Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​

ದೈಹಿಕ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಹಾಗಾದರೆ, ಇದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಟಿ ಅದ್ವಿತಿ ಶೆಟ್ಟಿ ಮಾತನಾಡಿದ್ದಾರೆ. ಇದರ ಜತೆಗೆ ಲಾಕ್​ಡೌನ್​ನಲ್ಲಿ ಏನೆಲ್ಲ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ.

Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​
ಅದ್ವಿತಿ ಶೆಟ್ಟಿ
Edited By:

Updated on: May 17, 2021 | 3:02 PM

ಕೊರೊನಾ ವೈರಸ್​ ಹೆಚ್ಚುತ್ತಿದೆ. ಇದರಿಂದ ಲಾಕ್​​ಡೌನ್​ ಘೋಷಣೆ ಮಾಡಲಾಗಿದೆ. ಹೀಗಾಗಿ, ಸಾಕಷ್ಟು ಜನರು ನಗರಗಳಲ್ಲಿ ಸಿಲುಕಿದ್ದಾರೆ. ಕೆಲವರಿಗೆ ಒಬ್ಬಂಟಿಯಾಗಿ ಇರುವ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಹಾಗಾದರೆ, ಇದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಟಿ ಅದ್ವಿತಿ ಶೆಟ್ಟಿ ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ. ಇದರ ಜತೆಗೆ ಲಾಕ್​ಡೌನ್​ನಲ್ಲಿ ಏನೆಲ್ಲ ಮಾಡುತ್ತಿದ್ದೇನೆ ಎಂಬ ವಿವರವನ್ನು ನೀಡಿದ್ದಾರೆ. 

 ಈ ಬಾರಿ ಹೊರ ಹೋಗಿಲ್ಲ..

ಕಳೆದ ಲಾಕ್​ಡೌನ್​ ಸಂದರ್ಭದಲ್ಲಿ ಅದ್ವಿತಿ ಮನೆಯಿಂದ ಹೊರಬಂದು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದರು. ಈ ಬಾರಿ ಅವರು ಮನೆಯಲ್ಲಿದ್ದುಕೊಂಡೇ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ‘ಕಳೆದ ಬಾರಿಯಂತೆ ಈ ಬಾರಿ ನಾನು ಹೊರಗೆ ಹೋಗ್ತಾ ಇಲ್ಲ. ಕಳೆದ ಬಾರಿ ಅಮ್ಮಾ ಮನೆಯಲ್ಲೇ ಇದ್ದರು. ಹೀಗಾಗಿ ಊಟಕ್ಕೆ ತೊಂದರೆ ಆಗ್ತಾ ಇರಲಿಲ್ಲ. ಆದರೆ, ಈಗ ಹಾಗಲ್ಲ. ಹೊರಗೆ ಹೋಗಿ ಬಂದು ಸ್ನಾನ ಮಾಡಿ, ಅಡುಗೆ ಮಾಡಿ ಊಟ ಮಾಡೋದು ಕಷ್ಟವಾಗುತ್ತದೆ. ಈ ಬಾರಿ ಪರಿಸ್ಥಿತಿ ಕೂಡ ತುಂಬಾ ಹದಗೆಟ್ಟಿದೆ. ಹೀಗಾಗಿ, ಮನೆಯಲ್ಲೇ ಕುಳಿತುಕೊಂಡು ಸಹಾಯ ಮಾಡುತ್ತಿದ್ದೇವೆ. ಯಾರಾದರೂ ಬೆಡ್​ ಬೇಕೆಂದು ಕಾಲ್​ ಮಾಡುತ್ತಾರೆ. ಬೇರೆಯವರಿಗೆ ಕೇಳಿ ಬೆಡ್​ ಒದಗಿಸುವ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ ಅದ್ವಿತಿ.

ಫಿಟ್​ನೆಸ್​ ಕಡೆ ಗಮನ

ನಟ-ನಟಿಯರು ಫಿಟ್​ನೆಸ್​ಗೆ ಹೆಚ್ಚು ಗಮನ ಕೊಡುತ್ತಾರೆ. ಇದಕ್ಕೆ ಅದ್ವಿತಿ ಶೆಟ್ಟಿ ಕೂಡ ಹೊರತಾಗಿಲ್ಲ. ಅವರು ದೇಹವನ್ನು ಫಿಟ್​ ಆಗಿಟ್ಟುಕೊಳ್ಳಲು ವ್ಯಾಯಾಮ​ ಮಾಡುತ್ತಿದ್ದಾರೆ. ‘ಶೂಟಿಂಗ್​ ಇದ್ದಿದ್ದರಿಂದ ಬ್ಯುಸಿ ಇದ್ದೆ. ಹೀಗಾಗಿ, ಫಿಟ್​ನೆಸ್​ ಕಡೆ ಗಮನೆ ಕೊಡೋಕೆ ಆಗಿರಲಿಲ್ಲ. ಈಗ ಲಾಕ್​ಡೌನ್​ ಟೈಮ್​ನಲ್ಲಿ ಫಿಟ್​ನೆಸ್​ ಕಡೆ ಗಮನ ಕೊಡುತ್ತಾ ಇದ್ದೇನೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಕೆ ಧ್ಯಾನ ಮಾಡುತ್ತಿದ್ದೇನೆ. ಫ್ಯಾನ್ಸ್​ಗಾಗಿ ವಿಡಿಯೋ ಮಾಡಿ ಹಾಕುತ್ತೇನೆ’ ಎಂದು ತಮ್ಮ ದಿನಚರಿ ಹೇಳಿಕೊಂಡರು ಅವರು.

 ಮಾನಸಿಕ ಆರೋಗ್ಯ ಮುಖ್ಯ

‘ನನಗೆ ಹಲ್ಲಿನ ಸರ್ಜರಿ ಆಯ್ತು. ಹೀಗಾಗಿ, 2 ತಿಂಗಳು ಮನೆಯಲ್ಲೇ ಇದ್ದೆ. ಮನೆಯಲ್ಲಿರುವ ಸಂದರ್ಭದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ. ನಾನು ನಿತ್ಯ ಸಾಂಗ್​ ಕೇಳುತ್ತೇನೆ. ಧ್ಯಾನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ವಿಡಿಯೋ ಮಾಡುತ್ತೇನೆ. ನನ್ನನ್ನು ನಾನು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅದ್ವಿತಿ.

‘ಕೊವಿಡ್​ ಸಂಕಷ್ಟದಲ್ಲಿ ಅನೇಕರು ಒಬ್ಬಂಟಿಯಾಗಿದ್ದಾರೆ. ಕೊರೊನಾ ಬಂದಿದ್ದರಿಂದ ಅನೇಕರು ಕ್ವಾರಂಟೈನ್​ ಆಗಿದ್ದಾರೆ. ಈ ಸಂದರ್ಭದಲ್ಲಿ ಮೆಂಟಲ್​ ಹೆಲ್ತ್​ ಮುಖ್ಯ. ನಮ್ಮ ಮನಸ್ಸನ್ನು ನಾವೇ ಸ್ಟ್ರಾಂಗ್​ ಮಾಡಿಕೊಳ್ಳಬೇಕು. ಹೀಗಾಗಿ, ಡಲ್​ ಆಗಿರುವ ಬದಲು ಖುಷಿಯಾಗಿರಬೇಕು. ಇದೊಂದು ಹಂತ ಅಷ್ಟೇ. ಏನೇ ಇದ್ದರೂ ಆಪ್ತರ ಜತೆ ಹಂಚಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ ಅದ್ವಿತಿ.

 ನಾವು ಲಕ್ಕಿ

‘ಹೊರಗೆ ಹೋಗೋದು ಅಂದರೆ ನಂಗೆ ಇಷ್ಟ. ಸರ್ಜರಿ ಹಾಗೂ ಶೂಟಿಂಗ್​ ಕಾರಣಕ್ಕೆ ಸುತ್ತಾಡೋಕೆ ಸಾಧ್ಯವಾಗಿರಲಿಲ್ಲ. ಹೋಟೆಲ್​ಗಳಿಗೆ ಹೋಗೋದನ್ನು ತುಂಬಾನೇ ಮಿಸ್​ ಮಾಡಿ ಕೊಳ್ತಾ ಇದೀನಿ. ಆದರೆ, ಹೊರಗೆ ತುಂಬಾ ಜನರು ಕಷ್ಟಪಡ್ತಾ ಇದಾರೆ. ಪರಿಸ್ಥಿತಿ ಬಿಗಡಾಯಿಸಿದೆ. ಈ ಸಂದರ್ಭದಲ್ಲಿ ನಾವು ಮನೆಯಲ್ಲಿ ಹಾಯಾಗಿದ್ದೇವೆ. ಇದಕ್ಕೆ ನಾವು ಲಕ್ಕಿ ಅನಿಸುತ್ತೆ’ ಎಂದಿದ್ದಾರೆ ಅದ್ವಿತಿ.

 ಶೂಟಿಂಗ್​ ಮಿಸ್ಸಿಂಗ್​

‘ನನ್ನ ಸಿನಿಮಾಗಳ ಶೂಟಿಂಗ್​ ಎಲ್ಲವೂ ಮುಗಿಯುವ ಹಂತದಲ್ಲಿತ್ತು. ಆದರೆ, ಕೊನೇ ಕ್ಷಣದಲ್ಲಿ ಹೀಗಾಯ್ತು. ಹೀಗಾಗಿ, ನನಗೆ ಬೇಸರ ಆಗ್ತಿದೆ. ಕೊವಿಡ್​ ಇಲ್ಲ ಎಂದರೆ ಎಲ್ಲಾ ಶೂಟಿಂಗ್​ ಮುಗಿದು ಹೋಗುತ್ತಿತ್ತು. ಈಗ ಕೊವಿಡ್​ನಿಂದ ಹೇರಿರೋ ಲಾಕ್​ಡೌನ್​ನಿಂದಾಗಿ ನಾನು ಸಿನಿಮಾ ಸೆಟ್​ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಅವರು.

ಇದನ್ನೂ ಓದಿ: Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us