Sehar Shinwari: ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಖಡಕ್​ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು

PM Narendra Modi: ಪಾಕಿಸ್ತಾನದ ಗಲಭೆಗೆ ಮೋದಿ ಕಾರಣ ಎಂದು ನಟಿ ಸೆಹರ್ ಶಿನ್ವಾರಿ ಆರೋಪ ಮಾಡಿದ್ದಾರೆ. ಅವರ ಟ್ವೀಟ್​ಗೆ ದೆಹಲಿ ಪೊಲೀಸರು ಉತ್ತರ ನೀಡಿದ್ದಾರೆ.

Sehar Shinwari: ಮೋದಿ ವಿರುದ್ಧ ದೂರು ನೀಡಲು ಮುಂದಾದ ಪಾಕ್​ ನಟಿ; ಖಡಕ್​ ಪ್ರತಿಕ್ರಿಯೆ ನೀಡಿದ ದೆಹಲಿ ಪೊಲೀಸರು
ಸೆಹರ್ ಶಿನ್ವಾರಿ, ನರೇಂದ್ರ ಮೋದಿ

Updated on: May 10, 2023 | 6:47 PM

ಪಾಕಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ (Imran Khan) ಬಂಧನದ ಬಳಿಕ ಹಲವು ಕಡೆಗಳಲ್ಲಿ ಗಲಭೆ ಉಂಟಾಗಿದೆ. ಒಂದು ರೀತಿಯ ನಾಗರಿಕ ಯುದ್ಧದಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಿದೆ. ಈ ಪರಿಸ್ಥಿತಿಯಲ್ಲಿ ಪಾಕ್​ ನಟಿ ಸೆಹರ್​ ಶಿನ್ವಾರಿ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಗ್ಗೆ ಟ್ವೀಟ್​ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಆಗುತ್ತಿರುವ ಸಮಸ್ಯೆಗೆ ಮೋದಿ ಕಾರಣ ಎಂದು ಸೆಹರ್​ ಶಿನ್ವಾರಿ ಆರೋಪಿಸಿದ್ದಾರೆ. ಅಲ್ಲದೇ, ಮೋದಿ ವಿರುದ್ಧ ದೂರು ನೀಡಲು ದೆಹಲಿ ಪೊಲೀಸರ ಸಹಾಯ ಕೇಳಿದ್ದಾರೆ. ನಟಿಯ ಈ ಟ್ವೀಟ್​ ನೋಡಿಕೊಂಡು ದೆಹಲಿ ಪೊಲೀಸರು ಸುಮ್ಮನೆ ಕುಳಿತಿಲ್ಲ. ಆ ನಟಿಗೆ ಖಡಕ್​ ಪ್ರತಿಕ್ರಿಯೆ ನೀಡಲಾಗಿದೆ. ಅಷ್ಟಕ್ಕೂ ಪಾಕ್​ ನಟಿ ಸೆಹರ್​ ಶಿನ್ವಾರಿ (Sehar Shinwari) ಹೇಳಿದ್ದೇನು? ಅದಕ್ಕೆ ದೆಹಲಿ ಪೋಲಿಸರ ನೀಡಿದ ಉತ್ತರ ಏನು? ಇಲ್ಲಿದೆ ವಿವರ..

ಪಾಕ್​ ನಟಿ ಸೆಹರ್​ ಶಿನ್ವಾರಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಅವರು ಟ್ವೀಟ್​ ಮಾಡುತ್ತಾರೆ. ಟ್ವಿಟರ್​ನಲ್ಲಿ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಈಗ ಪಾಕಿಸ್ತಾನದಲ್ಲಿ ಆಗುತ್ತಿರುವ ಗಲಭೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರಣ ಎಂಬುದು ಸೆಹರ್​ ಶಿನ್ವಾರಿ ವಾದ.

ಸೆಹರ್​ ಶಿನ್ವಾರಿ ಟ್ವೀಟ್​ನಲ್ಲಿ ಏನಿದೆ?

‘ಯಾರಿಗಾದರೂ ದೆಹಲಿ ಪೊಲೀಸರ ಆನ್​ಲೈನ್​ ಸಂಪರ್ಕ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಗಲಭೆ ಮತ್ತು ಭಯೋತ್ಪಾದನೆ ಹಬ್ಬಿಸುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಬೇಹುಗಾರಿಕಾ ಸಂಸ್ಥೆ ರಾ ವಿರುದ್ಧ ನಾನು ದೂರು ನೀಡಬೇಕು. ಭಾರತದ ಸುಪ್ರೀಂ ಕೋರ್ಟ್​ ನನಗೆ ನ್ಯಾಯ ಒದಗಿಸುತ್ತದೆ ಎಂಬ ನಂಬಿಕೆ ಇದೆ’ ಎಂದು ಸೆಹರ್​ ಶಿನ್ವಾರಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: PM Narendra Modi: ₹5,500 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

ದೆಹಲಿ ಪೊಲೀಸರ ಪ್ರತಿಕ್ರಿಯೆ ಏನು?

ಸೆಹರ್​ ಶಿನ್ವಾರಿ ಅವರು ಮಾಡಿದ ಈ ಟ್ವೀಟ್​ ದೆಹಲಿ ಪೊಲೀಸರ ಕಣ್ಣಿಗೆ ಬಿದ್ದಿದೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಪಾಕಿಸ್ತಾನದಲ್ಲಿ ನಮ್ಮ ಕಾರ್ಯವಾಪ್ತಿ ಇಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ಕೂಡ ನೀವು ಹೇಗೆ ಈ ಟ್ವೀಟ್​ ಮಾಡಿದ್ದೀರಿ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ’ ಎಂದು ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಸೆಹರ್​ ಶಿನ್ವಾರಿ ಮಾಡಿದ ಅರ್ಥವಿಲ್ಲದ ಈ ಟ್ವೀಟ್​ಗೆ ನೂರಾರು ಜನರು ಕಮೆಂಟ್​ ಮಾಡಿದ್ದಾರೆ. ‘ಕುಡಿದ ನಶೆಯಲ್ಲಿ ಈಕೆ ಈ ರೀತಿ ಟ್ವೀಟ್​ ಮಾಡಿದ್ದಾಳೆ’ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಮಾಡಿದ್ದಾರೆ. ‘ಯಾರಾದರೂ ಇಷ್ಟು ಮೂರ್ಖರಾಗಲು ಹೇಗೆ ಸಾಧ್ಯ?’ ಎಂದು ಕೂಡ ಅನೇಕರು ಪ್ರಶ್ನೆ ಮಾಡಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us