
ಹೀರೋನ ಮಕ್ಕಳು ಯಾವಾಗಲೂ ಹೀರೋ ಆಗೋಕೆ ಬಯಸುತ್ತಾರೆ. ಅದೇ ನಿಟ್ಟಿನಲ್ಲಿ ಸ್ಟಾರ್ಸ್ ಕೂಡ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಹೋದಲ್ಲಿ ಬಂದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಅವಾರ್ಡ್ ಪಂಕ್ಷನ್ಗಳಲ್ಲಿ ಮಕ್ಕಳನ್ನು ಕರೆತರುತ್ತಾರೆ. ಈ ಮೂಲಕ ತಮ್ಮ ಮಕ್ಕಳಿಗೆ ಹೆಚ್ಚು ಎಕ್ಸ್ಪೋಸ್ ಸಿಗುವಂತೆ ನೋಡಿಕೊಳ್ಳುತ್ತಾರೆ. ಆದರೆ, ನಟ ಆರ್. ಮಾಧವನ್ (R Madhavan) ಅವರು ಭಿನ್ನವಾಗಿ ನಿಲ್ಲುತ್ತಾರೆ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬದಲು ಕ್ರೀಡೆಯಲ್ಲಿ ತೊಡಗಿಸಿದ್ದಾರೆ. ಮಾಧವನ್ ಮಗ ವೇದಾಂತ್ (Vedant) ಅವರು ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಐದು ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರಿಂದ ಇಡೀ ಭಾರತ ಹೆಮ್ಮೆ ಪಡುವಂತಾಗಿದೆ.
ವೇದಾಂತ್ ಮಾಧವನ್ ಅವರು ಚಿಕ್ಕ ವಯಸ್ಸಿನಿಂದ ಸ್ವಿಮ್ಮಿಂಗ್ ಟ್ರೇನಿಂಗ್ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಹಲವು ಕಡೆಗಳಲ್ಲಿ ಭಾರತವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಈಗ ಅವರು ಮಲೇಷಿಯನ್ ಇನ್ವಿಟೇಷನಲ್ ಏಜ್ ಗ್ರೂಪ್ ಚಾಂಪಿಯನ್ಶಿಪ್ನಲ್ಲಿ ಭಾಗಿ ಆಗಿದ್ದಾರೆ. ಇಲ್ಲಿ ಭಾರತವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ನಾನು ಸಿಂಗಲ್’; ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಪೂಜಾ ಹೆಗ್ಡೆ
ಈ ವಿಚಾರದಿಂದ ಮಾಧವನ್ ಅವರು ಹಿರಿಹಿರಿ ಹಿಗ್ಗಿದ್ದಾರೆ. ಈ ಖುಷಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ದೇವರ ಅನುಗ್ರಹ ಹಾಗೂ ನಿಮ್ಮ ಶುಭ ಹಾರೈಕೆಯಿಂದ ವೇದಾಂತ್ ಅವರು ಭಾರತಕ್ಕೆ ಐದು ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಲೇಷಿಯಾದಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ 50 ಮೀಟರ್, 100 ಮೀಟರ್, 200 ಮೀಟರ್, 400 ಮೀಟರ್ ಹಾಗೂ 1500 ಮೀಟರ್ ಸ್ವಿಮಿಂಗ್ ರೇಸ್ ಗೆದ್ದಿದ್ದಾರೆ. ಈ ಚಾಂಪಿಯನ್ಶಿಪ್ ಕೌಲಾ ಲಾಂಪುರ್ನಲ್ಲಿ ನಡೆದಿದೆ. ನನಗೆ ಹೆಮ್ಮೆ ಆಗುತ್ತಿದೆ’ ಎಂದಿದ್ದಾರೆ ಮಾಧವನ್.
ಮಾಧವನ್ ಅವರು ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ. ಮಗನನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುತ್ತಿರುವುದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ವೇದಾಂತ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿ ಪದಕ ಗೆದ್ದಿದ್ದರು. 2023ರ ಖೇಲೋ ಇಂಡಿಯಾ ಟೂರ್ನಮೆಂಟ್ನಲ್ಲಿ ವೇದಾಂತ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು. ಈ ವೇಳೆ ಅವರಿಗೆ ಐದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಸಿಕ್ಕಿತ್ತು. ಕಳೆದ ವರ್ಷ ರಿಲೀಸ್ ಆದ ಮಾಧವನ್ ನಟನೆಯ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿತು. ಸದ್ಯ ಅವರ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ