Rajinikanth: ರಜನಿಕಾಂತ್​ಗೆ ಹೃದಯದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗಿರುವ ತಲೈವಾ ಆರೋಗ್ಯ ಸ್ಥಿತಿ ಈಗ ಹೇಗಿದೆ?

| Updated By: ಮದನ್​ ಕುಮಾರ್​

Updated on: Oct 30, 2021 | 9:42 AM

Rajinikanth Health update: ರಜನಿಕಾಂತ್​ ಅವರಿಗೆ ಈಗ 70 ವರ್ಷ ವಯಸ್ಸು. ಹಾಗಾಗಿ ಅನೇಕ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸುತ್ತಿವೆ. ಇದರ ಜೊತೆಗೆ ತಲೈವಾಗೆ​ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Rajinikanth: ರಜನಿಕಾಂತ್​ಗೆ ಹೃದಯದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗಿರುವ ತಲೈವಾ ಆರೋಗ್ಯ ಸ್ಥಿತಿ ಈಗ ಹೇಗಿದೆ?
ರಜನಿಕಾಂತ್
Follow us on

ನಟ ರಜನಿಕಾಂತ್​ ಅಭಿಮಾನಿಗಳು ಆತಂಕಗೊಂಡಿದ್ದಾರೆ. ತಲೈವಾ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಗುರುವಾರ (ಅ.28) ಚೆನ್ನೈನ ಕಾವೇರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಆಸ್ಪತ್ರೆ ಮುಂದೆಯೇ ಜಮಾಯಿಸಿದರು. ಸದ್ಯ ರಜನಿಕಾಂತ್​ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಕ್ತನಾಳಗಳಲ್ಲಿ ಇದ್ದ ಬ್ಲಾಕ್​ ತೆಗೆಯಲು ಆಪರೇಷನ್ ಮಾಡಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.

ರಜನಿಕಾಂತ್​ ಅವರಿಗೆ ಈಗ 70 ವರ್ಷ ವಯಸ್ಸು. ಹಾಗಾಗಿ ಅನೇಕ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸುತ್ತಿದೆ. ಆ ಕಾರಣಕ್ಕಾಗಿ ರಜನಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡ ಅಭಿಮಾನಿಗಳು ಆತಂಕಗೊಳ್ಳುತ್ತಾರೆ. ತಲೈವಾ ಆರೋಗ್ಯದ ಬಗ್ಗೆ ಅಪ್​ಡೇಟ್​ ಸಿಗುವವರೆಗೂ ಅವರ ಅಪ್ಪಟ ಅಭಿಮಾನಿಗಳು ಕಾವೇರಿ ಆಸ್ಪತ್ರೆಯ ಎದುರು ಜಾಗರಣೆ ಮಾಡಿದ್ದಾರೆ. ಪರಿಣಾಮ, ಆಸ್ಪತ್ರೆ ಸುತ್ತಮುತ್ತ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಸದ್ಯ ರಜನಿಕಾಂತ್​ ಚೇತರಿಸಿಕೊಳ್ಳುತ್ತಿರುವ ವಿಷಯ ತಿಳಿದು ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

ಅ.25ರಂದು ರಜನಿಕಾಂತ್​ ಅವರು ದೆಹಲಿಗೆ ತೆರಳಿ ‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ಸ್ವೀಕರಿಸಿದ್ದರು. ಆ ವೇಳೆ ಅವರು ಬಹಳ ಲವಲವಿಕೆಯಿಂದಲೇ ಓಡಾಡಿಕೊಂಡಿದ್ದರು. ಅದಾಗಿ ಕೆಲವೇ ಮೂರು ದಿನ ಕಳೆಯುವುದರೊಳಗೆ ಅವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಂದಿದ್ದಕ್ಕೆ ಫ್ಯಾನ್ಸ್​ ಆತಂಕಗೊಂಡಿದ್ದರು. ಈಗ ಶಸ್ತ್ರ ಚಿಕಿತ್ಸೆ ಮುಗಿದಿದೆ. ಆದಷ್ಟು ಬೇಗ ಅವರು ಮನೆಗೆ ವಾಪಸ್​ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಕರ್ನಾಟಕದ ಜೊತೆ ರಜನಿಕಾಂತ್​ ಅವರಿಗೆ ಒಳ್ಳೆಯ ನಂಟು ಇದೆ. ರಾಜ್​ಕುಮಾರ್​ ಫ್ಯಾಮಿಲಿ ಜೊತೆ ಅವರಿಗೆ ಹಲವು ವರ್ಷಗಳಿಂದಲೂ ಒಡನಾಟವಿದೆ. ಹಾಗಾಗಿ ಅವರು ಪುನೀತ್​ ರಾಜ್​ಕುಮಾರ್​ ಅಂತಿಮ ದರ್ಶನಕ್ಕೆ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಅವರು ಈ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ.

‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ರಜನಿಕಾಂತ್​ ಅವರು ತಮ್ಮ ಬೆಂಗಳೂರಿನ ಗೆಳಯ ರಾಜ್​ ಬಹದ್ದೂರ್​ ಅವರನ್ನು ನೆನಪು ಮಾಡಿಕೊಂಡಿದ್ದರು. ತಮ್ಮ ಗುರು ಕೆ. ಬಾಲಚಂದರ್​ ಹಾಗೂ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸಿದ್ದರು. ಪ್ರಸ್ತುತ ರಜನಿ ಅಭಿನಯದ ‘ಅಣ್ಣಾತೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.4ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಇದನ್ನೂ ಓದಿ:

Rajinikanth: ರಜನಿಕಾಂತ್​ಗೆ ಅಷ್ಟು ಚೆನ್ನಾಗಿ ತಮಿಳು ಕಲಿಸಿದ್ದು ಯಾರು? ಎರಡೇ ತಿಂಗಳಲ್ಲಿ ಬದಲಾಗಿತ್ತು ಬದುಕು

‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ಬಗ್ಗೆ ರಜನಿ​ಕಾಂತ್​ ಸ್ನೇಹಿತ ರಾಜ್ ​ಬಹದ್ದೂರ್​ ಮೊದಲ ಪ್ರತಿಕ್ರಿಯೆ ಏನು?

Published On - 9:20 am, Sat, 30 October 21