಕಾನೂನು ಸಂಘರ್ಷಗಳ ಕಾರಣದಿಂದ ಈ ಸಿನಿಮಾ ಥಿಯೇಟರ್ಗೆ ಬರುವುದು ಅನುಮಾನ ಎಂದು ಅವರು ಹೇಳಿದ್ದಾರೆ. ಈಗ ಅವರು ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯದರ್ಶನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿರ್ಮಾಪಕ ಫಿರೋಜ್ ತಮಗೆ ಹಲವು ಬಾರಿ ಅಪಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಪ್ರಿಯದರ್ಶನ್ ಜೊತೆ ಎಂದಿಗೂ ಹೇರಾ ಫೇರಿ 3 ಮಾಡಬೇಡಿ ಎಂದು ಫಿರೋಜ್ ಅವರು ಅಕ್ಷಯ್ ಕುಮಾರ್ಗೆ ಹೇಳಿದ್ದರು. ನಾನು ಮಾಡಿದ ಮೊದಲ ಭಾಗದ ಎಡಿಟಿಂಗ್ ಕಳಪೆಯಾಗಿತ್ತು ಎಂದು ಫಿರೋಜ್ ಟೀಕಿಸಿದ್ದರು. ನಾನು ಮಾಡಿದ 5 ಗಂಟೆಯ ಸಿನಿಮಾವನ್ನು ತಾವೇ ಎಡಿಟ್ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು’ ಎಂದು ಪ್ರಿಯದರ್ಶನ್ ನೆನಪಿಸಿಕೊಂಡಿದ್ದಾರೆ.
ಈ ಫ್ರಾಂಚೈಸಿಯನ್ನು ದೇಶದ ದೊಡ್ಡ ಸಿನಿಮಾವನ್ನಾಗಿ ಮಾಡುವ ಆಸೆ ತಮಗಿತ್ತು ಎಂದು ಪ್ರಿಯದರ್ಶನ್ ಹೇಳಿದ್ದಾರೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕೋರಿಕೆಯ ಮೇರೆಗೆ ಅವರು ಮೂರನೇ ಭಾಗಕ್ಕೆ ಒಪ್ಪಿಕೊಂಡಿದ್ದರು. ಕಥೆ ಕೇಳಿ ನಟರೆಲ್ಲರೂ ಉತ್ಸುಕರಾಗಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಸೆಟ್ಟೇರುವುದು ಕಷ್ಟ ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ. ತಾವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಕಾನೂನು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಸಿನಿಮಾ ಬರುವುದು ಅನುಮಾನ ಎಂದಿದ್ದಾರೆ.
ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರ ಸೆಟ್ಟೇರೋದೇ ಡೌಟ್; ಅಕ್ಷಯ್ ಜೊತೆ ಬೇರೆ ಸಿನಿಮಾ ಶುರು
ಈ ಸಿನಿಮಾದ ಹಕ್ಕುಗಳ ವಿಚಾರವಾಗಿ ಸದ್ಯ ಕಾನೂನು ಹೋರಾಟ ನಡೆಯುತ್ತಿದೆ. ದಕ್ಷಿಣ ಭಾರತದ ಪ್ರೊಡಕ್ಷನ್ ಹೌಸ್ ‘ಸೆವೆನ್ ಆರ್ಟ್ಸ್ ಇಂಟರ್ನ್ಯಾಷನಲ್’ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಫಿರೋಜ್ ನಡಿಯಾಡ್ವಾಲಾ ಅವರಿಗೆ ಕೇವಲ ಮಲಯಾಳಂನ ‘ರಾಮ್ಜೀ ರಾವ್ ಸ್ಪೀಕಿಂಗ್’ ಚಿತ್ರವನ್ನು ರಿಮೇಕ್ ಮಾಡಲು ಮಾತ್ರ ಹಕ್ಕು ಇತ್ತು ಎಂದು ಸಂಸ್ಥೆ ವಾದಿಸಿದೆ. ಆದರೆ ನಿರ್ಮಾಪಕರು ನಿಯಮ ಮೀರಿ ಎರಡನೇ ಭಾಗ ಮಾಡಿದರು. ಈಗ ಮೂರನೇ ಭಾಗದ ಹಕ್ಕನ್ನು ಅಕ್ಷಯ್ ಕುಮಾರ್ ಅವರ ಸಂಸ್ಥೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:11 am, Sat, 4 July 26