ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ

Pranit More comedian: ಕಮಿಡಿಯನ್ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ ತಾನು ‘ಬಳಸಿಕೊಂಡೆ’ ಎಂದು ವಿವರಿಸಿದ್ದ, ಪ್ರಣಿತ್ ಮೋರೆ ಸಹ ಅದನ್ನು ಎಂಜಾಯ್ ಮಾಡಿ ನಕ್ಕಿದ್ದರು, ಆ ಘಟನೆ ವಿವಾದವಾಗಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪ್ರಣಿತ್ ಮೋರೆ ಕ್ಷಮೆ ಕೇಳಿದ್ದಾರೆ. ಕನ್ನಡದ ನಟಿ ಸಂಯುಕ್ತಾ ಹೆಗ್ಡೆ, ಪ್ರಣಿತ್ ವಿರುದ್ಧ ಆಕ್ರೋಶಭರಿತ ಪೋಸ್ಟ್ ಹಂಚಿಕೊಂಡಿದ್ದಾರೆ.

ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ
Pranit More

Updated on: Jun 13, 2026 | 8:11 PM

ಕಮಿಡಿಯನ್​ಗಳು ಕೆಲವರು ಪದೇ ಪದೇ ಋಣಾತ್ಮಕ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಕೆಲ ಕಮಿಡಿಯನ್​​ಗಳು ಹಾಸ್ಯದ ಹೆಸರಲ್ಲಿ ತೀರ ಅಶ್ಲೀಲ, ನೈತಿಕವಲ್ಲದ ವಿಷಯಗಳನ್ನು ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಮತ್ತು ಕಾನೂನಿನಂದ ಹಾಗೂ ಸಮಾಜದಿಂದ ತೀವ್ರ ಟೀಕೆ ಮತ್ತು ವಿಮರ್ಶೆಗೆ ಒಳಗಾಗುತ್ತಿದ್ದಾರೆ. ಕಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ಇಂಥಹದ್ದೇ ಒಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಗ್​​ಬಾಸ್​​ಗೆ ಸಹ ಹೋಗಿ ಬಂದಿರುವ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ ತಾನು ‘ಬಳಸಿಕೊಂಡೆ’ ಎಂದು ವಿವರಿಸಿದ್ದ, ಪ್ರಣಿತ್ ಮೋರೆ ಸಹ ಅದನ್ನು ಎಂಜಾಯ್ ಮಾಡಿ ನಕ್ಕಿದ್ದರು, ಆ ಘಟನೆ ವಿವಾದವಾಗಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೋರೆ ಹಾಗೂ ಇನ್ನೂ ಇಬ್ಬರ ವಿರುದ್ಧ ದೂರು ಸಹ ದಾಖಲಾಗಿದೆ.

ಇದೀಗ ಪ್ರಣಿತ್ ಮೋರೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಕ್ಷಮೆ ಕೇಳಿದ್ದಾನೆ. ನಾನು ಆ ಕ್ಷಣದೊಂದಿಗೆ ಸನ್ನಿವೇಶದೊಂದಿಗೆ ಬೆರೆತು ಹೋಗಿ ನನ್ನತನ ಮರೆತೆ ಎಂದೆಲ್ಲ ಹೇಳಿದ್ದಾರೆ. ಆದರೆ ಈ ಕ್ಷಮೆಯನ್ನು ಹಲವರು ತಿರಸ್ಕರಿಸಿದ್ದಾರೆ. ಕನ್ನಡದ ನಟಿ, ‘ಕಿರಿಕ್ ಪಾರ್ಟಿ’ ಮೂಲಕ ಕಿರಿಕ್ ಹುಡುಗಿ ಎಂದೇ ಖ್ಯಾತವಾಗಿರುವ ಸಂಯುಕ್ತ ಹೆಗ್ಡೆ ಸಹ ಪ್ರಣಿತ್ ಮೋರೆ ಪೋಸ್ಟ್​​ಗೆ ಕಮೆಂಟ್ ಹಾಕಿದ್ದು, ಸರಿಯಾಗಿ ಝಾಡಿಸಿದ್ದಾರೆ.

‘ಪ್ರಣೀತ್, ಟೆಲಿಪ್ರಾಂಪ್ಟರ್ ಓದುವುದನ್ನು ನಿಲ್ಲಿಸು. ನೀನು ಆಕಸ್ಮಿಕವಾಗಿ ಏನನ್ನೂ ಹೇಳಿಲ್ಲ ಅಥವಾ ಯಾರೂ ನಿಮ್ಮನ್ನು ಪ್ರಚೋದಿಸಿಲ್ಲ, ನಿಮ್ಮ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ವರ್ತಿಸಿದ್ದೀರಿ. ಆ ವ್ಯಕ್ತಿ 370 ರೂ ಬಿರಿಯಾನಿ ಕತೆ ಹೇಳಿದಾಗ ನೀವು ವೇದಿಕೆ ಮೇಲೆ ಎಂಜಾಯ್ ಮಾಡಿ ನಕ್ಕ ರೀತಿ ನೋಡಿದ್ದೇವೆ. ನೀವು ಕೇಳಿದ ಅತ್ಯುತ್ತಮ ವಿಷಯ ಎಂಬಂತೆ ನೀವು ಅಂದು ವರ್ತಿಸಿದ್ದಿರಿ. ಇದು ನಾಚಿಕೆಗೇಡು, ಇದು ಅತ್ಯಾಚಾರ ಸಂಸ್ಕೃತಿ. ನಮ್ಮ ದೇಶದ ಹೆಚ್ಚಿನ ಮನಸ್ಸುಗಳು ಇದು ಸರಿ ಎಂದು ನಂಬುವಂತೆ ಕಂಡೀಷನಿಂಗ್ ಆಗಿವೆ, ಆದರೆ ಇದು ಸರಿಯಲ್ಲ. ನಿಮ್ಮ ಕ್ಷಮೆಯಾಚನೆಗೆ ಯಾವುದೇ ಅರ್ಥವಿಲ್ಲ. ನೀವು ಎಷ್ಟು ಅಸಹ್ಯಕರ ವ್ಯಕ್ತಿ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೇವಲ ನೀವು ಮತ್ತು ಆ ವ್ಯಕ್ತಿ ಮಾತ್ರವಲ್ಲ, ಆ ಕೋಣೆಯಲ್ಲಿದ್ದ ಪ್ರತಿಯೊಬ್ಬರೂ ಈ ಸಮಸ್ಯೆಗೆ ಕಾರಣರು. ಅತ್ಯಾಚಾರವನ್ನು ಸಾಮಾನ್ಯೀಕರಿಸದಿದ್ದಾಗ ಮಾತ್ರ ಹಾಸ್ಯವು ಹಾಸ್ಯವಾಗಿರುತ್ತದೆ. ಯಾವುದನ್ನಾದರೂ ಹಾಸ್ಯ ಎಂದು ಮಾರಾಟ ಮಾಡಿ, ಜನರು ಅದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಬೇಕೆಂದು ನಿರೀಕ್ಷಿಸಬೇಡಿ. ಪ್ರತಿ ಗಂಟೆಗೆ 4 ಅತ್ಯಾಚಾರಗಳು ವರದಿಯಾಗುವ ದೇಶದಲ್ಲಿ, ಇದು ಹಾಸ್ಯವಲ್ಲ’ ಎಂದು ಸಂಯುಕ್ತಾ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ:ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ

ಪ್ರಣಿತ್ ಮೋರೆ ಶೋಗೆ ಹೋಗಿದ್ದ ಹಿಮಾಂಶು ಹೆಸರಿನ ವ್ಯಕ್ತಿ, ತಾವು ಯುವತಿಯೊಬ್ಬಾಕೆಗೆ 370 ರೂಪಾಯಿಯ ಬಿರಿಯಾನಿ ಕೊಡಿಸಿ ಆ ಬಳಿಕ ಆಕೆಯನ್ನು ರೂಂಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡೆ ಎಂದಿದ್ದ. ಅವನ ಮಾತಿಗೆ ಪ್ರಣಿತ್ ಸೇರಿದಂತೆ ಅಲ್ಲಿದ್ದವರೆಲ್ಲ ನಕ್ಕಿದ್ದರು. ಆ ಬಳಿಕ ಅದೇ ಶೋನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು, ‘ತಾವು ಮತ್ತು ತಮ್ಮ ಸಹಪಾಠಿಗಳು ಆಸ್ಪತ್ರೆಗೆ ಬರುವ ಶವಗಳನ್ನ ಜನನಾಂಗವನ್ನು ನೋಡಿ ಅವುಗಳ ಆಕಾರವನ್ನು ನೋಡಿ ತಮಾಷೆ ಮಾಡಿಕೊಂಡು ನಗುವುದಾಗಿ ಹೇಳಿದ್ದರು. ಈ ಮೂವರ ಮೇಲೂ ಇದೀಗ ಎಫ್​​ಐಆರ್ ಆಗಿದೆ. ಮಹಾರಾಷ್ಟ್ರ ಸಿಎಂ ಸೇರಿದಂತೆ ಹಲವರು ಪ್ರಣಿತ್ ಮೋರೆ ಶೋನಲ್ಲಿ ನಡೆದಿರುವ ಈ ಅಶ್ಲೀಲ ಹಾಸ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us