
ಭಾರತೀಯ ಚಿತ್ರರಂಗದ ಮೇರು ಗಾಯಕಿ ಎಸ್ ಜಾನಕಿ (S Janaki) ಅವರು ಮೈಸೂರಿನ ಕನಿಯನ ಹುಂಡಿಯಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಪುತ್ರ, ಪತಿ ಇಲ್ಲದ ಕಾರಣ ಅವರ ಮೊಮ್ಮಗಳಾದ ಅಪ್ಸರಾ ಅವರು ಅಜ್ಜಿಯ ಅಂತಿಮ ಸಂಸ್ಕಾರ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಜಾನಕಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಮೈಸೂರಿನ ಮೇಲೆ ಅಪಾರ ಪ್ರೀತಿ, ಭಕ್ತಿ ಇರಿಸಿಕೊಂಡಿದ್ದ ಜಾನಕಿ ಅವರಿಗೆ ತಾವು ಮೈಸೂರಿನಲ್ಲೇ ಮಣ್ಣಾಗಬೇಕು ಎಂಬ ಆಸೆ ಇತ್ತು. ಹಾಗಾಗಿ ಅವರ ಅಂತಿಮ ಸಂಸ್ಕಾರವನ್ನು ಮೈಸೂರಿನಲ್ಲೇ ಮಾಡಲಾಗಿದೆ. ಮೈಸೂರು ಜಿಲ್ಲೆ, ಎಚ್ಡಿಕೆ ಕೋಟೆ ತಾಲ್ಲೂಕಿನ ಕಣಿಯನಗುಂಡಿಯ ಫಾರಂ ಹೌಸ್ನಲ್ಲಿ ಜಾನಕಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗಿದ್ದು, ಬ್ರಾಹ್ಮಣ ಸಂಪ್ರದಾಯದಂತೆ ಪಾರ್ಥಿಯ ಶರೀರವನ್ನು ಚಿತೆಯ ಮೇಲ್ಲಿಟ್ಟು ಅಗ್ನಿ ಸ್ಪರ್ಷ ಮಾಡಲಾಗಿದೆ. ಮೊಮ್ಮಗಳು ಅಪ್ಸರಾ ಅವರೇ ಅಜ್ಜಿಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿದ್ದಾರೆ.
ಅದಕ್ಕೂ ಮುಂಚೆ ಸರ್ಕಾರದ ವತಿಯಿಂದ ಜಾನಕಿ ಅವರಿಗೆ ಗೌರವ ವಂದನೆ ಸಹ ಸಲ್ಲಿಸಲಾಯ್ತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಜಾನಕಿ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಸಕಲ ಸರ್ಕಾರಿ ಗೌರವಗಳೊಟ್ಟಿಗೆ ಜಾನಕಿ ಅವರ ಅಂತಿಮ ಸಂಸ್ಕಾರವನ್ನು ಮಾಡಲಾಯ್ತು. ಅಗ್ನಿ ಸ್ಪರ್ಷದ ಬಳಿಕವೂ ಹಲವು ಅಭಿಮಾನಿಗಳು ಚಿತೆಯ ಬಳಿ ಆಗಮಿಸಿ ಚಿತೆಗೆ ನಮಿಸಿ ಹೋಗುತ್ತಿದ್ದ ದೃಶ್ಯ ಭಾವುಕವಾಗಿತ್ತು.
ಇದನ್ನೂ ಓದಿ:ಒಂದು ಹಾಡು ನಾಲ್ಕು ಧ್ವನಿ: ಎಸ್ ಜಾನಕಿ ಹಾಡಿರುವ ಈ ಹಾಡು ಕೇಳಿದ್ದೀರಾ?
ಮೇರು ಗಾಯಕಿ ಜಾನಕಿ ಅವರು ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆದರು. ಅವರಿಗೆ ಮೈಸೂರಿನ ಬಗ್ಗೆ ವಿಶೇಷ ಪ್ರೀತಿ, ಮಮತೆಗಳು ಇದ್ದವು. ಅವರ ಪುತ್ರನೊಟ್ಟಿಗೆ ಮೈಸೂರಿನಲ್ಲೇ ಸೆಟಲ್ ಆಗಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಬಲಗೈ ಅಂತಿದ್ದ ಮಗ ಇದೇ ವರ್ಷ ಜನವರಿ ತಿಂಗಳಲ್ಲಿ ನಿಧನ ಹೊಂದಿದರು. ಆಗಲೇ ಜಾನಕಿ ಅವರು ತೀವ್ರವಾಗಿ ಕುಸಿದು ಹೋಗಿದ್ದರು. ಮಗನ ಸಾವಿನ ನೋವು ಅವರನ್ನು ಕಾಡುತ್ತಲೇ ಇತ್ತು.
ಜಾನಕಿ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಜಾನಕಿ ಅವರ ಕೊನೆಯ ಆಸೆಯಂತೆ ಅವರನ್ನು ಮೈಸೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ. ಈಗಾಗಲೇ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವರು ಮೈಸೂರಿನಲ್ಲಿ ಜಾನಕಿ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ವಿಪಕ್ಷಗಳು ಸಹ ತಾವು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ