‘ಉತ್ತರಕಾಂಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಐಶ್ವರ್ಯಾ ರಾಜೇಶ್

‘ಉತ್ತರಕಾಂಡ’ ಚಿತ್ರದಲ್ಲಿ ದೊಡ್ಡ ತಾರಾಗಣ ಇದೆ. ಶಿವರಾಜ್​ಕುಮಾರ್​, ಡಾಲಿ ಧನಂಜಯ್​ ಜೊತೆ ನಟಿ ಐಶ್ವರ್ಯಾ ರಾಜೇಶ್​ ಕೂಡ ಪಾತ್ರವರ್ಗಕ್ಕೆ ಸೇರ್ಪಡೆ ಆಗಿದ್ದಾರೆ. ಅವರ ಪೋಸ್ಟರ್​ ಸಹ ಅನಾವರಣ ಆಗಿದೆ. ಉತ್ತರ ಕರ್ನಾಟಕದಲ್ಲಿ ಈ ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ. ರೋಹಿತ್​ ಪದಕಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆಡಿಷನ್​ ಮೂಲಕ ಅನೇಕ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

‘ಉತ್ತರಕಾಂಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಐಶ್ವರ್ಯಾ ರಾಜೇಶ್
ಐಶ್ವರ್ಯಾ ರಾಜೇಶ್, ಡಾಲಿ ಧನಂಜಯ್​

Updated on: Apr 23, 2024 | 7:55 PM

ಬಹುನಿರೀಕ್ಷಿತ ‘ಉತ್ತರಕಾಂಡ’ (Uttarakaanda) ಸಿನಿಮಾದ ಪಾತ್ರವರ್ಗ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಈಗ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಅವರು ‘ಉತ್ತರಕಾಂಡ’ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಆ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ನಟ ಡಾಲಿ ಧನಂಜಯ್​ (Daali Dhananjay) ಹಾಗೂ ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡದಿಂದ ಹೊಸ ಹೊಸ ಅಪ್​ಡೇಟ್​ಗಳು ಸಿಗುತ್ತಿವೆ.

‘ಉತ್ತರಕಾಂಡ’ ಸಿನಿಮಾದಲ್ಲಿ ನಟಿ ಐಶ್ವರ್ಯಾ ರಾಜೇಶ್​ ಅವರು ಡಾಲಿ ಧನಂಜಯ್​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಹೆಸರು ದುರ್ಗಿ. ಆ ಪಾತ್ರದ ಪೋಸ್ಟರ್​ ಕೂಡ ಬಿಡುಗಡೆ ಆಗಲಿದೆ. ಅಲ್ಲದೇ ಶೂಟಿಂಗ್​ ಸೆಟ್​ನಿಂದ ಒಂದು ಫೋಟೋ ಕೂಡ ಲಭ್ಯವಾಗಿದೆ. ವಿಜಯಪುರದಲ್ಲಿ ಈ ಸಿನಿಮಾಗೆ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಬಾಲಿವುಡ್​ನ ಅಮಿತ್ ತ್ರಿವೇದಿ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಅದ್ವೈತ್​ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಪ್ರೊಡಕ್ಷನ್ ವಿನ್ಯಾಸ ವಿಶ್ವಾಸ್‌ ಕಶ್ಯಪ್ ಅವರದ್ದು.

ಐಶ್ವರ್ಯಾ ರಾಜೇಶ್​ ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಿಚನ್’, ‘ವಡಾ‌ ಚೆನ್ನೈ’, ‘ದಿ ವರ್ಲ್ಡ್ ಫೇಮಸ್ ಲವರ್’, ‘ಟಕ್ ಜಗದೀಶ್’ ಮುಂತಾದ ಸಿನಿಮಾಗಳಿಂದ ಅವರ ಖ್ಯಾತಿ ಹೆಚ್ಚಾಗಿದೆ. ಐಶ್ವರ್ಯಾ ರಾಜೇಶ್​ ಅವರು ಈಗ ‘ಉತ್ತರಕಾಂಡ’ ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರಿಗೂ ಪರಿಚಯಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ದೂದ್​ ಪೇಡಾ ಈಗ ‘ಮಿರ್ಚಿ ಮಲ್ಲಿಗೆ’; ‘ಉತ್ತರಕಾಂಡ’ ಸಿನಿಮಾದಲ್ಲಿ ದಿಗಂತ್ ಹೊಸ ಅವತಾರ

ಆ್ಯಕ್ಷನ್ ಡ್ರಾಮಾ ಶೈಲಿಯ ‘ಉತ್ತರಕಾಂಡ’ ಸಿನಿಮಾಗೆ ರೋಹಿತ್ ಪದಕಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಾರ್ತಿಕ್ ಗೌಡ ಹಾಗೂ ಯೋಗಿ‌ ಜಿ. ರಾಜ್ ಅವರು ‘ಕೆಆರ್​ಜಿ ಸ್ಟೂಡಿಯೋಸ್‌’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚೈತ್ರಾ ಜೆ. ಆಚಾರ್, ರಂಗಾಯಣ ರಘು, ಯೋಗರಾಜ್ ಭಟ್, ಉಮಾಶ್ರೀ, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ, ಮಲಯಾಳಂ ನಟ ವಿಜಯ್ ಬಾಬು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us