ಭಿನ್ನವಾಗಿದೆ ‘ಅಪರಿಚಿತ’ ಲಿರಿಕಲ್​ ಸಾಂಗ್​; ‘ಸಾರಾಂಶ’ ಚಿತ್ರದ ಬಗ್ಗೆ ಹೆಚ್ಚಿತು ಕುತೂಹಲ

|

Updated on: Jan 21, 2024 | 3:49 PM

‘ಅಪರಿಚಿತ..’ ಹಾಡಿಗೆ ಉದಿತ್ ಹರಿತಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಸಾಹಿತ್ಯ ಬರೆದಿದ್ದಾರೆ. ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ‘ಸಾರಾಂಶ’ ಸಿನಿಮಾದ ಕಥೆಯ ಬಗ್ಗೆ ಸುಳಿವು ನೀಡುವಂತಹ ಸಾಲುಗಳು ಈ ಹಾಡಿನಲ್ಲಿವೆ. ಸಿನಿಮಾದ ಬಗ್ಗೆ ಕೌತುಕ ಹೆಚ್ಚಿಸಲು ಈ ಸಾಂಗ್​ ಸಹಕಾರಿ ಆಗಿದೆ.

ಭಿನ್ನವಾಗಿದೆ ‘ಅಪರಿಚಿತ’ ಲಿರಿಕಲ್​ ಸಾಂಗ್​; ‘ಸಾರಾಂಶ’ ಚಿತ್ರದ ಬಗ್ಗೆ ಹೆಚ್ಚಿತು ಕುತೂಹಲ
ದೀಪಕ್ ಸುಬ್ರಮಣ್ಯ, ಶ್ರುತಿ ಹರಿಹರನ್​
Follow us on

ಬಹುತೇಕ ಸಿನಿಮಾ ತಂಡಗಳು ಲಿರಿಕಲ್​ ಸಾಂಗ್​ಗಳನ್ನು ಪ್ರಸ್ತುತಪಡಿಸುವ ಶೈಲಿಯು ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತದೆ. ಅವುಗಳ ನಡುವೆ ಕೆಲವು ಚಿತ್ರತಂಡಗಳು ಮಾತ್ರ ವಿಶೇಷವಾಗಿ ಗುರುತಿಸಿಕೊಳ್ಳುತ್ತವೆ. ಸದ್ಯ ಕನ್ನಡದ ‘ಸಾರಾಂಶ’ ಸಿನಿಮಾ (Saramsha Movie) ಟೀಮ್​ ಕೂಡ ಡಿಫರೆಂಟ್​ ಆಗಿರುವ ಲಿರಿಕಲ್​ ವಿಡಿಯೋವನ್ನು ಜನರ ಮುಂದಿಟ್ಟಿದೆ. ಈ ಸಿನಿಮಾಗೆ ಸೂರ್ಯ ವಸಿಷ್ಠ ನಿರ್ದೇಶನ ಮಾಡುತ್ತಿದ್ದಾರೆ. ಈ ತಂಡದಿಂದ ‘ಅಪರಿಚಿತ..’ (Aparichitha) ಎಂಬ ಲಿರಿಕಲ್​ ಸಾಂಗ್​ ಬಿಡುಗಡೆ ಆಗಿದೆ. ಕನ್ನಡದ ಸಾಹಿತ್ಯ ಮತ್ತು ಅದಕ್ಕೆ ಇರುವ ಇಂಗ್ಲಿಷ್​ನ ಅರ್ಥವನ್ನು ಕೂಡ ಈ ಲಿರಿಕಲ್​ ವಿಡಿಯೋದಲ್ಲಿ ಬಿತ್ತರಿಸಲಾಗಿದೆ. ಒಟ್ಟಾರೆ ಇದರ ವಿನ್ಯಾಸ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು, ಮೊದಲ ಗೀತೆ ಈಗ ಬಿಡುಗಡೆ ಆಗಿದೆ.

ಒಂದು ವಿಶೇಷ ಪ್ರಯತ್ನವಾಗಿ ‘ಸಾರಾಂಶ’ ಚಿತ್ರ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ದೀಪಕ್ ಸುಬ್ರಮಣ್ಯ, ಶೃತಿ ಹರಿಹರನ್​, ಸೂರ್ಯ ವಸಿಷ್ಠ ಹಾಗೂ ಶ್ವೇತಾ ಗುಪ್ತ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರಾಮ್ ಮಂಜುನಾಥ್, ರವಿ ಭಟ್, ಪೃಥ್ವಿ ಬನವಾಸಿ, ಸತೀಶ್ ಕುಮಾರ್ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ಇದ್ದಾರೆ. ನಿರ್ದೇಶಕ ಸೂರ್ಯ ವಸಿಷ್ಠ ಹಾಗೂ ‘ಗಂಟುಮೂಟೆ’ ಖ್ಯಾತಿಯ ರೂಪಾ ರಾವ್ ಅವರು ಸಂಭಾಷಣೆ ಬರೆದಿದ್ದಾರೆ. ‘ಅಪರಿಚಿತ..’ ಹಾಡಿನಿಂದ ‘ಸಾರಾಂಶ’ ಸಿನಿಮಾ ನಿರೀಕ್ಷೆ ಮೂಡಿಸಿದೆ.

‘ಅಪರಿಚಿತ..’ ಹಾಡಿಗೆ ಉದಿತ್ ಹರಿತಾಸ್ (ಅಜ್ಞಾತ) ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಅಪರಿಚಿತ ಲಾಲಿ, ಹುಡುಕಿಹೆನು ನಿನ್ನಲಿ…’ ಎಂದು ಆರಂಭ ಆಗುವ, ಹೊಸತನದ ಫೀಲ್ ನೀಡುವ ಈ ಹಾಡನ್ನು ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿರುವ ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ‘ಸಾರಾಂಶ’ ಸಿನಿಮಾದ ಕಥೆಯ ಬಗ್ಗೆ ಸುಳಿವು ನೀಡುವಂತಹ ಸಾಲುಗಳು ಈ ಹಾಡಿನಲ್ಲಿವೆ. ಸಿನಿಮಾದ ಬಗ್ಗೆ ಕೌತುಕ ಹೆಚ್ಚಿಸಲು ಈ ಸಾಂಗ್​ ಸಹಕಾರಿ ಆಗಿದೆ.

ಇದನ್ನೂ ಓದಿ: ‘ಜರ್ನಿ ಆಫ್ ಬೆಳ್ಳಿ’: ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿ ಆಗಮನ

ಅಪರಾಜಿತ್ ಅವರು ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರದೀಪ್ ನಾಯಕ್ ಸಂಕಲನ ಮಾಡುತ್ತಿದ್ದಾರೆ. ‘ವಿಭಾ ಕಶ್ಯಪ್ ಪ್ರೊಡಕ್ಷನ್ಸ್’ ಮತ್ತು ‘ಕ್ಲ್ಯಾಪ್​ಬೋರ್ಡ್ ಪ್ರೊಡಕ್ಷನ್’ ಮೂಲಕ ರವಿ ಕಶ್ಯಪ್ ಮತ್ತು ಆರ್.ಕೆ. ನಲ್ಲಮ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯ ಆಗಿವೆ. ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ