‘ಜನ ನಾಯಗನ್’ ವಿವಾದ: ಸಿಬಿಎಫ್ಸಿ ಮಾಡಿದ್ದೇನು? ವಿವರಿಸಿದ ನಿರ್ಮಾಪಕ
Jana Nayagan movie: ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ದೊರೆಯದೆ ಬಿಡುಗಡೆ ತಡವಾಗಿದೆ. ಪ್ರಕರಣ ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿದೆ. ಸಿಬಿಎಫ್ಸಿಯು ಉದ್ದೇಶಪೂರ್ವಕವಾಗಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿಲ್ಲ ಎನ್ನಲಾಗುತ್ತಿದೆ. ಸಿನಿಮಾದ ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಅವರು ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ.

ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಜನವರಿ 09ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿಯು ಪ್ರಮಾಣ ಪತ್ರ ನೀಡಲು ಹಿಂಜರಿದ ಕಾರಣ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿತು, ಜನವರಿ 09ರಂದು ಮದ್ರಾಸ್ ಹೈಕೋರ್ಟ್, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಬೇಕೆಂದು ಆದೇಶಿಸಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮದ್ರಾಸ್ ಹೈಕೋರ್ಟ್ನ ಮತ್ತೊಂದು ಪೀಠ ಆದೇಶಕ್ಕೆ ತಡೆ ನೀಡಿತು. ಹೀಗಾಗಿ ಸಿನಿಮಾ ಬಿಡುಗಡೆ ಮತ್ತಷ್ಟು ಮುಂದೆ ಹೋಗಿದೆ. ಸಿನಿಮಾದ ಬಿಡುಗಡೆಯೇ ಅನಿಶ್ಚತತೆಗೆ ಒಳಗಾಗಿದೆ. ಇದೀಗ ಸಿನಿಮಾದ ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಜನ ನಾಯಗನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ನ ಮಾಲೀಕರಾದ ವೆಂಕಟ್ ನಾರಾಯಣ್ ವಿಡಿಯೋನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ‘ಜನ ನಾಯಗನ್’ ಸಿನಿಮಾವನ್ನು 18 ಡಿಸೆಂಬರ್ 2025 ರಂದು ಸಿಬಿಎಫ್ಸಿಗೆ ಸಲ್ಲಿಕೆ ಮಾಡಲಾಗಿತ್ತು. 22ರ ಡಿಸೆಂಬರ್ ತಿಂಗಳಲ್ಲಿ ಸಿಬಿಎಫ್ಸಿಯು ಇಮೇಲ್ ಮಾಡಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದು, ಸಿನಿಮಾಕ್ಕೆ ಕೆಲವು ಕಟ್ಗಳನ್ನು ಸಹ ಸೂಚಿಸಿತ್ತು. ಅದರಂತೆ ಚಿತ್ರತಂಡವು ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿ ಡಿಸೆಂಬರ್ 22ಕ್ಕೆ ಮತ್ತೆ ಸಿನಿಮಾವನ್ನು ಸಿಬಿಎಫ್ಸಿಗೆ ಸಲ್ಲಿಕೆ ಮಾಡಿತ್ತು.
ವೆಂಕಟ್ ಅವರು ಹೇಳಿರುವಂತೆ, ‘ಸಿಬಿಎಫ್ಸಿಯು, ‘ಜನ ನಾಯಗನ್’ ಬಗ್ಗೆ ಬಂದ ಒಂದು ದೂರನ್ನು ಪರಿಗಣಿಸಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ನಿರ್ಧಾರ ಮಾಡಿತು. ಆದರೆ ನಮಗೆ ಬಿಡುಗಡೆ ದಿನಾಂಕ ಹತ್ತಿರ ಇದ್ದಿದ್ದರಿಂದ ಹಾಗೂ ದೂರುದಾರರು ಯಾರು ಎಂಬ ಮಾಹಿತಿಯೂ ಸಹ ಇಲ್ಲವಾದ ಕಾರಣ, ನಾವು ಮದ್ರಾಸ್ ಹೈಕೋರ್ಟ್ನ ಮೆಟ್ಟಿಲೇರಿದೆವು. ಜನವರಿ 06 ಮತ್ತು 7 ರಂದು ವಿಚಾರಣೆ ನಡೆಸಿದ ನ್ಯಾಯಾಲಯವು. ಜನವರಿ 09ರಂದು ‘ಜನ ನಾಯಗನ್’ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಬೇಕೆಂದು ಆದೇಶ ಹೊರಡಿಸಿತು’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಾವು ಸ್ಪರ್ಧಿಸೋ ಕ್ಷೇತ್ರದ ಹೆಸರು ಘೋಷಿಸಿದ ದಳಪತಿ ವಿಜಯ್; ಮೈತ್ರಿ ವಿಚಾರವಾಗಿ ಅಚ್ಚರಿಯ ಹೇಳಿಕೆ
‘ಆದರೆ ಸಿಬಿಎಫ್ಸಿಯು ಅದೇ ದಿನ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿಯೇ ಮೇಲ್ಮನವಿ ಸಲ್ಲಿಸಿತು. ಈ ಕಾರಣದಿಂದಾಗಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬೇಕು ಎಂದು ಹೊರಡಿಸಲಾಗಿದ್ದ ಆದೇಶದ ಮೇಲೆ ತಡೆ ನೀಡಲಾಯ್ತು. ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ. ನಮಗೆ ನ್ಯಾಯ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದ್ದು, ಆದಷ್ಟು ಶೀಘ್ರ ನಾವು ಸಿನಿಮಾವನ್ನು ಜನರ ಎದುರು ತರಲಿದ್ದೇವೆ’ ಎಂದಿದ್ದಾರೆ ವೆಂಕಟ್.
‘ದಳಪತಿ ವಿಜಯ್ ಅವರು ದಶಕಗಳ ಕಾಲ ಚಿತ್ರರಂಗಕ್ಕೆ ನೀಡಿದ ಸೇವೆ, ಮನೊರಂಜನೆಗೆ ಒಂದು ಅದ್ಭುತವಾದ ವಿದಾಯವನ್ನು ಸಿನಿಮಾ ಮೂಲಕ ನೀಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದಕ್ಕೆ ಅಡ್ಡಿಗಳು ಎದುರಾಗಿದೆ. ಇದು ನಮಗೆ ಕಠಿಣವಾದ ಮತ್ತು ಭಾವುಕವಾದ ಸಮಯ. ಇಂಥಹಾ ಸಮಯದಲ್ಲಿ ನಾವು ಸಿನಿಮಾವನ್ನು ಜನರ ಮುಂದೆ ತರಲು ಶಕ್ತಿ ಮೀರಿ ಯತ್ನಿಸುತ್ತಿದ್ದೇವೆ. ಇಂಥಹಾ ಸಮಯದಲ್ಲಿ ಪ್ರೇಕ್ಷಕರು, ಸಿನಿಮಾ ವಿತರಕರು, ಪ್ರದರ್ಶಕರು ಮತ್ತು ನಮ್ಮ ಸಹ ಬಂಡವಾಳದಾರರು ನಮಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ ವೆಂಕಟ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Sat, 10 January 26




