ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ

Rajinikanth: ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾ ಶೂಟಿಂಗ್ ಮಾಡಿದ ವಿಡಿಯೋಗಳನ್ನು ಸಂಗ್ರಹಿಸಿಡಲಾಗಿದ್ದ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.

ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ
Rakesh Nayak Manchi Edited By:

Updated on: Nov 09, 2023 | 3:53 PM

ರಜನೀಕಾಂತ್ (Rajnikanth) ನಟನೆಯ ‘ಜೈಲರ್‘ (Jailer) ಸಿನಿಮಾ ಎರಡು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿದೆ. ಅದಕ್ಕೆ ಮುಂಚೆ ಬಿಡುಗಡೆ ಆಗಿದ್ದ ‘ಪೆಟ್ಟ’, ‘ಅನ್ನಾತೆ’, ‘ದರ್ಬಾರ್’ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ತಂದುಕೊಟ್ಟಿರಲಿಲ್ಲ, ರಜನೀಕಾಂತ್ ಅಭಿಮಾನಿಗಳ ಆ ಬೇಸರವನ್ನು ‘ಜೈಲರ್’ ಸಿನಿಮಾ ದೂರ ಮಾಡಿದ್ದು, ರಜನೀಕಾಂತ್​ರ ಮುಂದಿನ ಸಿನಿಮಾಕ್ಕೆ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿತ್ತು. ಅದರಂತೆಯೇ ರಜನೀಕಾಂತ್ ‘ಲಾಲ್ ಸಲಾಂ’ ಹೆಸರಿನ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದರು, ಸಿನಿಮಾದ ಚಿತ್ರೀಕರಣವೂ ಕೊನೆಯ ಹಂತದಲ್ಲಿತ್ತು, ಹೀಗಿರುವಾಗ ಅನಿರೀಕ್ಷಿತ ಸಂಕಷ್ಟವೊಂದು ಚಿತ್ರತಂಡಕ್ಕೆ ಎದುರಾಗಿದೆ.

ಸಿನಿಮಾದ ಶೂಟಿಂಗ್ ಮಾಡಿದ್ದ ವಿಡಿಯೋವನ್ನು ಇರಿಸಲಾಗಿದ್ದ ಹಾರ್ಡ್ ಡಿಸ್ಕ್​ ಕಾಣೆಯಾಗಿದೆ ಎನ್ನಲಾಗುತ್ತಿದೆ. ಯಾರಾದರೂ ಕದ್ದರೆ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಅದನ್ನು ಡಿಲೀಟ್ ಮಾಡಿದರೆ ಎಂಬ ಬಗ್ಗೆ ಮಾಹಿತಿ ಇಲ್ಲವಾದರೂ. ಶೂಟ್ ಮಾಡಿರುವ ದೃಶ್ಯಗಳು ಕಳೆದಿವೆ ಎಂಬ ಸುದ್ದಿಯಂತೂ ಕಾಲಿವುಡ್​ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಿನಿಮಾದ ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಸಂಗ್ರಹಿಸಿಡಲು ಹಲವು ಹಾರ್ಡ್​ ಡಿಸ್ಕ್​ಗಳನ್ನು ಚಿತ್ರತಂಡ ಬಳಸುತ್ತದೆ. ಎಲ್ಲ ಹಾರ್ಡ್​ ಡಿಸ್ಕ್​ಗಳು ಕಾಣೆಯಾಗಿವೆಯೇ? ಅಥವಾ ಕೆಲವು ದೃಶ್ಯಗಳುಳ್ಳ ಹಾರ್ಡ್ ಡಿಸ್ಕ್​ ಮಾತ್ರವೇ ಕಾಣೆಯಾಗಿದೆಯೇ? ಅಥವಾ ನಾಶಪಡಿಸಲಾಗಿದೆಯೇ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಪ್ರಸ್ತುತ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ರಜನೀಕಾಂತ್ ನಟಿಸಿರುವ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಮರು ಬಿಡುಗಡೆ ಆಗಲಿದೆ ರಜನೀಕಾಂತ್​ರ ಹಳೆಯ ಬ್ಲಾಕ್ ಬಸ್ಟರ್ ಸಿನಿಮಾ

‘ಲಾಲ್ ಸಲಾಂ’ ಸಿನಿಮಾವನ್ನು ರಜನೀಕಾಂತ್​ರ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕ್ರಿಕೆಟ್ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರಜನೀಕಾಂತ್ ಮೊಯಿದ್ಧೀನ್ ಭಾಯ್ ಹೆಸರಿನ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ಆಡುವ ಹಂಬಲವುಳ್ಳ ಪ್ರತಿಭಾನ್ವಿತ ಯುವಕನ ಬೆನ್ನೆಲುಬಾಗಿ ನಿಲ್ಲುವ ಪಾತ್ರ ಅವರದ್ದು ಎನ್ನಲಾಗಿದೆ. ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

‘ಲಾಲ್ ಸಲಾಂ’ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಸಿನಿಮಾವನ್ನು ನಿರ್ದೇಶಿಸುತ್ತಿರುವ ರಜನೀಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ. ಒಂದು ಡಾಕ್ಯುಮೆಂಟರಿಯನ್ನೂ ಸಹ ಐಶ್ವರ್ಯಾ ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಸರಿ ಇದ್ದಿದ್ದರೆ ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಈಗ ಆಗಿರುವ ಸಮಸ್ಯೆಯನ್ನು ಚಿತ್ರತಂಡ ಹೇಗೆ ಬಗೆಹರಿಸಿಕೊಳ್ಳಲಿದೆ ಎಂಬುದರ ಮೇಲೆ ಸಿನಿಮಾದ ಬಿಡುಗಡೆ ನಿಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us