‘ರಣಬೀರ್, ಕರಣ್ ನನ್ನನ್ನು ತುಳಿಯುತ್ತಿದ್ದಾರೆ’; ರಣವೀರ್ ಸಿಂಗ್

ರಣವೀರ್ ಸಿಂಗ್ 'ಡಾನ್ 3' ಚಿತ್ರದಿಂದ ದಿಢೀರ್ ಹೊರನಡೆದಿದ್ದು, 45 ಕೋಟಿ ನಷ್ಟ ಉಂಟಾಗಿದೆ. FWICE ಅಸಹಕಾರ ಚಳವಳಿಗೆ ಚಿಂತಿಸುತ್ತಿರುವ ಈ ಸಮಯದಲ್ಲಿ, ರಣಬೀರ್ ಕಪೂರ್ ಜೊತೆಗಿನ ಹಳೆಯ 'ಕಾಫಿ ವಿತ್ ಕರಣ್' ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಅಲ್ಲಿ ರಣಬೀರ್, ರಣವೀರ್ ನಟನೆಯನ್ನು ಮುಕ್ತವಾಗಿ ಹೊಗಳಿದ್ದರು. ಈ ವಿಡಿಯೋ ರಣವೀರ್‌ನ ಪ್ರಸ್ತುತ ಸಂಕಷ್ಟದ ವೃತ್ತಿಜೀವನಕ್ಕೆ ಕನ್ನಡಿ ಹಿಡಿದಿದೆ.

‘ರಣಬೀರ್, ಕರಣ್ ನನ್ನನ್ನು ತುಳಿಯುತ್ತಿದ್ದಾರೆ’; ರಣವೀರ್ ಸಿಂಗ್
ರಣವೀರ್​, ಕರಣ್, ರಣಬೀರ್
Edited By:

Updated on: May 28, 2026 | 12:39 PM

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಸದ್ಯ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಅವರ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ಹೊರನಡೆದ ಬೆನ್ನಲ್ಲೇ ಬಿ-ಟೌನ್‌ನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ರಣವೀರ್ ಅವರ ಈ ನಿರ್ಧಾರದಿಂದಾಗಿ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ಗೆ ಬರೋಬ್ಬರಿ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡಿರುವ ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್’ ಒಕ್ಕೂಟವು ರಣವೀರ್ ಸಿಂಗ್ ವಿರುದ್ಧ ಅಸಹಕಾರ ಚಳವಳಿ ಆರಂಭಿಸಲು ಚಿಂತನೆ ನಡೆಸಿದೆ. ಒಕ್ಕೂಟದ ಯಾವುದೇ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ. ಈ ಭಾರಿ ವಿವಾದದ ನಡುವೆಯೇ, ರಣವೀರ್ ಸಿಂಗ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಅಂತರ್ಜಾಲದಲ್ಲಿ ಮುನ್ನೆಲೆಗೆ ಬಂದಿದೆ.

ಕರಣ್ ಜೋಹರ್, ರಣಬೀರ್ ಕಪೂರ್ ನನ್ನನ್ನು ಟಾರ್ಗೆಟ್ ಮಾಡಿದರು

ರಣವೀರ್ ಸಿಂಗ್ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ, ಅಂದರೆ 2016ರಲ್ಲಿ ನಟ ರಣಬೀರ್ ಕಪೂರ್ ಜೊತೆಯಾಗಿ ಕರಣ್ ಜೋಹರ್ ಅವರ ಪ್ರಸಿದ್ಧ ಟಾಕ್ ಶೋ ‘ಕಾಫಿ ವಿದ್ ಕರಣ್’ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಅಂದು ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡ ಆ ಎಪಿಸೋಡ್ ಇಂದಿಗೂ ಸಖತ್ ಫೇಮಸ್. ಆ ಶೋನಲ್ಲಿ ಕರಣ್ ಜೋಹರ್ ಮತ್ತು ರಣಬೀರ್ ಕಪೂರ್ ಇಬ್ಬರೂ ಸೇರಿ ದೀಪಿಕಾ ಪಡುಕೋಣೆ ವಿಷಯ ಎತ್ತಿದಾಗ, ರಣವೀರ್ ಸಿಂಗ್ ಅವರು ತಮಾಷೆಯಾಗಿ “ಇವರಿಬ್ಬರು ಸೇರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ನಾನು ಇಲ್ಲಿ ಸಂತ್ರಸ್ತನಾಗುತ್ತಿದ್ದೇನೆ” ಎಂದು ಕಾಲೆಳೆದಿದ್ದರು.

ದೀಪಿಕಾ ವಿಷಯಕ್ಕೆ ಮುಜುಗರಕ್ಕೊಳಗಾಗಿದ್ದ ರಣವೀರ್

ಅಂದು ರಣವೀರ್ ಮತ್ತು ದೀಪಿಕಾ ಪಡುಕೋಣೆ ಡೇಟಿಂಗ್ ಮಾಡುತ್ತಿದ್ದರು (2018ರಲ್ಲಿ ಇವರ ಮದುವೆಯಾಯಿತು). ಅದಕ್ಕೂ ಮುನ್ನ ಚಿತ್ರರಂಗದ ಆರಂಭದ ದಿನಗಳಲ್ಲಿ ದೀಪಿಕಾ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಶೋನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ರಣಬೀರ್ ಕಪೂರ್, ‘ನಮ್ಮ ನಡುವೆ ಯಾವುದೇ ಮುಜುಗರವಿಲ್ಲ, ನಾವೆಲ್ಲರೂ ಒಟ್ಟಿಗೆ ಪಾರ್ಟಿ ಮಾಡುತ್ತೇವೆ. ಮುಂದೊಂದು ದಿನ ರಣವೀರ್-ದೀಪಿಕಾ ಜೋಡಿಗೆ ಹುಟ್ಟುವ ಮಕ್ಕಳು ನನ್ನನ್ನು ಒಬ್ಬ ನಟನಾಗಿ ಇಷ್ಟಪಡುವಂತಾಗಲಿ’ ಎಂದು ತಮಾಷೆ ಮಾಡಿದ್ದರು. ರಣಬೀರ್ ಅವರ ಈ ಹಠಾತ್ ಮಾತಿನಿಂದ ಮುಜುಗರಕ್ಕೊಳಗಾದ ರಣವೀರ್ ನಗುತ್ತಾ, ’ಇಂದು ರಣಬೀರ್ ಎಲ್ಲೆ ಮೀರಿ ಮಾತನಾಡುತ್ತಿದ್ದಾನೆ’ ಎಂದಿದ್ದರು.

ಅದೇ ಶೋನಲ್ಲಿ ರಣಬೀರ್ ಕಪೂರ್ ಅವರು ರಣವೀರ್ ಸಿಂಗ್ ಅವರ ನಟನಾ ಸಾಮರ್ಥ್ಯವನ್ನು ಮುಕ್ತವಾಗಿ ಹೊಗಳಿದ್ದರು. ಆ ಸಮಯದಲ್ಲಿ ರಣಬೀರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸತತ ಸೋಲು ಕಾಣುತ್ತಿದ್ದವು. ತಮ್ಮ ಸೋಲಿನ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದ ರಣಬೀರ್, “ನನ್ನ ಸಿನಿಮಾಗಳು ಓಡದೇ ಇದ್ದಾಗ ಗೊಂದಲವಾಗುವುದು ಸಹಜ. ಆದರೆ ರಣವೀರ್ ತೆರೆಮೇಲೆ ಮಿಂಚುವುದನ್ನು ನೋಡಿದಾಗ ನನಗೆ ಬೇಸರವಾಗುವುದಿಲ್ಲ, ಬದಲಿಗೆ ಮತ್ತಷ್ಟು ಪ್ರೇರಣೆ ಸಿಗುತ್ತದೆ. ‘ರಾಮ್-ಲೀಲಾ’, ‘ದಿಲ್ ಧಡಕನೆ ದೋ’ ಮತ್ತು ‘ಬಾಜೀರಾವ್ ಮಸ್ತಾನಿ’ ಚಿತ್ರಗಳಲ್ಲಿ ಆತನ ನಟನೆ ನೋಡಿ ನಾನು ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು ಎನಿಸಿತು. ಈ ಹುಡುಗನ ಪ್ರತಿಭೆಗೆ ಎಲ್ಲೆಯೇ ಇಲ್ಲ, ನನಗೆ ಆತನ ಸ್ಪರ್ಧೆಯ ಬಗ್ಗೆ ಕೊಂಚ ಹೆದರಿಕೆಯೂ ಇದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ನಷ್ಟ ಮಾಡಿ ಡಿಸ್ಕೌಂಟ್ ಕೇಳಿದ ರಣವೀರ್ ಸಿಂಗ್; ಸಂಧಾನ ಸಭೆಯಲ್ಲಿ ನಡೆದಿದ್ದೇನು?

ಒಂದೆಡೆ ಅಂದು ಬಾಲಿವುಡ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂದು ಕೊಂಡಾಡಲ್ಪಟ್ಟ ರಣವೀರ್ ಸಿಂಗ್ ಅವರ ಹಳೆಯ ಸ್ನೇಹದ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ‘ಡಾನ್ 3’ ವಿವಾದದಿಂದಾಗಿ ಅವರ ಸಿನಿ ಜರ್ನಿಗೆ ಭಾರಿ ಹಿನ್ನಡೆಯಾಗುವ ಆತಂಕ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:18 am, Thu, 28 May 26

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us