
ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳು ನಾಡು ಸಿಎಂ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಸಂಚಲನ ಮೂಡಿಸುತ್ತಿದೆ. ಈ ಸಿನಿಮಾದ ಮೂಲಕ ವಿಜಯ್ ತಮ್ಮ ಚಿತ್ರರಂಗದ ಸುದೀರ್ಘ ಪಯಣಕ್ಕೆ ವಿರಾಮ ಹಾಡಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹೀಗಿರುವಾಗ, ಸಿನಿಮಾದ ಟೈಟಲ್ ಕಾರ್ಡ್ ವಿಷಯದಲ್ಲಿ ವಿಜಯ್ ತೆಗೆದುಕೊಂಡಿದ್ದಾರೆ ಎನ್ನಲಾದ ನಿರ್ಧಾರವೊಂದು ಈಗ ಸುದ್ದಿಯಲ್ಲಿದೆ.
ವರದಿಗಳ ಪ್ರಕಾರ, ‘ಜನ ನಾಯಗನ್’ ಚಿತ್ರದ ಆರಂಭದಲ್ಲಿ ವಿಜಯ್ ಅವರಿಗೆ ‘ಹಾನರೆಬಲ್ ಚೀಫ್ ಮಿನಿಸ್ಟರ್ ದಳಪತಿ ವಿಜಯ್’ ಎಂದು ಟೈಟಲ್ ಕಾರ್ಡ್ ಹಾಕಲು ಚಿತ್ರತಂಡ ಯೋಜಿಸಿತ್ತು. ವಿಜಯ್ ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಪೂರಕವಾಗಿ ಈ ಬಿರುದು ನೀಡಲು ಚಿತ್ರತಂಡ ಉತ್ಸುಕವಾಗಿತ್ತು. ಆದರೆ, ಈ ಪ್ರಸ್ತಾಪವನ್ನು ವಿಜಯ್ ನಯವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಬದಲಾಗಿ, ದಶಕಗಳಿಂದ ತಮ್ಮ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ‘ದಳಪತಿ’ ಎಂಬ ಬಿರುದನ್ನೇ ಉಳಿಸಿಕೊಳ್ಳಲು ಅವರು ಸೂಚಿಸಿದ್ದಾರೆ ಎನ್ನಲಾಗಿದೆ.
ತಮ್ಮ ಸಿನಿಮಾ ಬದುಕು ಮತ್ತು ರಾಜಕೀಯ ಬದುಕಿನ ನಡುವೆ ಸ್ಪಷ್ಟವಾದ ಗೆರೆ ಇರಲಿ ಎಂಬುದು ವಿಜಯ್ ಅವರ ಆಶಯ. ಸಿನಿಮಾ ಪ್ರೇಕ್ಷಕರು ತಮ್ಮನ್ನು ಯಾವ ರೂಪದಲ್ಲಿ ನೋಡಲು ಇಷ್ಟಪಡುತ್ತಾರೋ ಅದೇ ಶೈಲಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಅವರ ಉದ್ದೇಶ. ‘ದಳಪತಿ’ ಎಂಬ ಬಿರುದು ಕೇವಲ ಹೆಸರಲ್ಲ, ಅದು ಅಭಿಮಾನಿಗಳ ಭಾವನೆ. ಹಾಗಾಗಿ ತಮ್ಮ ಕೊನೆಯ ಸಿನಿಮಾದಲ್ಲೂ ಅದೇ ಹೆಸರಿನಿಂದ ಗುರುತಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ
‘ಜನ ನಾಯಗನ್’ ಸಿನಿಮಾ ಈಗಾಗಲೇ ಸೆನ್ಸಾರ್ ಮಂಡಳಿಯ ತೊಡಕುಗಳು ಹಾಗೂ ದೃಶ್ಯಗಳ ಸೋರಿಕೆಯಿಂದಾಗಿ ಸಾಕಷ್ಟು ವಿಳಂಬವಾಗಿದ್ದು, ಸದ್ಯದಲ್ಲೇ ಹೊಸ ಬಿಡುಗಡೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ಗೆ ವಿಜಯ್ ಅದ್ಧೂರಿ ಮುಕ್ತಾಯ ಹಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.