‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಅವರು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ತಮಗಾದ ಅನ್ಯಾಯದ ವಿರುದ್ಧ ಗುಡುಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

‘ಪ್ರಾಣ ಒತ್ತೆಯಿಟ್ಟು ಮಾಡಿದ ಸಿನಿಮಾಗೆ ಇಂಥ ಅನ್ಯಾಯ’! ನೋವು ತೋಡಿಕೊಂಡ ಖ್ಯಾತ ನಟ ಸಂಚಾರಿ ವಿಜಯ್​
ಸಂಚಾರಿ ವಿಜಯ್​- ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಲೋಗೋ
Edited By:

Updated on: Mar 09, 2021 | 12:29 PM

‘ನಾನು ಅವನಲ್ಲ ಅವಳು’ ಚಿತ್ರದ ನಟನೆಗಾಗಿ ‘ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ’ ಪಡೆದುಕೊಂಡ ಕಲಾವಿದ ಸಂಚಾರಿ ವಿಜಯ್​ ಅವರು ಒಂದು ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ‘ತಲೆದಂಡ’ ಶೀರ್ಷಿಕೆಯ ಈ ಚಿತ್ರಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅನ್ಯಾಯ ಆಗಿದೆ ಎಂದು ಸಂಚಾರಿ ವಿಜಯ್​ ಈಗ ಆರೋಪಿಸಿದ್ದಾರೆ.

ಮಾ.24ರಿಂದ 31ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದೆ. ಇದರ ಹಲವು ವಿಭಾಗಗಳಿಗೆ ಸಿನಿಮಾ ಆಯ್ಕೆ ನಡೆಯುತ್ತಿದೆ. ಸ್ಪರ್ಧೆಯ ವಿಭಾಗದಲ್ಲಿ ತೀವ್ರ ಪೈಪೋಟಿ ಇದೆ. ಆದರೆ ಈ ವಿಭಾಗದಲ್ಲಿ ಕನ್ನಡದ ‘ತಲೆದಂಡ’ ಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ. ಚಿತ್ರೋತ್ಸವ ಆಯೋಜಕರ ಈ ನಿರ್ಧಾರಕ್ಕೆ ಸಂಚಾರಿ ವಿಜಯ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಲೆದಂಡ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವುದು ಅಶೋಕ್​ ಕಶ್ಯಪ್​. ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರೋತ್ಸವದ ನಿಯಮದ ಪ್ರಕಾರ, ಅಕಾಡೆಮಿಯಲ್ಲಿ ಇರುವವರ ಮತ್ತು ಅವರ ಆಪ್ತರ ಸಿನಿಮಾಗಳನ್ನು ಸ್ಪರ್ಧೆಯ ವಿಭಾಗಕ್ಕೆ ಆಯ್ಕೆ ಮಾಡುವಂತಿಲ್ಲ. ಆದರೆ ಈ ನಿಯಮದಿಂದ ಒಂದು ಒಳ್ಳೆಯ ಸಿನಿಮಾಗೆ ತೊಂದರೆ ಆಗುತ್ತಿದೆ ಎಂಬುದು ಸಂಚಾರಿ ವಿಜಯ್​ ಅವರ ವಾದ.

‘ನಮ್ಮ ಸಿನಿಮಾ ಸೆನ್ಸಾರ್​ ಆಗಿರುವುದು 2020ರಲ್ಲಿ. ಅದು ಈ ವರ್ಷವೇ ಪ್ರದರ್ಶನ ಆಗಬೇಕು. ಮುಂದಿನ ವರ್ಷ ಅವಕಾಶ ಇರುವುದಿಲ್ಲ. ಬಹಳ ಕಷ್ಟಪಟ್ಟು, ಅವರಿವರ ಕೈ-ಕಾಲು ಹಿಡಿದು ಸಾಲ ಮಾಡಿ ಸಿನಿಮಾ ನಿರ್ಮಿಸಲಾಗಿದೆ. ಆದರೆ ನೀವು ಹೇಗೆ ಈ ಚಿತ್ರವನ್ನು ಕಾಂಪಿಟೀಷನ್​ ಸೆಕ್ಷನ್​ನಿಂದ ಹೊರಗೆ ಇಟ್ಟಿದ್ದೀರಿ? ಅದಕ್ಕೆ ಮಾನದಂಡಗಳೇನು? ಹೀಗೆ ಒಂದು ಸಿನಿಮಾಗೆ ಅನ್ಯಾಯ ಆಗುತ್ತಿದೆ. ಇದು ಸಾಮಾಜಿಕ ಸಂದೇಶ ಇರುವ ಸಿನಿಮಾ’ ಎಂದಿದ್ದಾರೆ ಸಂಚಾರಿ ವಿಜಯ್​.

‘ಮರಗಳನ್ನು ಕಡಿಯಬೇಡಿ. ಅರಣ್ಯ ನಾಶ ಮಾಡಿದರೆ ಜಾಗತಿಕವಾಗಿ ತಾಪಮಾನ ಹೆಚ್ಚುತ್ತದೆ ಎಂಬ ಮೆಸೇಜ್​ ಇದರಲ್ಲಿ ಇದೆ. ಇಂಥ ಸಿನಿಮಾವನ್ನು ಹೊರಗೆ ಇಟ್ಟಿರುವುದನ್ನು ತಿಳಿದು ಬಹಳ ಬೇಸರ ಆಯಿತು. ಚಿತ್ರೀಕರಣದ ವೇಳೆ ನನ್ನ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ಬದುಕಿದ್ದೇ ಹೆಚ್ಚು ಎಂಬಷ್ಟರಮಟ್ಟಿಗೆ ರಿಸ್ಕ್​ ತೆಗೆದುಕೊಂಡು ನಾನು ಕೆಲಸ ಮಾಡಿದ್ದೇನೆ. ಹೆಚ್ಚು-ಕಡಿಮೆ ಆಗಿದ್ದರೆ ನಾನೇ ಬದುಕಿ ಉಳಿಯುತ್ತಿರಲಿಲ್ಲ. ಇಂಥ ಸಿನಿಮಾ ಜನರಿಗೆ ತಲುಪಬೇಕು, ಆ ಚಿತ್ರಕ್ಕೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ನಾವು ಇಷ್ಟೆಲ್ಲ ರಿಸ್ಕ್​ ತೆಗೆದುಕೊಂಡು ಸಿನಿಮಾ ಮಾಡುತ್ತೇವೆ. ಆದರೆ ಚಿತ್ರೋತ್ಸವದಲ್ಲಿ ಅನ್ಯಾಯ ಆಗಿರುವುದರಿಂದ ನಮಗೆ ಬಹಳಷ್ಟು ನೋವಾಗಿದೆ’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಖಾಕಿ ದಾಳಿ

ರಾಬರ್ಟ್‌ ಸಿನಿಮಾನ್ನ ನಾನು ನೋಡುತ್ತೇನೆ, ನೀವೂ ನೋಡಿ – ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us