ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ

Jaggesh: ನಟ ಜಗ್ಗೇಶ್ ಅವರು ಅಭಿಮಾನಿಗಳ ಜೊತೆ ಆಗಾಗ ತಮ್ಮ ಖಾಸಗಿ ಜೀವನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈಗ ಅವರೊಂದು ಬೇಸರದ ಸಂಗತಿ ತಿಳಿಸಿದ್ದಾರೆ.

ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ
ಜಗ್ಗೇಶ್​​

Updated on: Mar 19, 2021 | 2:15 PM

ನಟ ಜಗ್ಗೇಶ್​ ಓರ್ವ ಅಪ್ರತಿಮ ಕಲಾವಿದ ಎಂಬುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವರು ಮೂರು ದಶಕಗಳ ಹಿಂದೆಯೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದರು. ಈಗಲೂ ಬಹುಬೇಡಿಕೆಯ ಕಲಾವಿದನಾಗಿ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಬಾಲ್ಯದಲ್ಲಿ ಇದ್ದಾಗಲೇ ಅವರೊಳಗಿನ ಕಲಾವಿದನನ್ನು ಗುರುತಿಸಿದ್ದು ಯಾರು ಎಂಬ ಬಗ್ಗೆ ಜಗ್ಗೇಶ್​ ಈಗ ಮಾಹಿತಿ ನೀಡಿದ್ದಾರೆ. ತೀವ್ರ ನೋವಿನೊಂದಿಗೆ ಅವರು ಆ ವಿಚಾರವನ್ನು ನೆನಪು ಮಾಡಿಕೊಂಡಿದ್ದಾರೆ.

ಹೌದು, ಜಗ್ಗೇಶ್​ ಅವರು ಪ್ರೌಡಶಾಲಾ ವಿದ್ಯಾರ್ಥಿ ಆಗಿದ್ದಾಗಲೇ ಅವರೊಳಗಿನ ಕಲಾವಿದನ್ನು ಒಬ್ಬರು ಶಿಕ್ಷಕರು ಗುರುತಿಸಿದ್ದರು. ಅವರ ಹೆಸರು ಎಂ. ರಾಮಮೂರ್ತಿ. ಆದರೆ ಇಂದು ಅವರು ನಮ್ಮೊಂದಿಗಿಲ್ಲ. ಗುರುವಾರ ರಾತ್ರಿ 8.40ಕ್ಕೆ ಇಹಲೋಕ ತ್ಯಜಿಸಿದರು. ಟ್ವಿಟರ್​ ಮೂಲಕ ಈ ಬೇಸರದ ಸುದ್ದಿಯನ್ನು ಜಗ್ಗೇಶ್​ ತಿಳಿಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

‘ನನಗೆ ಗಣಿತ – ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದು ದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೇ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು. ಮಾರ್ಚ್​ 18ರಂದು ಶಿವನಲ್ಲಿ ಲೀನವಾದರು. ನಮ್ಮ #MRM SIR.. #BPIHS ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರ ಗೌಡ. ಓಂಶಾಂತಿ…’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ. ಎಂ. ರಾಮಮೂರ್ತಿ ಅವರಿಗೆ ಜಗ್ಗೇಶ್​ ರೀತಿಯೇ ಅನೇಕ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಎಂ. ರಾಮಮೂರ್ತಿ ನಿಧನದ ಬಗ್ಗೆ ಅವರ ಪುತ್ರ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. 60 ವರ್ಷಗಳ ಕಾಲ ಗಣಿತ ಮತ್ತು ವಿಜ್ಞಾನ ಪಾಠ ಮಾಡಿದ ಅನುಭವ ರಾಮಮೂರ್ತಿ ಅವರದ್ದಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವರು ಪಾಠ ಮಾಡಿದ್ದರು. ಬಿ.ಪಿ. ಇಂಡಿಯನ್​ ಪಬ್ಲಿಕ್​ ಸ್ಕೂಲ್​ ಮತ್ತು ನಾಗಸೇನಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಜಗ್ಗೇಶ್​ ಒಬ್ಬ ಕಲಾವಿದನಾಗುತ್ತಾರೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ರಾಮಮೂರ್ತಿ ಅವರು ಗುರುತಿಸಿದ್ದರು.

ಇದನ್ನೂ ಓದಿ: ನವರಸ ನಾಯಕ ಜಗ್ಗೇಶ್​ಗೆ ಹ್ಯಾಪಿ ಬರ್ತ್​​ಡೇ ಹೇಳಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್!

Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us