ಅದು ನನ್ನ ಹಾಡು ಎಂದು ಹೋಗಿದ್ದ ಇಳಯರಾಜಗೆ ಕೋರ್ಟ್​​ನಲ್ಲಿ ಭಾರೀ ಹಿನ್ನಡೆ

ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ 'ಎನ್ ಇನಿಯ ಪೊನ್ ನಿಲವೆ' ಹಾಡಿನ ಕೃತಿಸ್ವಾಮ್ಯ ವಿವಾದದಲ್ಲಿ ದೆಹಲಿ ಹೈಕೋರ್ಟ್‌ನಿಂದ ಹಿನ್ನಡೆಯಾಗಿದೆ. ಹಾಡಿನ ಟ್ಯೂನ್‌ಗೆ ಮಾತ್ರ ಇಳಯರಾಜ ಹಕ್ಕುದಾರರು; ಸಾಹಿತ್ಯ ಮತ್ತು ಸೌಂಡ್ ರೆಕಾರ್ಡ್ ಹಕ್ಕು ಸರೆಗಮಗೆ ಸೇರಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ಇದು ಇಳಯರಾಜರ ದಶಕಗಳ ಕಾಲದ ಕೃತಿಸ್ವಾಮ್ಯ ಹೋರಾಟಕ್ಕೆ ಮತ್ತೊಂದು ಮಹತ್ವದ ತಿರುವು ನೀಡಿದೆ.

ಅದು ನನ್ನ ಹಾಡು ಎಂದು ಹೋಗಿದ್ದ ಇಳಯರಾಜಗೆ ಕೋರ್ಟ್​​ನಲ್ಲಿ ಭಾರೀ ಹಿನ್ನಡೆ
ಇಳಯರಾಜ

Updated on: May 22, 2026 | 11:52 AM

ಸಂಗೀತ ಮಾಂತ್ರಿಕ ಇಳಯರಾಜ ಅವರು ಇತ್ತೀಚಗೆ ಹಾಡುಗಳಿಗಿಂತ ಹೆಚ್ಚು ಕೇಸ್ ಮೂಲಕ ಸುದ್ದಿ ಆಗುತ್ತಿದ್ದಾರೆ. ಅವರು ಕಂಪೋಸ್ ಮಾಡಿದ ಸಾಂಗ್ ಯಾವುದೇ ಸಿನಿಮಾದಲ್ಲಿ ಬಳಕೆ ಆದರೂ ಅದು ನನ್ನದು, ನನ್ನ ಒಪ್ಪಿಗೆ ಇಲ್ಲದೆ ಹಾಡು ಬಳಕೆ ಆಗಿದೆ ಎಂದು ದೂರುತ್ತಿದ್ದರು. ಈಗ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. 1981ರ ತಮಿಳಿನ ಸೂಪರ್ ಹಿಟ್ ಚಿತ್ರ ‘ಮೂಡು ಪನಿ’ ಚಿತ್ರದ ಕೆ.ಜೆ. ಯೇಸುದಾಸ್ ಹಾಡಿರುವ ಐಕಾನಿಕ್ ಗೀತೆ ‘ಎನ್ ಇನಿಯ ಪೊನ್ ನಿಲವೆ’ ಹಾಡಿನ ಸಂಪೂರ್ಣ ಕೃತಿಸ್ವಾಮ್ಯ ಇಳಯರಾಜ ಅವರಿಗೆ ಸೇರಿದ್ದಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಜಸ್ಟಿಸ್ ಸಿ. ಹರಿ ಶಂಕರ್ ಮತ್ತು ಜಸ್ಟಿಸ್ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು, ‘ಹಾಡಿನ ಕೇವಲ ಟ್ಯೂನ್ ಅಥವಾ ಸಂಗೀತ ಸಂಯೋಜನೆಯ ಮೇಲಷ್ಟೇ ಇಳಯರಾಜ ಅವರಿಗೆ ಹಕ್ಕಿದೆ. ಆದರೆ ಅದರ ಸಾಹಿತ್ಯ ಮತ್ತು ಸೌಂಡ್​ ರೆಕಾರ್ಡ್​​ನ ಸಂಪೂರ್ಣ ಮಾಲೀಕತ್ವ ಆಡಿಯೋ ಸಂಸ್ಥೆ ‘ಸರೆಗಮ’ ಕಂಪನಿಗೆ ಸೇರುತ್ತದೆ’ ಎಂದು ಹೇಳಿದೆ.

‘ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್’ ಸಂಸ್ಥೆಯು ತನ್ನ ಮುಂಬರುವ ಚಿತ್ರವೊಂದರಲ್ಲಿ ಈ ಹಾಡನ್ನು ಮರುಬಳಕೆ ಮಾಡಲು ಇಳಯರಾಜ ಅವರಿಂದ ಅನುಮತಿ ಪಡೆದಿತ್ತು. ಇದನ್ನು ಪ್ರಶ್ನಿಸಿ ಸರೆಗಮಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. 1980ರಲ್ಲೇ ಚಿತ್ರದ ನಿರ್ಮಾಪಕರಿಂದ ತಾವು ಅಧಿಕೃತವಾಗಿ ಹಾಡಿನ ಹಕ್ಕುಗಳನ್ನು ಖರೀದಿಸಿರುವುದಾಗಿ ಸರೆಗಮಾ ವಾದಿಸಿತ್ತು. ಕೋರ್ಟ್ ಈ ವಾದವನ್ನು ಪುರಸ್ಕರಿಸಿದ್ದು, ಇಳಯರಾಜ ಅವರು ಕೇವಲ ಟ್ಯೂನ್ ಮಾಲೀಕರಾಗಿದ್ದು, ಸಾಹಿತ್ಯ ಮತ್ತು ರೆಕಾರ್ಡ್​ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇಳಯರಾಜ ಅವರು ತಾವು ಕಂಪೋಸ್ ಮಾಡಿದ ಹಾಡುಗಳಿಗೆ ಕಾನೂನು ಹೋರಾಟ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (IPR) ಮತ್ತು ರಾಯಲ್ಟಿ ವಿಷಯದಲ್ಲಿ ಅವರು ದಶಕಗಳಿಂದ ಕಟ್ಟುನಿಟ್ಟಿನ ನಿಲುವು ಹೊಂದಿದ್ದಾರೆ:

ಎಸ್.ಪಿ.ಬಿ ವಿರುದ್ಧ ನೋಟಿಸ್ ನೀಡಿ ಇಳಯರಾಜ ಅಚ್ಚರಿ ಮೂಡಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ಕೆ.ಎಸ್. ಚಿತ್ರಾ ಇಳಯರಾಜ ಅವರಿಗೆ ಆಪ್ತರು. ಆದರೂ, ತಮ್ಮ ಅನುಮತಿಯಿಲ್ಲದೆ ದೇಶ-ವಿದೇಶಗಳ ಕಾನ್ಸರ್ಟ್​​​ನಲ್ಲಿ ತಮ್ಮ ಹಾಡುಗಳನ್ನು ಹಾಡುವಂತಿಲ್ಲ ಎಂದು ಲೀಗಲ್ ನೋಟಿಸ್ ನೀಡಿ ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತೆ ಮಾಡಿದ್ದರು.

ಇದನ್ನೂ ಓದಿ:  ಇಳಯರಾಜ ಹಾಡು ಬಳಸಿದರೂ ಬಿದ್ದಿಲ್ಲ ಕಾಪಿ ರೈಟ್ಸ್; ಟೆಕ್ನಿಕ್ ತಿಳಿಸಿದ ನಿರ್ದೇಶಕ

ಮಲಯಾಳಂ ಬ್ಲಾಕ್‌ಬಸ್ಟರ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದಲ್ಲಿ ‘ಗುಣ’ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡನ್ನು ಬಳಸಿದ್ದಕ್ಕೆ ಹಾಗೂ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದ ಟೀಸರ್‌ನಲ್ಲಿ ತಮ್ಮ ಹಳೆಯ ಹಾಡನ್ನು ಬಳಸಿದ್ದಕ್ಕಾಗಿ ನಿರ್ಮಾಣ ಸಂಸ್ಥೆಗಳಿಗೆ ಕೃತಿಸ್ವಾಮ್ಯ ಉಲ್ಲಂಘನೆಯ ನೋಟಿಸ್ ಕಳುಹಿಸಿ ಕೋಟ್ಯಂತರ ರೂಪಾಯಿ ಪರಿಹಾರ ಕೋರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us