Chiranjeevi: ಕ್ಯಾನ್ಸರ್​ ಸುದ್ದಿ ಹಬ್ಬಿದ್ದಕ್ಕೆ ಚಿರಂಜೀವಿ ಅಭಿಮಾನಿಗಳಲ್ಲಿ ಆತಂಕ; ತಮ್ಮ ಹೆಲ್ತ್​ ಅಪ್​ಡೇಟ್​ ನೀಡಿದ ‘ಮೆಗಾ ಸ್ಟಾರ್​’

|

Updated on: Jun 04, 2023 | 8:32 AM

Chiranjeevi Health Condition: ಕ್ಯಾನ್ಸರ್​ ಎಂಬ ಪದ ಕೇಳಿ ‘ಮೆಗಾ ಸ್ಟಾರ್’ ಜಿರಂಜೀವಿ ಫ್ಯಾನ್ಸ್​ ಆತಂಕಕ್ಕೆ ಒಳಗಾದರು. ನಿಜಕ್ಕೂ ಆಗಿದ್ದು ಏನು? ಈಗ ತಮ್ಮ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಚಿರಂಜೀವಿ ಅವರು ವಿವರಿಸಿದ್ದಾರೆ.

Chiranjeevi: ಕ್ಯಾನ್ಸರ್​ ಸುದ್ದಿ ಹಬ್ಬಿದ್ದಕ್ಕೆ ಚಿರಂಜೀವಿ ಅಭಿಮಾನಿಗಳಲ್ಲಿ ಆತಂಕ; ತಮ್ಮ ಹೆಲ್ತ್​ ಅಪ್​ಡೇಟ್​ ನೀಡಿದ ‘ಮೆಗಾ ಸ್ಟಾರ್​’
ಮೆಗಾ ಸ್ಟಾರ್​ ಚಿರಂಜೀವಿ
Follow us on

ಟಾಲಿವುಡ್​ನ ಸ್ಟಾರ್​ ಹೀರೋ ‘ಮೆಗಾ ಸ್ಟಾರ್​’ ಚಿರಂಜೀವಿ (Mega Star Chiranjeevi) ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರೆಲ್ಲರಿಗೂ ಶಾಕ್​ ಆಗುವಂತಹ ಸುದ್ದಿ ಇತ್ತೀಚೆಗೆ ಹರಿದಾಡಿದೆ. ಕ್ಯಾನ್ಸರ್​ ಕುರಿತು ಚಿರಂಜೀವಿ ಅವರು ಕೆಲವು ದಿನಗಳ ಹಿಂದೆ ಮಾತನಾಡಿದ್ದರು. ಆದರೆ ಅವರು ಹೇಳಿದ್ದೇ ಬೇರೆ, ಜನರು ಅರ್ಥ ಮಾಡಿಕೊಂಡಿದ್ದೇ ಬೇರೆ ಎಂಬಂತೆ ಆಗಿದೆ. ತಮ್ಮ ನೆಚ್ಚಿನ ನಟನಿಗೆ ಕ್ಯಾನ್ಸರ್​ (Cancer) ಬಂದಿದೆ ಎಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ತೆಲುಗಿನ ಕೆಲವು ಮಾಧ್ಯಮಗಳಲ್ಲೂ ಕೂಡ ಗೊಂದಲ ಮೂಡಿಸುವಂತಹ ಸುದ್ದಿಗಳು ಪ್ರಕಟ ಆಗಿವೆ. ಇದರಿಂದ ಅಭಿಮಾನಿಗಳಿಗೆ ಆತಂಕ ಆಗಿದ್ದು ನಿಜ. ಹಾಗಾಗಿ ಈ ವಿಚಾರದ ಬಗ್ಗೆ ಸ್ವತಃ ಚಿರಂಜೀವಿ (Chiranjeevi) ಅವರು ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ಆಗಿದ್ದು ಏನು? ಈಗ ತಮ್ಮ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಚಿರಂಜೀವಿ ಅವರು ವಿವರಿಸಿದ್ದಾರೆ. ಟ್ವಿಟರ್​ ಮೂಲಕ ಅವರು ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ.

ಕ್ಯಾನ್ಸರ್​ ಬಗ್ಗೆ ಚಿರಂಜೀವಿ ಸ್ಪಷ್ಟನೆ:

‘ಇತ್ತೀಚೆಗೆ ನಾನು ಕ್ಯಾನ್ಸರ್​ ಸೆಂಟರ್​ ಉದ್ಘಾಟನೆ ವೇಳೆ ಕ್ಯಾನ್ಸರ್​ ಜಾಗೃತಿ ಬಗ್ಗೆ ಮಾತನಾಡಿದ್ದೆ. ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್​ ತಡೆಗಟ್ಟಬಹುದು ಅಂತ ಹೇಳಿದ್ದೆ. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್​ ಅಲ್ಲದ ಊತ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್​ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತ ಮಾತ್ರ ನಾನು ಹೇಳಿದ್ದೆ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದಾರೆ.

‘ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನಗೆ ಕ್ಯಾನ್ಸರ್​​ ಆಗಿದೆ ಮತ್ತು ಚಿಕಿತ್ಸೆಯಿಂದ ಬದುಕಿದೆ ಅಂತ ಸುದ್ದಿ ಮಾಡಿದ್ದಾರೆ. ಇದರಿಂದ ಅನಗತ್ಯವಾಗಿ ಗೊಂದಲ ಶುರುವಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ ಅಂತ ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ಅನೇಕರಿಗೆ ಭಯ ಮತ್ತು ನೋವು ಆಗುತ್ತದೆ’ ಎಂದು ಚಿರಂಜೀವಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಮನೆಮಗಳ ಸಂಸಾರದಲ್ಲಿ ಬಿರುಗಾಳಿ; ಡಿವೋರ್ಸ್​ ಸುದ್ದಿಗೆ ಸಿಕ್ತು ಬಲವಾದ ಸಾಕ್ಷಿ

‘ಮೆಗಾ ಸ್ಟಾರ್​’ ಚಿರಂಜೀವಿ ಅವರು ಆರೋಗ್ಯವಾಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಿಜಕ್ಕೂ ಆಗಿದ್ದು ಏನು ಎಂಬುದರ ಬಗ್ಗೆ ಈಗ ಎಲ್ಲರಿಗೂ ಮಾಹಿತಿ ಸಿಕ್ಕಿದೆ. ‘ಈ ವಿಷಯವನ್ನು ನೀವು ಸ್ಪಷ್ಟಪಡಿಸಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಆತಂಕ ಹೆಚ್ಚುತ್ತಿತ್ತು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಜಿರಂಜೀವಿ ಅವರು ನೂರಾರು ವರ್ಷ ಆರೋಗ್ಯಯುತವಾಗಿ ಇರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಅವರಿಂದ ಉತ್ತಮ ಚಿತ್ರಗಳು ಮೂಡಿಬರಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:  ನಮ್ಮನ್ನು ಅವಮಾನಿಸಲಾಗುತ್ತಿದೆ: ಚಿರಂಜೀವಿ ಅಭಿಮಾನಿಗಳಲ್ಲಿ ಒಡಕು, ಹೈದರಾಬಾದ್ ಚಲೋ ಕರೆ

ಅನೇಕ ಸೆಲೆಬ್ರಿಟಿಗಳಿಗೆ ಕ್ಯಾನ್ಸರ್​ ಬಂದ ಉದಾಹರಣೆ ಇದೆ. ಆರಂಭದಲ್ಲಿಯೇ ಕ್ಯಾನ್ಸರ್​ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಮನಿಶಾ ಕೊಯಿರಾಲಾ, ಸೊನಾಲಿ ಬೇಂದ್ರೆ, ಯುವರಾಜ್​ ಸಿಂಗ್​, ಕಿರಣ್​ ಖೇರ್​, ರಾಕೇಶ್​ ರೋಷನ್​ ಮುಂತಾದವರು ಕ್ಯಾನ್ಸರ್​ ಗೆದ್ದು ಬಂದಿದ್ದಾರೆ. ಈ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.