ಮಂಗಳೂರು ಮೂಲದ ಚೆಲುವೆ ಕೃತಿ ಶೆಟ್ಟಿ (Krithi Shetty) ಕಡಿಮೆ ಅವಧಿಯಲ್ಲಿ ಬೇಡಿಕೆಯ ನಟಿಯಾದರು ಆದರೆ ಅಷ್ಟೇ ವೇಗವಾಗಿ ಬೇಡಿಕೆ ಕಳೆದುಕೊಂಡಿದ್ದರು ಸಹ. ಕೋವಿಡ್ ಸಮಯದಲ್ಲಿ ಬಿಡುಗಡೆ ಆದ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದ ಕೃತಿ ಶೆಟ್ಟಿ, ಮೊದಲ ಸಿನಿಮಾದಲ್ಲಿಯೇ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಜನಪ್ರಿಯತೆ ಗಳಿಸಿದರು. ಆರಂಭದಲ್ಲಿ ಒಂದರ ಹಿಂದೊಂದು ಒಳ್ಳೆಯ ಸಿನಿಮಾ ಅವಕಾಶಗಳನ್ನು ಬಾಚಿಕೊಂಡ ಕೃತಿ ಶೆಟ್ಟಿ ಇತ್ತೀಚೆಗೆ ತುಸು ಮಂಕಾಗಿದ್ದರು. ಆದರೆ ಈಗ ಒಮ್ಮೆಲೆ ಇಬ್ಬರು ಸ್ಟಾರ್ ನಟರೊಟ್ಟಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಕೃತಿ ಶೆಟ್ಟಿಗೆ ಆರಂಭದಲ್ಲಿ ಒಳ್ಳೆಯ ಯಶಸ್ಸು ಸಿಕ್ಕಿತಾದರೂ ಎರಡು-ಮೂರು ಸಿನಿಮಾಗಳ ಬಳಿಕ ಕೃತಿ ಶೆಟ್ಟಿ ನಟಿಸಿದ ಸಿನಿಮಾಗಳು ಸಾಲು-ಸಾಲಾಗಿ ಸೋಲಲು ಆರಂಭಿಸಿದವು. ಕೃತಿ ನಟಿಸಿದ ‘ಬಂಗಾರ್ರಾಜು’, ‘ಮಚ್ಚೆರ್ಲ ನಿಯೋಜಕವರ್ಗಂ’, ‘ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ’, ‘ಕಸ್ಟಡಿ’ ಸಿನಿಮಾಗಳು ಫ್ಲಾಪ್ ಎನಿಸಿಕೊಂಡರು. ‘ಕಸ್ಟಡಿ’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಡಲಾಗಿತ್ತು, ಆದರೂ ಸಹ ಸಿನಿಮಾ ಸೋತಿತು. ‘ಕಸ್ಟಡಿ’ ಸೋಲಿನ ಬಳಿಕ ತೆಲುಗು ಚಿತ್ರರಂಗದಿಂದ ಅವಕಾಶಗಳೇ ಬರುವುದು ನಿಂತು ಬಿಟ್ಟಿತು ಕೃತಿ ಶೆಟ್ಟಿಗೆ.
ಇದನ್ನೂ ಓದಿ:ನವರಾತ್ರಿ, ದುರ್ಗಾ ಪೂಜೆಗೆ ಕೃತಿ ಶೆಟ್ಟಿ ಶುಭಾಶಯ ತಿಳಿಸಿದ್ದು ಹೀಗೆ
ಅದಾದ ಬಳಿಕ ಕೃತಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಬಳಿಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡಿದರು. ಮಲಯಾಳಂನಲ್ಲಿ ‘ಅಜಯಂಟೆ ರಂಡಂ ಮೋಷನಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಾರ್ತಿ ಜೊತೆಗೊಂದು ತಮಿಳು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಶರವಣ ಅವರ ಮುಂದಿನ ತೆಲುಗು ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅದರ ಜೊತೆಗೆ ತಮಿಳಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಜಯಂ ರವಿ ಅವರ ಮುಂದಿನ ಸಿನಿಮಾಕ್ಕೆ ಕೃತಿ ಶೆಟ್ಟಿ ನಾಯಕಿಯಾಗಲಿದ್ದಾರೆ.
ಕೃತಿ ಶೆಟ್ಟಿ ಮೂಲತಃ ಮಂಗಳೂರಿನವರು. ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಎಳವೆಯಿಂದಲೇ ಹಲವು ಜಾಹೀರಾತುಗಳಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಬುಚ್ಚಿಬಾಬು ಸನಾ ನಿರ್ದೇಶನದ ‘ಉಪ್ಪೆನ’ ಸಿನಿಮಾದಲ್ಲಿ ನಾಯಕಿಯಾದರು ಕೃತಿ ಶೆಟ್ಟಿ. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Sun, 11 February 24