ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್

| Updated By: ಮದನ್​ ಕುಮಾರ್​

Updated on: Sep 30, 2021 | 9:15 AM

ಇತ್ತೀಚಿನ ದಿನಗಳಲ್ಲಿ ಪ್ರಭಾಸ್ ಅವರು ಫಿಟ್ನೆಸ್​ ವಿಚಾರದಲ್ಲಿ ಹಳಿ ತಪ್ಪಿದ್ದಾರೆ. ಅನೇಕ ಫೋಟೋಗಳು ಅದಕ್ಕೆ ಸಾಕ್ಷಿ ಒದಗಿಸುತ್ತಿವೆ. ಫ್ಯಾಟ್​ ಅವತಾರದಲ್ಲಿ ಅವರನ್ನು ನೋಡಿದ ಅನೇಕರು ಹೀಯಾಳಿಸುತ್ತಿದ್ದಾರೆ.

ಅಂದು ಅಂಕಲ್​ ಅಂತ ಹೀಯಾಳಿಸಿದ್ರು, ಈಗ ಛೋಟಾ ಭೀಮ್​ ಅಂದ್ರು: ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಭಾಸ್
ಟ್ರೋಲ್ ಆಗುತ್ತಿರುವ ಪ್ರಭಾಸ್​ ಫೋಟೋ
Follow us on

ನಟ ಪ್ರಭಾಸ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ ಎಂಬುದೇನೋ ನಿಜ. ಅದರೆ ಅದೇಕೋ ಗೊತ್ತಿಲ್ಲ ಉತ್ತರ ಭಾರತದ ಮಂದಿ ಮಾತ್ರ ಇತ್ತೀಚೆಗೆ ಪ್ರಭಾಸ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ. ಫಿಟ್ನೆಸ್​ ವಿಚಾರವನ್ನೇ ಮುಖ್ಯವಾಗಿ ಇಟ್ಟುಕೊಂಡು ಹೀನಾಯವಾಗಿ ಕಮೆಂಟ್​ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಅವರನ್ನು ಕೆಲವರು ‘ಅಂಕಲ್​’ ಎಂದು ಹೀಯಾಳಿಸಿದ್ದರು. ಈಗ ಛೋಟಾ ಭೀಮ್​ ಅಂತ ಕರೆಯುತ್ತಿದ್ದಾರೆ. ಇದು ಪ್ರಭಾಸ್​ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಪ್ರಭಾಸ್ ಅವರು ಫಿಟ್ನೆಸ್​ ವಿಚಾರದಲ್ಲಿ ಹಳಿ ತಪ್ಪಿದ್ದಾರೆ. ಅನೇಕ ಫೋಟೋಗಳು ಅದಕ್ಕೆ ಸಾಕ್ಷಿ ಒದಗಿಸುತ್ತಿವೆ. ಫ್ಯಾಟ್​ ಅವತಾರದಲ್ಲಿ ಅವರನ್ನು ನೋಡಿದ ಅನೇಕರು ಹೀಯಾಳಿಸುತ್ತಿದ್ದಾರೆ. ದಕ್ಷಿಣ ಭಾರತದ ಮಂದಿ ಈ ರೀತಿ ಕಾಲೆಳೆಯುತ್ತಿಲ್ಲ. ಬದಲಿಗೆ, ಉತ್ತರ ಭಾರತದ ಹಿಂದಿ ಭಾಷಿಕರು ತಮ್ಮ ಕಮೆಂಟ್​ಗಳ ಮೂಲಕ ಪ್ರಭಾಸ್​ ಅವರನ್ನು ಹೀನಾಯವಾಗಿ ಟ್ರೋಲ್​ ಮಾಡುತ್ತಿದ್ದಾರೆ. ‘ಈ ಹೀರೋಗಳು ವಯಸ್ಸಾದ ಬಳಿಕ ನಿವೃತ್ತಿ ಪಡೆದುಕೊಂಡು ತಮಗೆ ಸೂಕ್ತ ಆಗುವ ಪಾತ್ರವನ್ನಷ್ಟೇ ಮಾಡಬೇಕು. ತಮಗಿಂದ ಅರ್ಧ ವಯಸ್ಸಿನ ನಾಯಕಿಯರ ಜೊತೆ ರೊಮ್ಯಾನ್​ ಮಾಡಬಾರದು’ ಎಂದೆಲ್ಲ ಜನರು ಕಮೆಂಟ್​ ಮಾಡಿದ್ದಾರೆ.

‘ಆದಿಪುರುಷ್​’ ಚಿತ್ರದ ಮೂಲಕ ಹಿಂದಿಯಲ್ಲಿ ಕಮಾಲ್​ ಮಾಡಬೇಕು ಎಂದುಕೊಂಡಿರುವ ಪ್ರಭಾಸ್​ಗೆ ಈ ರೀತಿ ಟ್ರೋಲ್​ ಕಾಟ ಎದುರಾದರೆ ಅದು ಗಲ್ಲಾಪೆಟ್ಟಿಗೆ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಏನಿಲ್ಲ. ಸದ್ಯ ಪ್ರಭಾಸ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಆದಿಪುರುಷ್​’ ಚಿತ್ರದಲ್ಲಿ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ನಟಿಸಿರುವ ‘ರಾಧೆ ಶ್ಯಾಮ್​’ ಸಿನಿಮಾ 2022ರ ಜ.14ರಂದು ಬಿಡುಗಡೆ ಆಗಲಿದೆ. ಪ್ರಶಾಂತ್​ ನೀಲ್​ ಜೊತೆ ಅವರು ‘ಸಲಾರ್​’ ಸಿನಿಮಾ ಮಾಡುತ್ತಿದ್ದಾರೆ.

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ. ಹೀಗೆ ಏಕಾಏಕಿ ದೇಹದ ತೂಕ ಹೆಚ್ಚಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಇಂಗ್ಲೆಂಡ್​ನಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಆದಷ್ಟು ಬೇಗ ಅವರನ್ನು ಮೊದಲಿನ ಗೆಟಪ್​ಗೆ ಮರಳಿಸಲು ‘ಆದಿಪುರುಷ್​’ ಚಿತ್ರದ ನಿರ್ದೇಶಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಕುರಿತಂತೆ ಚಿತ್ರತಂಡದ ಯಾರೊಬ್ಬರೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ:

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ಗೆ ಸವಾಲು ಹಾಕಿದ ಪ್ರಭಾಸ್​; ಗೆಲ್ಲೋರು ಯಾರು?

ಕ್ಯಾನ್ಸರ್​ ಪೀಡಿತ ಅಭಿಮಾನಿಗೆ ಅತ್ಯಮೂಲ್ಯ ಕ್ಷಣಗಳನ್ನು ನೀಡಿದ ಪ್ರಭಾಸ್​; ನಟನ ದೊಡ್ಡತನಕ್ಕೆ ಮೆಚ್ಚುಗೆ​