
ಸಿನಿಮಾದ ಹೆಸರು ‘ಪಡೆಯಪ್ಪ’ ರಜನೀಕಾಂತ್ (Rajinikanth) ನಾಯಕ, ಆ ಸಿನಿಮಾನಲ್ಲಿ ಸೌಂದರ್ಯ ನಾಯಕಿ. ಅದೇ ಸಿನಿಮಾನಲ್ಲಿ ನಟಿ ರಮ್ಯಕೃಷ್ಣ ವಿಲನ್ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್ ಅಂಥಹಾ ಮಾಸ್ ಹೀರೋ ಎದುರು ಮಹಿಳಾ ವಿಲನ್. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ರಮ್ಯಾಕೃಷ್ಣ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೆ ಅದೇ ಸಿನಿಮಾದ ದೃಶ್ಯವೊಂದನ್ನು ನೋಡುತ್ತಾ ಕಣ್ಣೀರು ಹಾಕಿದರು ನಟಿ ರಮ್ಯಾ ಕೃಷ್ಣ. ಕಾರಣವೇನು?
‘ಪಡೆಯಪ್ಪ’ ಸಿನಿಮಾನಲ್ಲಿ ರಜನೀಕಾಂತ್ಗೆ ಸೌಂದರ್ಯ ಮೇಲೆ ಪ್ರೀತಿ, ಆದರೆ ರಮ್ಯಾಕೃಷ್ಣಗೆ ರಜನೀಕಾಂತ್ಗೆ ಪ್ರೀತಿ. ಇದೇ ಕಾರಣಕ್ಕೆ ರಮ್ಯಾಕೃಷ್ಣ ಪಾತ್ರ, ಸೌಂದರ್ಯ ಪಾತ್ರವನ್ನು ತುಚ್ಛವಾಗಿ ಕಾಣುತ್ತಿರುತ್ತದೆ. ಒಂದು ದೃಶ್ಯದಲ್ಲಿ ರಮ್ಯಾಕೃಷ್ಣ, ತಮ್ಮ ಕಾಲಿನಿಂದ ಸೌಂದರ್ಯ ಕೆನ್ನೆ ಸವರುತ್ತಾರೆ. ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ, ಸಿನಿಮಾದ ಇದೇ ದೃಶ್ಯವನ್ನು ನೋಡುತ್ತಾ ತಡೆಯಲಾರದೆ ಕಣ್ಣೀರು ಹಾಕಿದರು.
ತೆಲುಗಿನ ನಟ ಜಗಪತಿ ಬಾಬು ಹೊಸದೊಂದು ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಶೋಗೆ ಅತಿಥಿಯಾಗಿ ರಮ್ಯಾಕೃಷ್ಣ ಬಂದಿದ್ದರು. ಆಗ ‘ಪಡೆಯಪ್ಪ’ ಸಿನಿಮಾದ ಈ ಫೇಮಸ್ ದೃಶ್ಯವನ್ನು ಪ್ರಸಾರ ಮಾಡಲಾಯ್ತು. ದೃಶ್ಯ ನೋಡುತ್ತಿದ್ದಂತೆ ರಮ್ಯಾಕೃಷ್ಣಗೆ ಅಳು ತಡೆಯಲಾಗಲಿಲ್ಲ. ಸೌಂದರ್ಯ ಬಗ್ಗೆ ಮಾತನಾಡುತ್ತಾ, ‘ಒಬ್ಬ ಮುಗ್ಧ ಹೆಣ್ಣು ಮಗು ಪ್ರಬುದ್ಧ ನಟಿ ಆಗಿದ್ದನ್ನು ನಾನು ಸೌಂದರ್ಯನಲ್ಲಿ ನೋಡಿದೆ. ಜನಪ್ರಿಯತೆ, ಯಶಸ್ಸು ಆಕೆಯ ಮುಗ್ಧತೆಯನ್ನು ಹಾಳು ಮಾಡಲಿಲ್ಲ. ಹೆಸರಿನಂತೆಯೇ ಆಕೆಯ ಮನಸ್ಸು ಸೌಂದರ್ಯದಿಂದ ಕೂಡಿತ್ತು. ಆಕೆಯೊಂದಿಗೆ ಹಲವು ಒಳ್ಳೆಯ ನೆನಪುಗಳು ನನಗೆ ಇವೆ, ನನಗೆ ಬಹಳ ಆಪ್ತ ಗೆಳತಿ ಆಗಿದ್ದರು’ ಎಂದರು ರಮ್ಯಾಕೃಷ್ಣ.
ಇದನ್ನೂ ಓದಿ:ಗ್ಲಾಮರ್ ಅವತಾರದಲ್ಲಿ ಬಾಹುಬಲಿ ರಾಜಮಾತೆ ರಮ್ಯಾ ಕೃಷ್ಣನ್
ಅಂದಹಾಗೆ ಜಗಪತಿ ಬಾಬುಗೆ ಸಹ ಸೌಂದರ್ಯ ಬಲು ಆಪ್ತರಾಗಿದ್ದರು. ಹಲವು ಸಿನಿಮಾಗಳಲ್ಲಿ ಸೌಂದರ್ಯ ಮತ್ತು ಜಗಪತಿ ಬಾಬು ಒಟ್ಟಿಗೆ ನಟಿಸಿದ್ದರು. ಸೌಂದರ್ಯ ಹಾಗೂ ಜಗಪತಿ ಬಾಬು ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳು ಸಹ ಆಗ ಹರಿದಾಡಿದ್ದವು. ಎರಡೂ ಕುಟುಂಬಗಳ ನಡುವೆ ಮಾತುಕತೆಯೂ ನಡೆದಿದೆ ಎನ್ನಲಾಗಿತ್ತು. ಇಬ್ಬರೂ ಮದುವೆ ಆಗಲಿಲ್ಲ. 2004 ರ ಏಪ್ರಿಲ್ ತಿಂಗಳಲ್ಲಿ ಸೌಂದರ್ಯ ಖಾಸಗಿ ವಿಮಾನ ಅಪಘಾತದಲ್ಲಿ ಮೃತಪಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ