Keerthy Suresh: ತಮಿಳಿನಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೊದಲ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ; ಪೋಸ್ಟರ್​ ರಿಲೀಸ್​

Hombale Film | Raghu Thatha: ಕೀರ್ತಿ ಸುರೇಶ್​ ಮುಖ್ಯಭೂಮಿಕೆ ನಿಭಾಯಿಸಲಿರುವ ಈ ಚಿತ್ರದ ಶೂಟಿಂಗ್​ ಪ್ರಾರಂಭ ಆಗಿದೆ. 2023ರ ಬೇಸಿಗೆಯಲ್ಲಿ ಸಿನಿಮಾವನ್ನು ತೆರೆಗೆ ತರುವ ಗುರಿ ಇರಿಸಿಕೊಳ್ಳಲಾಗಿದೆ.

Keerthy Suresh: ತಮಿಳಿನಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೊದಲ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ; ಪೋಸ್ಟರ್​ ರಿಲೀಸ್​
ಕೀರ್ತಿ ಸುರೇಶ್
Edited By:

Updated on: Dec 04, 2022 | 4:49 PM

ದಿನದಿಂದ ದಿನಕ್ಕೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆಯ ಖ್ಯಾತಿ ಹೆಚ್ಚಾಗುತ್ತಿದೆ. ಈ ಬ್ಯಾನರ್​ನಲ್ಲಿ ನಿರ್ಮಾಣವಾದ ಸಿನಿಮಾಗಳೆಲ್ಲವೂ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ ಸಿನಿಮಾಗಳೇ ಈ ಮಾತಿಗೆ ಸಾಕ್ಷಿ. ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ನಿರ್ಮಾಪಕ ವಿಜಯ್​ ಕಿರಗಂದೂರು (Vijay Kiragandur) ಅವರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಬಂಡವಾಳ ಹೂಡಿದ್ದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಈಗ ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಈ ಬ್ಯಾನರ್​ನಿಂದ ಮೂಡಿಬರಲಿರುವ ಚೊಚ್ಚಲ ಕಾಲಿವುಡ್​ ಚಿತ್ರಕ್ಕೆ ಕೀರ್ತಿ ಸುರೇಶ್ (Keerthy Suresh)​ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್​ ರಿಲೀಸ್​ ಮಾಡಲಾಗಿದ್ದು, ‘ರಘು ತಾತ’ ಎಂದು ಶೀರ್ಷಿಕೆ ಇರಲಾಗಿದೆ.

‘ರಘು ತಾತಾ’ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಯಾಮಿನಿ ಯಜ್ನಮೂರ್ತಿ ಅವರ ಛಾಯಾಗ್ರಹಣ, ‘ಜೈ ಭೀಮ್’ ಖ್ಯಾತಿಯ ಸೀನ್ ರೋಲ್ಡನ್ ಅವರ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ‘ರಘು ತಾತ’ ಚಿತ್ರದ ಶೂಟಿಂಗ್​ ಪ್ರಾರಂಭ ಆಗಿದೆ. 2023ರ ಬೇಸಿಗೆಯಲ್ಲಿ ಸಿನಿಮಾವನ್ನು ತೆರೆಗೆ ತರುವ ಗುರಿ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ
Prabhas: ‘ಸಲಾರ್​’ ನೋಡಲು ಇನ್ನೂ 1 ವರ್ಷ ಕಾಯಬೇಕು; ರಿಲೀಸ್​ ಡೇಟ್​ ತಿಳಿಸಿದ ‘ಹೊಂಬಾಳೆ ಫಿಲ್ಮ್ಸ್​’
‘ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ’; ಹೊಂಬಾಳೆ ಫಿಲ್ಮ್ಸ್ ಹೊಸ ಘೋಷಣೆ
ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ
‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ಅನೌನ್ಸ್​; ಈ ಬಾರಿ ಚಾನ್ಸ್​ ಪಡೆದಿದ್ದು ಲೇಡಿ ಡೈರೆಕ್ಟರ್​ ಸುಧಾ ಕೊಂಗರ

ಈ ಪ್ರಾಜೆಕ್ಟ್​ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಇದೊಂದು ಕಾಮಿಡಿ ಡ್ರಾಮಾ ಚಿತ್ರ. ಸಮಾಜದ ವಿರುದ್ದ ಸವಾಲೆಸೆಯುವ ಓರ್ವ ಗಟ್ಟಿಗಿತ್ತಿ ಯುವತಿಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ. ಈ ಕಥೆ ಮತ್ತು ಪಾತ್ರಕ್ಕೆ ಕೀರ್ತಿ ಸುರೇಶ್ ಅವರು ಉತ್ತಮ ಆಯ್ಕೆ. ಅವರೊಂದಿಗೆ ಕೆಲಸ ಮಾಡಲು ನಮ್ಮ ಸಂಸ್ಥೆ ಹೆಮ್ಮೆ ಪಡುತ್ತದೆ. ಇದೊಂದು ಕಾಮಿಡಿ ಚಿತ್ರವಾಗಿದ್ದು, ಜನರು ನಗುತ್ತಲೇ ಆತ್ಮಾವಲೋಕನ ಮಾಡಿಕೊಳ್ಳುವಂತಹ ಭಿನ್ನ ಪ್ರಯತ್ನ ಇದಾಗಲಿದೆ’ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಕೀರ್ತಿ ಸುರೇಶ್​ ಅವರಂತಹ ಪ್ರತಿಭಾವಂತ ನಟಿ ಕೈ ಜೋಡಿಸಿರುವುದರಿಂದ ‘ರಘು ತಾತ’ ಮೇಲೆ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.