
ನಟಿ ಸಮಂತಾ ರುತ್ ಪ್ರಭು ಅವರ (Samantha) ವೈಯಕ್ತಿಕ ಜೀವನದ ಬಗ್ಗೆ ಹರಡಿದ್ದ ವದಂತಿಗಳಿಗೆ ಕೊನೆಗೂ ಕಾಲವೇ ಉತ್ತರ ನೀಡಿದೆ. ಎರಡನೇ ಮದುವೆಯಾದ ಕೇವಲ ಒಂದೇ ವರ್ಷದಲ್ಲಿ ಸಮಂತಾ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಸಂತಸದ ಸುದ್ದಿ ಹೊರಬೀಳುತ್ತಿದ್ದಂತೆ, ಹಿಂದೆ ಅವರ ಮೇಲೆ ನಡೆದಿದ್ದ ವೈಯಕ್ತಿಕ ದಾಳಿಗಳು ಮತ್ತು ಹರಡಿದ್ದ ಅಪಪ್ರಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.
ನಟ ನಾಗ ಚೈತನ್ಯ ಅವರಿಂದ ಸಮಂತಾ ವಿಚ್ಛೇದನ ಪಡೆದ ಸಂದರ್ಭದಲ್ಲಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮಟ್ಟದ ದ್ವೇಷವನ್ನು ಹಬ್ಬಿಸಲಾಗಿತ್ತು. ಸಮಂತಾಗೆ ಮಗು ಬೇಡವಾಗಿತ್ತು, ಅವರಿಗೆ ಅಫೇರ್ಗಳಿದ್ದವು ಮತ್ತು ಅವರು ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೆಲ್ಲಾ ಅತ್ಯಂತ ಕೀಳು ಮಟ್ಟದ ವದಂತಿಗಳನ್ನು ಹರಡಲಾಗಿತ್ತು. ನಟಿಯ ತೇಜೋವಧೆ ಮಾಡಲು ನೆಟ್ಟಿಗರು ಸತತ ಪ್ರಯತ್ನ ನಡೆಸಿದ್ದರು.
ಈ ವದಂತಿಗಳ ವಿರುದ್ಧ ಅಂದು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದರು. ‘ವಿಚ್ಛೇದನ ಎನ್ನುವುದೇ ಅತ್ಯಂತ ನೋವಿನ ಪ್ರಕ್ರಿಯೆ. ಅದರಿಂದ ಹೊರಬರಲು ನನಗೆ ಸಮಯ ಬೇಕಿದೆ. ಆದರೆ ನನ್ನ ಮೇಲೆ ವೈಯಕ್ತಿಕವಾಗಿ ನಿರಂತರ ದಾಳಿ ಮಾಡಲಾಗುತ್ತಿದೆ. ನನಗೆ ಅಫೇರ್ಗಳಿದ್ದವು, ನಾನು ಅವಕಾಶವಾದಿ, ನನಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ ಮತ್ತು ನಾನು ಅಬಾರ್ಷನ್ ಮಾಡಿಸಿಕೊಂಡಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ’ ಎಂದು ಬೇಸರ ಹೊರಹಾಕಿದ್ದರು. ಅಲ್ಲದೆ ಇಂತಹ ಯಾವುದೇ ಸುಳ್ಳು ಮಾತುಗಳಿಗೆ ತಾವು ಧೃತಿಗೆಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು.
ಇದನ್ನೂ ಓದಿ: ಪ್ರೆಗ್ನೆಂಟ್ ಆಗಿರುವುದು ನಿಜ; ಎಲ್ಲರ ಎದುರು ಗುಡ್ ನ್ಯೂಸ್ ನೀಡಿದ ಸಮಂತಾ
ಅಂದು ಸಮಂತಾ ವಿರುದ್ಧ ಹಬ್ಬಿಸಲಾಗಿದ್ದ ದ್ವೇಷ ಮತ್ತು ‘ಅವರಿಗೆ ಮಕ್ಕಳಾಗುವುದು ಇಷ್ಟವಿರಲಿಲ್ಲ’ ಎಂಬ ಸುಳ್ಳು ವದಂತಿಗಳಿಗೆ ಇದೀಗ ಅವರ ಪ್ರೆಗ್ನೆನ್ಸಿ ಸುದ್ದಿಯೇ ಸಾಕ್ಷಿಯಾಗಿದೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂಬ ಮಾತು ಸಮಂತಾ ಜೀವನದಲ್ಲಿ ನಿಜವಾಗಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಸಮಂತಾ ಪ್ರೆಗ್ನೆಂಟ್ ಎಂಬ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹಳೆಯ ವದಂತಿಗಳನ್ನು ನೆನಪಿಸಿಕೊಳ್ಳುತ್ತಿದ್ದು, ಅಂದು ನಟಿಯ ವಿರುದ್ಧ ಸುಳ್ಳು ಸುದ್ದಿ ಹರಡಿದವರಿಗೆ ಈಗಲಾದರೂ ನಾಚಿಕೆಯಾಗಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:31 am, Thu, 25 June 26