
ಕೋವಿಡ್ ಬಳಿಕ ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಜೊತೆಗೆ ಈ ಕಾನ್ಸರ್ಟ್ ಕಲ್ಚರ್ ಸಹ ಸಖತ್ ಜೋರು ಪಡೆದುಕೊಂಡಿದೆ. ಮುಂಚೆಯೂ ಲೈವ್ ಕಾನ್ಸರ್ಟ್ಗಳು ನಡೆಯುತ್ತಿದ್ದವರಾದರೂ ಈಗ ನಡೆಯುತ್ತಿರುವಷ್ಟು ಹೆಚ್ಚಾಗಿ ಮತ್ತು ಅದ್ಧೂರಿಯಾಗಿ ನಡೆಯುತ್ತಿರಲಿಲ್ಲ. ಈಗಂತೂ ಸಣ್ಣ-ಪುಟ್ಟ ಗಾಯಕರು, ರ್ಯಾಪರ್ಗಳು ಸಹ ಕಾನ್ಸರ್ಟ್ಗಳನ್ನು ಮಾಡುತ್ತಿದ್ದಾರೆ. ಕಾನ್ಸರ್ಟ್ಗಳಿಂದ ಭಾರಿ ಮೊತ್ತದ ಹಣವನ್ನೂ ಸಹ ಸಂಪಾದನೆ ಮಾಡುತ್ತಿದ್ದಾರೆ. ಸ್ವತಃ ಮೋದಿಯವರೇ ಕಾನ್ಸರ್ಟ್ಗಳಿಗೆ ಪೂರಕ ಮೂಲ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
ಭಾರತದಲ್ಲಿ ಬಲು ಅದ್ಧೂರಿ ಲೈವ್ ಕಾನ್ಸರ್ಟ್ ಮಾಡುತ್ತಿರುವ ಮೊದಲಿಗರು ದಿಲ್ಜೀತ್ ದುಸ್ಸಾಂಜ್. ಅವರ ಕಾನ್ಸರ್ಟ್ಗಳಿಗೆ ಜನ ಎಲ್ಲೆಲ್ಲೆಂದಿಲೋ ಬರುತ್ತಾರೆ. ಅದೇ ರೀತಿಯ ಮ್ಯಾಜಿಕ್ ಮಾಡುವ ದಕ್ಷಿಣ ಭಾರತದ ಸಂಗೀತ ಮಾಂತ್ರಿಕನೆಂದರೆ ಅದು ಅನಿರುದ್ಧ್. ಯುವಕ ಅನಿರುದ್ಧ್ ತಮ್ಮ ಅದ್ಭುತ ಸಂಗೀತದ ಮೂಲಕ ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹೆಸರು ಮಾಡಿದ್ದಾರೆ. ‘ಜೈಲರ್’, ‘ವಿಕ್ರಂ’ ಅಂಥಹಾ ಸಿನಿಮಾಗಳನ್ನು ತಮ್ಮ ಸಂಗೀತದಿಂದಲೇ ಹಿಟ್ ಮಾಡಿಸಿದ ಶ್ರೇಯವೂ ಅನಿರುದ್ಧ್ಗೆ ಇದೆ.
ಇತ್ತೀಚೆಗಷ್ಟೆ ಅನಿರುದ್ಧ್ ಬೆಂಗಳೂರಿಗೆ ಬಂದಿದ್ದರು. ನಗರದ ಟೆರಾಫಾರ್ಮ್ ಅರೇನಾದಲ್ಲಿ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ ನಡೆಸಿಕೊಟ್ಟರು. ಬೆಂಗಳೂರಿಗರು ಮಾತ್ರವೇ ಅಲ್ಲದೆ ನೆರೆ ರಾಜ್ಯಗಳಿಂದಲೂ ಸಂಗೀತ ಪ್ರೇಮಿಗಳು ಬಂದು ಕಾನ್ಸರ್ಟ್ನಲ್ಲಿ ಭಾಗಿ ಆಗಿದ್ದರು. ಕೇವಲ ಒಂದು ಗಂಟೆ ಅವಧಿಯಲ್ಲಿ 16 ಸಾವಿರ ಈ ಟಿಕೆಟ್ಗಳು ಮಾರಾಟವಾಗಿದ್ದವು. ಭಾರಿ ಸಂಖ್ಯೆಯ ಜನ, ಅನಿರುದ್ಧ್ ಅವರ ಸಂಗೀತವನ್ನು ಸಖತ್ ಎಂಜಾಯ್ ಮಾಡಿದರು.
ಇದನ್ನೂ ಓದಿ:ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ಗೆ ಕರೆ ಕೊಡ್ತಿವಿ: ವಾಟಾಳ್
ಅನಿರುದ್ಧ್ ಅವರ ಈ ‘ಹುಕುಂ’ ಟೂರ್ . ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್ ಹಾಗೂ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಟೆರಾಫಾರ್ಮ್ ಅರೆನಾದಲ್ಲಿ ಮೊನ್ನೆ ಅದ್ಧೂರಿಯಾಗಿ ಜರುಗಿದೆ. ಅನಿರುದ್ಧ್ ಸೂಪರ್ ಹಿಟ್ ಹಾಡುಗಳಿಗೆ ಸಂಗೀತ ಪ್ರಿಯರು ತಲೆದೂಗುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟೇಶ್ ಅವರು ಈ ಕಾರ್ಯಕ್ರಮದ ಮೂಲ ಆಯೋಜಕರು. ಮನೊರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಡುತ್ತಾ ಮುಂದೆ ಹೋಗುತ್ತಿದ್ದಾರೆ ಕೆವಿಎನ್ ವೆಂಕಟೇಶ್. ಅವರಿಂದ ಇನ್ನೂ ಸಾಕಷ್ಟು ನಿರೀಕ್ಷೆ ಸಿನಿಮಾ ಹಾಗೂ ಸಂಗೀತ ಪ್ರೇಮಿಗಳಿಗೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ