ನಟ ಸೂರ್ಯ ಎಸ್‌ಜೆ ಸಿನಿಮಾ ಸೆಟ್​​​ನಲ್ಲಿ ಅವಘಡ; ಓರ್ವ ಸಾವು

'ಕಿಲ್ಲರ್' ಚಿತ್ರೀಕರಣದ ವೇಳೆ ಭೀಕರ ದುರಂತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ 26 ವರ್ಷದ ತಂತ್ರಜ್ಞ ಮದನ್ ಸಾವನ್ನಪ್ಪಿದ್ದಾರೆ, ಮೂವರು ಗಾಯಗೊಂಡಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳ ಬಗ್ಗೆ ತನಿಖೆ ನಡೆಯುತ್ತಿದೆ. ಚಿತ್ರೀಕರಣದ ಸ್ಥಳದಲ್ಲಿ ನಡೆದ ಈ ಘಟನೆ ತೀವ್ರ ಆತಂಕ ಸೃಷ್ಟಿಸಿದೆ.

ನಟ ಸೂರ್ಯ ಎಸ್‌ಜೆ ಸಿನಿಮಾ ಸೆಟ್​​​ನಲ್ಲಿ ಅವಘಡ; ಓರ್ವ ಸಾವು
ಎಸ್​​ಜೆ ಸೂರ್ಯ
Edited By:

Updated on: Jun 04, 2026 | 7:22 AM

ತಮಿಳಿನ ಖ್ಯಾತ ನಟ ಎಸ್‌ಜೆ ಸೂರ್ಯ (SJ Surya) ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಲ್ಲರ್’ ಸಿನಿಮಾದ ಚಿತ್ರೀಕರಣದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಶೂಟಿಂಗ್ ಸೆಟ್‌ನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಚಿತ್ರತಂಡದ 26 ವರ್ಷದ ಯುವ ತಂತ್ರಜ್ಞರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಚೆನ್ನೈನ ಪ್ರಸಿದ್ಧ ಬಿನ್ನಿ ಮಿಲ್ಸ್‌ನಲ್ಲಿ ‘ಕಿಲ್ಲರ್’ ಸಿನಿಮಾದ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿತ್ತು. ಮುಂಜಾನೆಯ ವೇಳೆಯಲ್ಲಿ ಚಿತ್ರದ ಪ್ರಮುಖ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸಲು ತಂಡ ಸಜ್ಜಾಗಿತ್ತು. ಈ ಆ್ಯಕ್ಷನ್ ಸೀನ್‌ಗಾಗಿ ವಿಶೇಷ ಎಫೆಕ್ಟ್ಸ್ ನೀಡಲು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ, ಹಠಾತ್ ಆಗಿ ಸಿಲಿಂಡರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ತಂತ್ರಜ್ಞರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಎಚ್ಚೆತ್ತ ಚಿತ್ರತಂಡ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿತು. ಆದರೆ, ದುರದೃಷ್ಟವಶಾತ್ ಮದನ್ ಎಂಬುವವರು ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ಮೂವರು ತಂತ್ರಜ್ಞರಾದ ಶಕ್ತಿವೇಲ್, ಸೂರ್ಯ ಮತ್ತು ದಿನಕರನ್ ಅವರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ದುರಂತದ ಬೆನ್ನಲ್ಲೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಷ್ಟು ದೊಡ್ಡ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸುವ ಮುನ್ನ ಚಿತ್ರತಂಡ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಈ ಭೀಕರ ಸ್ಫೋಟಕ್ಕೆ ಕೇವಲ ತಾಂತ್ರಿಕ ದೋಷ ಕಾರಣವೇ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಚಿತ್ರೀಕರಣದ ಸ್ಥಳದಲ್ಲಿದ್ದ ಇತರ ತಂತ್ರಜ್ಞರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿದ ಸೂರ್ಯ

ಪ್ರಕರಣದ ಪ್ರಾಥಮಿಕ ತನಿಖೆಯ ಬಳಿಕ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೆಟ್‌ಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಿದ್ದ ವೆಂಡರ್ ರಾಮು ಹಾಗೂ ಸಿಲಿಂಡರ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೇಲ್ವಿಚಾರಕ ಆರ್ಮುಗಂ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Web contact

TV9 Kannada

Read More
Follow Us